
<p><strong>ಬೆಂಗಳೂರು :</strong> ನಗರದಲ್ಲೆಡೆ ಸಂಚರಿಸಿ ಸಾರ್ವಜನಿಕರಿಗೆ ಉಚಿತ ಕಾನೂನು ನೆರವು ನೀಡುವ ಮತ್ತು ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಎಂ.ಎಸ್. ರಾಮಯ್ಯ ಕಾನೂನು ಕಾಲೇಜು (ಆರ್ಇಎಲ್) ಸಹಯೋಗದಲ್ಲಿ ಆರಂಭಿಸಿರುವ ‘ನ್ಯಾಯರಥ-ಸಂಚಾರಿ ಕಾನೂನು ಸೇವಾ ಕ್ಲಿನಿಕ್ಗೆ (ವಾಹನ) ಶುಕ್ರವಾರ ಚಾಲನೆ ನೀಡಲಾಯಿತು.</p><h2><strong>ವಿಭು ಬಖ್ರು ಅವರು ಚಾಲನೆ</strong></h2><p>ಹೈಕೋರ್ಟ್ಆವರಣದಲ್ಲಿ ಆಯೋಜಿಸಲಾಗಿದ್ದ ನ್ಯಾಯರಥ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.</p><h3><strong>ನಗರದೆಲ್ಲೆಡೆ ಸಂಚರಿಸಿ ಉಚಿತ ಕಾನೂನು</strong></h3><p>ನ್ಯಾಯರಥ ವಾಹನವು ನಗರದೆಲ್ಲೆಡೆ ಸಂಚರಿಸಿ ಮಹಿಳೆಯರು, ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಬಡ-ದುರ್ಬಲ ವರ್ಗದವರಿಗೆ, ಕಾರ್ಮಿಕರಿಗೆ ಆಸಿಡ್ ದಾಳಿಗೆ ತುತ್ತಾದವರಿಗೆ, ಪ್ರಕೃತಿ ವಿಕೋಪದಿಂದ ಹಾನಿ ಅನುಭವಿಸಿದವರಿಗೆ, ಗುಂಪು-ಗಲಭೆಯ ಸಂತ್ರಸ್ತರಿಗೆ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ಸೇವೆ, ಕಾನೂನು ನೆರವು ಒದಗಿಸುವ ಬಗ್ಗೆ ಅರಿವು ಮೂಡಿಸಲಿದೆ. ಅಲ್ಲದೆ, ವಾಹನದಲ್ಲೇ ವಿಚಾರಣೆ ನಡೆಸಿ ಪ್ರಕರಣವನ್ನು ಇತ್ಯರ್ಥಪಡಿಸಲಾಗುತ್ತದೆ.</p><p>ವಿಚಾರಣೆ ಪ್ರಕ್ರಿಯೆ ನಡೆಸಲು ಅನುವಾಗುವಂತೆ ನ್ಯಾಯಾಧೀಶರ, ಕಕ್ಷಿದಾರರ ಮತ್ತು ವಕೀಲರ ಸೀಟಿನ ವ್ಯವಸ್ಥೆ ವಾಹನದಲ್ಲಿದೆ. ಇನ್ನೂ ದೂರ ಪ್ರದೇಶದಲ್ಲಿರುವ ಕಕ್ಷಿದಾರರ ವಾದ-ಅಹವಾಲು ಆಲಿಸಲು ವಿಡಿಯೋ ಕಾನ್ಫರೆನ್ಸ್ ಸೌಲಭ್ಯವಿದೆ.</p><p>ನ್ಯಾಯರಥವು ಬೆಂಗಳೂರು ನಗರದಲ್ಲಿ ಕರ್ನಾಟಕ ಕಾನೂನು ಸೇವೆಗಳಿಂದ ಆಯೋಜನೆಯಾಗುವ ಕಾರ್ಯಕ್ರಮದ ಸ್ಥಳಕ್ಕೆ ತೆರಳಿ, ನ್ಯಾಯದಾನ ಪ್ರಕ್ರಿಯೆ ಮಾಹಿತಿ ಪ್ರಸಾರ ಮಾಡಲಿದೆ. ಇತರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಮನವಿ ಮಾಡಿದರೆ, ಆಯಾ ಜಿಲ್ಲೆಗಳಿಗೆ ವಾಹನವನ್ನು ಕಳುಹಿಸಿಕೊಡಲಾಗುತ್ತದೆ. ಈ ಹಿಂದೆ ‘ಕರ್ನಾಟಕ ಸಾಕ್ಷರತಾ ರಥ’ ಎಂಬ ಹೆಸರಿನಲ್ಲಿ ವಾಹನವಿತ್ತು. ಅದನ್ನು ಸ್ಥಗಿತಗೊಳಿಸಲಾಗಿತ್ತು. ಅದರ ಬದಲಿಗೆ ಈಗ ನ್ಯಾಯರಥವನ್ನು ಆರಂಭಿಸಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p><p>ಕಾರ್ಯಕ್ರಮದಲ್ಲಿ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅನುಶಿವರಾಮನ್, ಗೋಕುಲ ಎಜುಕೇಷನ್ ಫೌಂಡೇಷನ್ ಕಾರ್ಯದರ್ಶಿ ಎಂ.ಆರ್. ಆನಂದ ರಾಮ್, ರಾಮಯ್ಯ ಕಾನೂನು ಕಾಲೇಜು ಪ್ರಾಂಶುಪಾಲ ಪ್ರೊ.ಡಾ. ಉಮಾ ಮಹೇಶ್ ಸತ್ಯನಾರಾಯಣ್, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. </p>
Source link
ಬೆಂಗಳೂರು : ನಗರದಲ್ಲಿ ನ್ಯಾಯರಥ-ಸಂಚಾರಿ ಕಾನೂನು ಸೇವಾ ಕ್ಲಿನಿಕ್