
ನೆಲಮಂಗಲದಲ್ಲಿ ತಾಯಿಯೊಬ್ಬಳು ತನ್ನ 17 ತಿಂಗಳ ಮಗುವನ್ನು ಬಿಸಿನೀರಿನ ಹಂಡೆಯಲ್ಲಿ ಮುಳುಗಿಸಿ ಕೊಂದಿದ್ದಾಳೆ. ಗಂಡನ ಕುಡಿತದ ಚಟ ಮತ್ತು ಬಡತನದಿಂದ ಬೇಸತ್ತಿದ್ದಳು ಎನ್ನಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ನೆಲಮಂಗಲ (ಜು.7): ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಸೋಮವಾರ ಹೃದಯವಿದ್ರಾವಕ ಎನಿಸಿವಂಥ ಘಟನೆ ನಡೆದಿದೆ ಹೆತ್ತತಾಯಿಯೇ ತನ್ನ ನವಜಾತ ಶಿಶುವನ್ನು ದಾರುಣವಾಗಿ ಕೊಂದಿರುವ ಘಟನೆ ನಡೆದಿದೆ. ಗಂಡ ಕುಡಿತದ ದಾಸನಾಗಿರುವ ಸಿಟ್ಟಿಗೆ 17 ತಿಂಗಳ ಹಸುಗೂಸನ್ನು ಮನೆಯಲ್ಲಿನ ಬಿಸಿನೀರ ಹಂಡೆಯಲ್ಲಿ ಮುಳುಗಿಸಿ ಸಾಯಿಸಿದ್ದಾಳೆ.
ನೆಲಮಂಗಲದ ತಾಲೂಕು ವಿಶೇಷಪುರದ ನಾಗಕಲ್ಲು ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ.ಪವನ್ ಹಾಗೂ ರಾಧಾ ಕೆಲ ವರ್ಷಗಳ ಹಿಂದೆಯೇ ಮದುವೆಯಾಗಿದ್ದರು. 17 ತಿಂಗಳ ಹಿಂದೆ ರಾಧಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಗಂಡ ಬೇಜವಾಬ್ದಾರಿಯ ವರ್ತನೆಯಿಂದ ಬೇಸತ್ತಿದ್ದ ರಾಧಾ ಮಗುವಾದ ಬಳಿಕ ಸರಿಹೋಗುತ್ತಾನೆ ಎಂದುಕೊಂಡಿದ್ದರು.
ಆದರೆ, ಪವನ್ ಮನೆ ನಿಭಾಯಿಸದೇ ವಿಪರೀತ ಕುಡಿತದ ಚಟಕ್ಕೆ ಒಳಗಾಗಿದ್ದ. ಬಡತನದೊಂದಿಗೆ ಮಗುವಿನ ಆರೈಕೆ ಕಷ್ಟವಾದ ಹಿನ್ನೆಲೆಯಲ್ಲಿ ರಾಧಾ ಈ ಕೃತ್ಯ ಎಸಗಿದ್ದಾಳೆ. ಭಾನುವಾರ ತಡರಾತ್ರಿ ಮಗುವನ್ನು ಬಿಸಿನೀರ ಹಂಡೆಯ ಒಳಗೆ ಹಾಕಿ ಮುಚ್ಚಿದ್ದಾಳೆ. ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.