ಪ್ರಮುಖ ನಟ ರಣವೀರ್ ಸಿಂಗ್ (ರಣವೀರ್ ಸಿಂಗ್) ಅವರು ಇತ್ತೀಚೆಗೆ ದೊಡ್ಡ ಗೆಲುವು ಕಂಡಿರಲಿಲ್ಲ. ಈಗ ‘ಧುರಂಧರ’ ಅವರಿಗೆ ಭರ್ಜರಿ ಯಶಸ್ಸು ತಂದುಕೊಟ್ಟಿದೆ. ನೆಗೆಟಿವ್ ಟಾಕ್, ಸಿನಿಮಾದ ದೀರ್ಘ ಅವಧಿ ನಡುವೆಯೂ ಚಿತ್ರ ಗೆದ್ದು ಬೀಗಿದೆ. ಬಾಲಿವುಡ್ ಚಿತ್ರರಂಗಕ್ಕೆ ಗ್ರಹಣ ಹಿಡಿದಿದೆ ಎಂಬ ಪರಿಸ್ಥಿತಿ ನಿರ್ಮಾಣ ಆಗಿರುವಾಗ ‘ಧುರಂಧರ’ ಸಿನಿಮಾ ರಿಲೀಸ್ ಆಗಿ ಹೊಸ ಚೈತನ್ಯ ನೀಡಿದೆ. ಈ ಚಿತ್ರದಿಂದ ತಂಡ ಲಾಭ ಕಾಣುವ ನಿರೀಕ್ಷೆ ಇದೆ.
‘ಧುರಂಧರ’ ಸಿನಿಮಾ ಡಿಸೆಂಬರ್ 5 ರಂದು ರಿಲೀಸ್ ಆಯಿತು. ಡಿಸೆಂಬರ್ನಲ್ಲಿ ದೊಡ್ಡ ಬಜೆಟ್ ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರಿಗೆ ಹೆಚ್ಚು ಆದ್ಯತೆ ಇದೆ. ಇದಕ್ಕೆ ಕಾರಣ ಕ್ರಿಸ್ಮಸ್ ಹಾಗೂ ಹೊಸ ವರ್ಷದ ರಜೆಗಳು. ಇದು ಚಿತ್ರಕ್ಕೆ ಸಹಕಾರಿ ಆಗಲಿದೆ. ಸೋಮವಾರವೂ ‘ಧುರಂಧರ’ ಡಬಲ್ ಅಂಕಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸೋಮವಾರದ ಪರೀಕ್ಷೆಯಲ್ಲಿ ಸಿನಿಮಾ ಪಾಸ್ ಆಗಿದೆ.
ಧುರಂಧರ ಸಿನಿಮಾ ಮೊದಲ ದಿನ 23 ಕೋಟಿ ರೂಪಾಯಿ, ಶನಿವಾರ 32 ಕೋಟಿ ರೂಪಾಯಿ ಹಾಗೂ ಭಾನುವಾರ 43 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಮೂರೇ ದಿನಕ್ಕೆ ಚಿತ್ರ ನೂರು ಕೋಟಿ ರೂಪಾಯಿ ಗಳಿಸಿದೆ. ಸೋಮವಾರದ ಕಲೆಕ್ಷನ್ ಸರಿ ಸುಮಾರು 23 ಕೋಟಿ ರೂಪಾಯಿ ಎಂದು sacnilk ವರದಿ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 126 ಕೋಟಿ ರೂಪಾಯಿ ಆಗಿದೆ.
ಬಾಲಿವುಡ್ ಚಿತ್ರಗಳು ಸತತವಾಗಿ ಸೋಲುತ್ತಿರುವ ಈ ಸಂದರ್ಭದಲ್ಲಿ ಹಿಂದಿ ಚಿತ್ರವೊಂದು ಇಷ್ಟು ಸಂಗತಿ ದೊಡ್ಡ ಮಟ್ಟದಲ್ಲಿ ಗೆದ್ದಿರೋದು ಖುಷಿಯಾಯ್ತು. ಮುಂಬೈ, ದೆಹಲಿ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರ ಸಾಕಷ್ಟು ಶೋಗಳನ್ನು ಬಾಚಿಕೊಂಡಿದೆ.
ಇದನ್ನೂ ಓದಿ: ಅಬ್ಬಾ,’ಧುರಂಧರ’ ಭಾನುವಾರದ ಗಳಿಕೆ ಇಷ್ಟವಾಯಿತೇ? ಕೊನೆಗೂ ಗೆದ್ದ ರಣವೀರ್ ಸಿಂಗ್
ರಣವೀರ್ ಸಿಂಗ್ ಅವರು ‘ಧುರಂಧರ’ ಸಿನಿಮಾ ರಿಲೀಸ್ಗೂ ಮೊದಲು ದೈವವನ್ನು ಅನುಕರಿಸಲು ಹೋಗಿ ಪೇಚಿಗೆ ಸಿಲುಕಿದ್ದರು. ಅವರ ವಿರುದ್ಧ ದೂರು ಕೂಡ ದಾಖಲಾಯಿತು. ಆ ಬಳಿಕ ಸಿನಿಮಾದ ಅವಧಿ (3 ಗಂಟೆ 36 ನಿಮಿಷ) ಬಗ್ಗೆ ಚರ್ಚೆ ಆಯಿತು. ಸಿನಿಮಾಗೆ ಎ ಸರ್ಟಿಫಿಕೇಟ್ ಸಿಕ್ಕಿದ್ದು ಚಿತ್ರಕ್ಕೆ ಹಿನ್ನಡೆಯಾಯಿತು. ಎಲ್ಲದರ ಮಧ್ಯೆ ಸಿನಿಮಾ ಗೆದ್ದಿದೆ. ರಣವೀರ್ ಸಿಂಗ್ ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾ ಆಗುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.