2026ನೇ ಇಸವಿಯ ಜನವರಿಯಿಂದ ಡಿಸೆಂಬರ್ ತನಕದ ವರ್ಷ ಭವಿಷ್ಯವನ್ನು ನೀಡಲಾಗುತ್ತಿದೆ. ಅದಕ್ಕೂ ಮುನ್ನ ದೀರ್ಘ ಕಾಲ ಒಂದು ರಾಶಿಯಲ್ಲಿ ಸಂಚಾರ ಮಾಡುವಂಥ ಗ್ರಹಗಳಾದ ಶನಿ, ರಾಹು- ಕೇತು ಹಾಗೂ ಗುರು ಗ್ರಹದ ಸಂಚಾರ ಈ ವರ್ಷ ಹೇಗಿದೆ ಎಂಬುದನ್ನು ತಿಳಿದುಕೊಂಡು ಬಿಡಿ. ಇಡೀ ವರ್ಷ ಶನಿ ಗ್ರಹವು ಮೀನ ರಾಶಿಯಲ್ಲಿಯೇ ಇರಲಿದೆ. ಇನ್ನು 2026ನೇ ಇಸವಿಯ ಜನವರಿ 1ನೇ ತಾರೀಕಿನಿಂದ ಜೂನ್ 1ನೇ ತಾರೀಕಿನ ತನಕ ಮಿಥುನ ರಾಶಿಯಲ್ಲಿ ಗುರು ಗ್ರಹ ಸಂಚಾರ ನಡೆಯುತ್ತಿದೆ. ಆ ನಂತರ ಅಕ್ಟೋಬರ್ 31 ನೇ ತಾರೀಕಿನಂದು ಸಿಂಹ ರಾಶಿಯನ್ನು ಪ್ರವೇಶಿಸುವ ಬೃಹಸ್ಪತಿಯು ವರ್ಷದ ಕೊನೆಯ ತನಕ, ಅಂದರೆ ಡಿಸೆಂಬರ್ ಮೂವತ್ತೇ ತಾರೀಕಿನ ತನಕ ಅದೇ ಸಿಂಹದಲ್ಲಿಯೇ ಇರಲಿದೆ. ಇನ್ನು ರಾಹು- ಕೇತು ಗ್ರಹಗಳು ಡಿಸೆಂಬರ್ 5ನೇ ತಾರೀಕಿನವರೆಗೆ ಕ್ರಮವಾಗಿ ಸಿಂಹ ಮತ್ತು ಕುಂಭ ರಾಶಿಯಲ್ಲಿ ಇರಲಿದ್ದು, ಆ ನಂತರ ಮಕರಕ್ಕೆ ರಾಹು ಹಾಗೂ ಕರ್ಕಾಟಕ ರಾಶಿಗೆ ಕೇತು ಗ್ರಹದ ಪ್ರವೇಶವಾಗುತ್ತದೆ.
ಸಾಮಾನ್ಯವಾಗಿ ಶನಿ ಗ್ರಹ ಒಂದು ರಾಶಿಯಲ್ಲಿ ಮೂವತ್ತು ತಿಂಗಳು, ಎರಡೂವರೆ ವರ್ಷ ಇರುತ್ತದೆ. ಗುರು ಗ್ರಹ ಒಂದು ವರ್ಷ ಹಾಗೂ ರಾಹು- ಕೇತುಗಳು ಹದಿನೆಂಟು ತಿಂಗಳು, ಒಂದೂವರೆ ವರ್ಷ ಒಂದು ರಾಶಿಯಲ್ಲಿ ಸಂಚರಿಸಲಿದೆ. ಹೀಗೆ ಈ ನಾಲ್ಕು ಗ್ರಹ ಸಂಚಾರದ ಆಧಾರದಲ್ಲಿ ವರ್ಷ ಭವಿಷ್ಯವನ್ನು ತಿಳಿಸಲಾಗುತ್ತಿದೆ. ನೆನಪಿನಲ್ಲಿಡಿ, ಗುರು ಗ್ರಹವು ಈ ಬಾರಿ ಅತಿಚಾರ ಸಂಚಾರ, ಅಂದರೆ ಸಾಮಾನ್ಯ ಸಂಚಾರ ವೇಗಕ್ಕಿಂತ ಹೆಚ್ಚು ವೇಗವಾಗಿ ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಅಲ್ಲಿಗೆ ಗುರು ಗ್ರಹ ಐದು ತಿಂಗಳ ಮಿಥುನ ರಾಶಿಯಲ್ಲಿ, ಆ ನಂತರದ ಐದು ತಿಂಗಳ ಉಚ್ಚ ಸ್ಥಿತಿಯ ಕರ್ಕಾಟಕದಲ್ಲಿ, ಎರಡು ತಿಂಗಳ ಸಿಂಹ ರಾಶಿಯಲ್ಲಿ ಸಂಚರಿಸುತ್ತದೆ.
ಅಶ್ವಿನಿ ನಕ್ಷತ್ರದ ಒಂದು, ಎರಡು, ಮೂರು ಹಾಗೂ ನಾಲ್ಕನೇ ಪಾದ, ಭರಣಿ ನಕ್ಷತ್ರದ ನಾಲ್ಕೂ ಪಾದ ಹಾಗೂ ಕೃತ್ತಿಕಾ ನಕ್ಷತ್ರ ಒಂದನೇ ಪಾದ ಸೇರಿ ಮೇಷ ರಾಶಿಯಾಗುತ್ತದೆ. ಈ ರಾಶಿಯ ಅಧಿಪತಿ ಕುಜ, ಈ ರಾಶಿಯಲ್ಲಿ ರವಿ ಗ್ರಹ ಉಚ್ಛ ಸ್ಥಿತಿಯಲ್ಲಿ ಮತ್ತು ಶನಿ ಗ್ರಹ ನೀಚ ಸ್ಥಿತಿಯಲ್ಲೂ ಇರುತ್ತದೆ.
ಮೇಷ ರಾಶಿಗೆ 2026ರ ವರ್ಷ ಭವಿಷ್ಯ ಹೀಗಿದೆ:
ಶನಿ ಗ್ರಹ ಗೋಚಾರ:
ವರ್ಷವಿಡೀ ನಿಮಗೆ ವ್ಯಯ ಸ್ಥಾನದಲ್ಲಿಯೇ ಶನೈಶ್ಚರನ ಸಂಚಾರ ಇರುತ್ತದೆ. ಈ ಸಾಲವನ್ನು ಹೆಚ್ಚು ಮಾಡುತ್ತೀರಿ. ಅದರಲ್ಲೂ ವ್ಯಾಪಾರ- ವ್ಯವಹಾರ, ಇಂತಹವುಗಳಿಗೆ ಸಾಲ ಮಾಡಿ ಹಣ ಹಾಕುತ್ತೀರಿ. ಜನ್ಮ ಜಾತಕದಲ್ಲಿ ಅದ್ಭುತ ಯೋಗಗಳು ಇದ್ದು, ಶನಿ ಗ್ರಹವೂ ಅತ್ಯುತ್ತಮ ಸ್ಥಾನದಲ್ಲಿದೆ, ದಶಾ- ಭುಕ್ತಿಯು ಅನುಕೂಲಕರವಾಗಿ ಇದ್ದಲ್ಲಿ ಮಾತ್ರ ವ್ಯಾಪಾರ- ವ್ಯವಹಾರಗಳು ಬರುತ್ತವೆ. ಆದರೆ ನಷ್ಟದ ಸಾಧ್ಯತೆಯೇ ಹೆಚ್ಚು. ಉದ್ಯೋಗದಲ್ಲಿಯಂತೂ ನೆಮ್ಮದಿ ಕಳೆದುಕೊಳ್ಳುವಂತೆ ಆಗಲಿದೆ. ನಿಮಗೆ ಭಾವನಾತ್ಮಕವಾಗಿ ಹತ್ತಿರವಾದಂತಹ ವ್ಯಕ್ತಿಗಳು ಬಹಳ ದೂರವಾಗಿದ್ದಾರೆ. ಹೇಗಾದರೂ ಹಣ ಉಳಿಸುವ- ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಕೆಲವು ಕಾನೂನು ತೊಡಕುಗಳು ನೀವಾಗಿಯೇ ಮೈ ಮೇಲೆ ಎಳೆದುಕೊಳ್ಳುವಂತೆ ಆಗಲಿದೆ. ವೈವಾಹಿಕ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಬಹಳ ಮುಖ್ಯ. ವಿವಾಹದ ಆಚೆಗಿನ ಸಂಬಂಧದ ಕಡೆಗೆ ಸೆಳೆತ ಏರ್ಪಡಬಹುದು. ಆದರೆ ಅಂಥವುಗಳಿಂದ ಕಡ್ಡಾಯವಾಗಿ ದೂರ ಇರಿ. ನಿಮ್ಮಲ್ಲಿ ಕೆಲವರು ಸ್ನೇಹ- ಸಲುಗೆಯಿಂದ ಇರುವುದು ಸಹ ನಾನಾ ಬಗೆಯಲ್ಲಿ ಸಮಸ್ಯೆ ತಂದೊಡ್ಡಬಹುದು. ನಿಮಗೆ ಸಂಬಂಧ ಪಡದ ವಿಚಾರದಲ್ಲಿ ತಲೆ ಹಾಕಬೇಡಿ. ಉದ್ಯೋಗ- ವ್ಯವಹಾರ ಸ್ಥಳದಲ್ಲಿ ನಿಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ಬದಲಾಯಿಸಲು ಹೋಗಬೇಡಿ. ಬೆನ್ನು ನೋವು, ಕಾಲು ನೋವು, ಹೃದಯಕ್ಕೆ ಸಂಬಂಧಿಸಿದ ಆರೋಗ್ಯದ ಕಡೆಗೆ ಹೆಚ್ಚು ನಿಗಾ ಮಾಡಬೇಕು.
ಇದನ್ನೂ ಓದಿ: ವಾರದ ಉದ್ಯೋಗ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ವೃತ್ತಿಜೀವನ ಹೇಗಿರಲಿದೆ ತಿಳಿಯಿರಿ
ಗುರು ಗ್ರಹ ಗೋಚಾರ:
ಜೂನ್ ತಿಂಗಳ ಶುರುವಿನ ತನಕ ಸಹೋದರ-ಸಹೋದರಿಯರ ಜೊತೆಗಿನ ಮನಸ್ತಾಪ- ಬೇಸರ, ವಾದ- ವಾಗ್ವಾದಗಳು ಹೆಚ್ಚಾಗುತ್ತವೆ. ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಸಾಧ್ಯವಾದಷ್ಟೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ವರ್ಚಸ್ಸು ಹಾಗೂ ಇತರರಿಗೆ ನಿಮ್ಮ ಬಗ್ಗೆ ಇರುವ ಗೌರವ ಉಳಿಸಿಕೊಳ್ಳಲು ಆದ್ಯತೆ ನೀಡಿ. ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕು ಎಂಬ ಕಾರಣಕ್ಕೆ ವಿವಾದಗಳನ್ನು ಸೃಷ್ಟಿಸಲು ಹೋಗಬೇಡಿ. ಅದೇ ವೇಳೆ ಇತರರನ್ನು ಮೆಚ್ಚಿಸುವುದಕ್ಕೋ ಓಲೈಸುವುದಕ್ಕೋ ಅಥವಾ ಪ್ರತಿಷ್ಠೆ ಕಾರಣಕ್ಕೋ ವಿಪರೀತ ಸಾಲ ಮಾಡಿ, ವಿಲಾಸಿ ವಸ್ತುಗಳನ್ನು ಖರೀದಿಸಲು ಮುಂದಾಗಬೇಡಿ. ಜೂನ್ ನಂತರ ಅಕ್ಟೋಬರ್ ಅಂತ್ಯದವರೆಗೆ ಕಾರು, ಬೈಕ್- ಸ್ಕೂಟರ್, ಸೈಟು- ಅಪಾರ್ಟ್ ಮೆಂಟ್, ಮನೆ ಹೀಗೆ ಒಂದಲ್ಲಾ ಒಂದು ಖರೀದಿಗೆ ಹಣ ಖರ್ಚು ಮಾಡಿದರೆ, ಸಾಲಗಾರರಾಗುವ ಯೋಗ ಇದೆ. ಸ್ನೇಹಿತರ ಜೊತೆ ವ್ಯವಹಾರ ಮಾಡುತ್ತೀರಿ ಅಂತಾದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳಿ. ಇತರರಿಗೆ ಜೋರು ಮಾಡಿ, ಬಾಯಿ ಮುಚ್ಚಿಸಿದರೆ ಆಯಿತು ಎಂಬ ಧೋರಣೆ ಬೇಡ. ನವೆಂಬರ್- ಡಿಸೆಂಬರ್ ಎರಡು ತಿಂಗಳು ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಆದಾಯದಲ್ಲಿ ಹಣಕಾಸಿನ ಹರಿವು ಸರಾಗವಾಗಿ ಆಗುವುದು ಮೊದಲಾದ ಶುಭ ಫಲಗಳನ್ನು ಕಾಣುತ್ತೀರಿ.
ರಾಹು-ಕೇತು ಗೋಚಾರ:
ಇಡೀ ವರ್ಷ ರಾಹು ಗ್ರಹ ನಿಮ್ಮ ರಾಶಿಯ ಹನ್ನೊಂದನೇ ಮನೆಯಲ್ಲಿ, ಕೇತು ಗ್ರಹ ಐದನೇ ಮನೆಯಲ್ಲಿ ಸಂಚಾರ ಮಾಡುತ್ತಾರೆ. ಭೂಮಿಗೆ ಪಾರ್ಟನರ್ ಶಿಪ್ ವ್ಯವಹಾರ ಮಾಡಿ ನಿಮ್ಮಲ್ಲಿ ಕೆಲವರು ವಿದೇಶಕ್ಕೆ ತಾತ್ಕಾಲಿಕವಾಗಿ ತೆರಳುವ ಯೋಗ ಇದೆ. ಇದರಿಂದ ಕೆಲವರಿಗೆ ಸ್ವಲ್ಪ ಪ್ರಮಾಣದಲ್ಲಿ ಸಾಲ ತೀರುವಂಥ ಸಾಧ್ಯತೆ ಇದೆ. ಷೇರು ಹಣ ತೊಡಗಿಸಿರುವವರು ವಿಪರೀತ ಆಸೆಗೆ ಬೀಳಬಾರದು. ಕ್ಯಾಲ್ಕುಲೇಟೆಡ್ ರಿಸ್ಕ್ ತೆಗೆದುಕೊಳ್ಳಬಹುದೇ ವಿನಾ ಸಾಲ ತಂದು ಹಣ ಹಾಕುವುದಂತೂ ಸುತರಾಂ ಮಾಡಬಾರದು. ಮಕ್ಕಳ ಆರೋಗ್ಯ, ಶಿಕ್ಷಣ, ಮದುವೆ ಮೊದಲಾದ ವಿಚಾರಗಳಲ್ಲಿ ಹೆಚ್ಚಿನ ನಿಗಾ ಮಾಡಬೇಕು. ಒಂದು ವೇಳೆ ಮೇಷ ರಾಶಿಯ ಹೆಣ್ಣುಮಕ್ಕಳು ಗರ್ಭ ಧರಿಸಿದರೆ ಹೆಚ್ಚು ಜಾಗ್ರತೆಯನ್ನು ವಹಿಸಬೇಕು. ನಿರಾಸಕ್ತಿ, ಮರೆವಿನ ಸಮಸ್ಯೆ ವಿಪರೀತ ಕಾಡಲಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಾ ಇರುವವರಿಗೆ ಅದು ಇನ್ನೂ ಉಲ್ಬಣಗೊಳ್ಳುತ್ತದೆ. ಈ ಹಿಂದೆ ನೀವು ಮಾಡಿದ ಕೆಲಸವೋ ವ್ಯವಹಾರವೋ ವ್ಯಾಪಾರವೋ ಅಥವಾ ಉದ್ಯೋಗದಲ್ಲಿಯೋ ನಿಮ್ಮ ಸಮಸ್ಯೆ ಎಂಬ ಆರೋಪ ಬಂದಿದೆ, ಕಾನೂನು-ಕೋರ್ಟ್- ಕಟಕಟೆ ಎಂದು ಅಲೆದಾಡುವಂತೆ ಆಗಬಹುದು, ಜಾಗ್ರತೆ.
ಪರಿಹಾರ: ದಶರಥ ಕೃತ ಶನಿಸ್ತೋತ್ರವನ್ನು ಪಠಣ ಮಾಡಿ ಅಥವಾ ಕೇಳಿಸಿಕೊಳ್ಳಿ ಹಾಗೂ ಗಣಪತಿ ಅಥರ್ವಶೀರ್ಷವನ್ನು ಕೇಳಿಸಿಕೊಳ್ಳಿ ಅಥವಾ ಪಠಣ ಮಾಡಿ.
ಲೇಖನ- ಸ್ವಾತಿ ಎನ್.ಕೆ.
ರಂದು ಪ್ರಕಟಿಸಲಾಗಿದೆ – 4:38 pm, ಶುಕ್ರ, 5 ಡಿಸೆಂಬರ್ 25