
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವೈದ್ಯನೊಬ್ಬ ಶಂಕತ ಉಗ್ರರಿಗೆ ಅನಧಿಕೃತವಾಗಿ ಮೊಬೈಲ್ಗಳನ್ನು ಪೂರೈಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಮೂಲಕ ಖೈದಿಗಳಿಗೆ ನೆರವು ನೀಡುತ್ತಿದ್ದ ಆರೋಪ ಕೇಳಿಬಂದಿದ್ದು, ಜೈಲಿನ ಭದ್ರತಾ ವ್ಯವಸ್ಥೆಯನ್ನು ಪ್ರಶ್ನಿಸಲಾಗುತ್ತಿದೆ.
ಬೆಂಗಳೂರು (ಜು.09): ಸಿಲಿಕಾನ್ ಸಿಟಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭದ್ರತಾ ವ್ಯವಸ್ಥೆಯೇ ಪ್ರಶ್ನೆಗೊಳಗಾಗುವಂತಹ ಭಾರೀ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಜೈಲಿನಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದ ಡಾ. ನಾಗರಾಜ್ ಎಂಬುವವರು ನೂರಾರು ಖೈದಿಗಳಿಗೆ ಹಾಗೂ ಉಗ್ರರಿಗೆ ಅನಧಿಕೃತವಾಗಿ ಮೊಬೈಲ್ಗಳನ್ನು ಪೂರೈಕೆ ಮಾಡುತ್ತಿದ್ದ ಪ್ರಕರಣವನ್ನು ಎನ್ಐಎ ತನಿಖೆ ಬಹಿರಂಗಪಡಿಸಿದೆ.
ವೈದ್ಯನ ಮುಖವಾಡದ ಹಿಂದೆ ಮೊಬೈಲ್ ಮಾಫಿಯಾ!
ಜೈಲಿನೊಳಗೆ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜ್, ತನ್ನ ಸಹಾಯಕಿ ಪವಿತ್ರನ ಸಹಾಯದಿಂದ ಜೈಲಿಗೆ ಸ್ಕೂಟರ್ ಮುಖಾಂತರ ಮೊಬೈಲ್ಗಳನ್ನು ಸಾಗಿಸಿ, ₹10 ಸಾವಿರ ಮೌಲ್ಯದ ಫೋನ್ಗಳನ್ನು ₹50 ಸಾವಿರಕ್ಕೆ ಖೈದಿಗಳಿಗೆ ಮಾರಾಟ ಮಾಡುತ್ತಿದ್ದನು. ಈ ಮೊಬೈಲ್ಗಳು ನೇರವಾಗಿ ಶಂಕಿತ ಉಗ್ರಗಾಮಿಗಳು, ಡ್ರಗ್ ಪೆಡ್ಲರ್ಗಳು ಮತ್ತು ರೌಡಿಶೀಟರ್ಗಳ ಕೈಗೆ ತಲುಪುತ್ತಿದ್ದವು ಎಂಬುದು ತನಿಖೆಯ ಮಾಹಿತಿಯಿಂದ ತಿಳಿದುಬಂದಿದೆ.
ಉಗ್ರ ಸಲ್ಮಾನ್ ಬಂಧನದಿಂದ ಬಯಲಾದ ಕತೆ
ಈ ಹಿಂದೆ ಸುಲ್ತಾನ್ ಪಾಳ್ಯ ಹಾಗೂ ಭದ್ರಪ್ಪ ಲೇಔಟ್ ಪ್ರದೇಶದಲ್ಲಿ ಶಂಕಿತ ಉಗ್ರರ ಮನೆ ಮೇಲೆ ಸಿಸಿಬಿ ದಾಳಿ ನಡೆದಿತ್ತು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಉಗ್ರ ಸಲ್ಮಾನ್ನನ್ನು ಎನ್ಐಎ (NIA) ಮೂರು ತಿಂಗಳ ಹಿಂದೆ ಬಂಧಿಸಿತು. ತನಿಖೆಯಲ್ಲಿ ಭಯಾನಕ ಮಾಹಿತಿ ಹೊರಬಿದ್ದಿದ್ದು, ಸಲ್ಮಾನ್ನ ಪಲಾಯನಕ್ಕೆ ಎಎಸ್ಐ ಚಾನ್ ಪಾಷಾ ನೆರವಾಗಿದ್ದನು. ಜೈಲಿನಿಂದಲೇ ಉಗ್ರ ಟಿ. ನಾಸೀರ್ ಮತ್ತು ಗ್ಯಾಂಗ್ ಸಂಚು ರೂಪಿಸುತ್ತಿದ್ದರೆಂಬ ಮಾಹಿತಿಗಳು ಕೂಡ ಬಹಿರಂಗವಾಗಿವೆ.
ಪರಪ್ಪನ ಅಗ್ರಹಾರದಲ್ಲಿ ಭಯೋತ್ಪಾದನೆಗೆ ನೇರ ನೆರವು?
ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿರುವ ಒಟ್ಟು 100ಕ್ಕೂ ಹೆಚ್ಚು ಖೈದಿಗಳಿಗೆ ಮೊಬೈಲ್ ಪೂರೈಕೆ ಮಾಡಿದ ಡಾ. ನಾಗರಾಜ್ ವಿರುದ್ಧ ಎನ್ಐಎ ಉನ್ನತ ಮಟ್ಟದ ತನಿಖೆ ನಡೆಸುತ್ತಿದೆ. ವೈದ್ಯಕೀಯ ಸೇವೆಯ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಜೈಲಿನೊಳಗೆ ಅಪರಾಧ ಜಾಲವನ್ನು ಬೆಳೆಸಿದ ಈ ವೈದ್ಯನ ವಿರುದ್ಧ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಾಯ ಉಂಟಾಗಿದೆ.
ಸಂವೇದನಾಶೀಲ ಜೈಲು… ಆತಂಕ ಉಂಟುಮಾಡಿದ ಮಾಹಿತಿ!
ರಾಜ್ಯ ಮತ್ತು ದೇಶಕ್ಕೆ ಬೇಕಾಗಿರುವ ಪ್ರಮುಖ ಉಗ್ರರು ಮತ್ತು ಅಪರಾಧಿಗಳನ್ನು ಸೆರೆ ಹಿಡಿದು ಪರಪ್ಪನ ಅಗ್ರಹಾರ ಜೈಲಿನಲ್ಲಿಡಲಾಗಿದೆ. ಹೀಗಾಗಿ ರಾಜ್ಯದ ಅತ್ಯಂತ ಭದ್ರ ಜೈಲು ಎಂದು ಇದನ್ನು ಪರಿಗಣಿಸಲಾಗಿದೆ. ಆದರೆ, ಇಂತಹ ಜೈಲಿನೊಳಗೆ ವೈದ್ಯಕೀಯ ಸೇವಕನಾಗಿ ಕಾರ್ಯನಿರ್ವಹಿಸುತ್ತಿರುವ ಈ ಡಾ.ನಾಗರಾಜ್ ನೇರವಾಗಿ ಅಪರಾಧಿಗಳಿಗೆ ದೇಶದ ವಿರುದ್ಧವೇ ಕುಕೃತ್ಯ ನಡೆಸಲು ನೆರವು ನೀಡುತ್ತಿದ್ದಾರೆ ಎಂಬುದು ಭದ್ರತಾ ವ್ಯವಸ್ಥೆಯ ವಿಫಲತೆಗೆ ಸಾಕ್ಷಿಯಾಗಿದೆ ಎಂಬ ಗಂಭೀರ ಪ್ರಶ್ನೆ ಎಬ್ಬಿಸಿದೆ.
ಭದ್ರತೆ ಎಲ್ಲಿದೆ? ಜವಾಬ್ದಾರಿ ಯಾರದು?
ಈ ಪ್ರಕರಣ ರಾಜ್ಯದ ಜೈಲು ವ್ಯವಸ್ಥೆಯ ಮೇಲಿರುವ ನಂಬಿಕೆಗೆ ಭಾರೀ ಪೆಟ್ಟಾಗಿ ಪರಿಣಮಿಸಿದೆ. ಜೈಲಿನೊಳಗೆ ಆಪರೇಷನ್ಗಳನ್ನು ನಡೆಸುತ್ತಿರುವ ಉಗ್ರಗಾಮಿಗಳು ಮತ್ತು ಅವರನ್ನು ಬೆಂಬಲಿಸುತ್ತಿರುವ ಇಂತಹ ವೈದ್ಯರ ಜಾಲವನ್ನು ದುರಸ್ತಿ ಮಾಡುವ ಕೆಲಸವನ್ನು ತನಿಖಾ ಏಜೆನ್ಸಿಗಳು ಈಗ ಕೈಗೊಂಡಿವೆ.