
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಕಿಶನ್ ಪಾತ್ರದ ಮೂಲಕ ಎಂಟ್ರಿ ಕೊಟ್ಟಿರೋ ನಟ ರಾಜೇಶ್ ಧ್ರುವ ಬಿಗ್ಬಾಸ್ ಆಫರ್ ರಿಜೆಕ್ಟ್ ಮಾಡಿದ್ಯಾಕೆ? ಕಿರುತೆರೆಯ ಇನ್ನೊಂದು ಮುಖದ ಬಗ್ಗೆ ಹೇಳಿದ್ದೇನು?
ಅಗ್ನಿಸಾಕ್ಷಿಯ ಮೂಲಕ ಜನಪ್ರಿಯರಾಗಿದ್ದ ನಟ ರಾಜೇಶ್ ಧ್ರುವ ಅವರು ಇದೀಗ ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಕಿಶನ್ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ಸದ್ಯ ಈ ಸೀರಿಯಲ್ನಲ್ಲಿ ಕಿಶನ್ ಮತ್ತು ಆತ ಪ್ರೀತಿಸಿದ ಪೂಜಾಳ ಮದುವೆಯ ವಿವಾದ ಶುರುವಾಗಿದೆ. ಇವರಿಬ್ಬರ ಮದುವೆಯನ್ನು ತಪ್ಪಿಸಲು ಏನಾದರೂ ಕಿತಾಪತಿ ಮಾಡುವ ಸಾಹಸ ಮಾಡುತ್ತಿದ್ದಾರೆ ಕಿಶನ್ನ ಮನೆಯವರು. ಅದೇ ರೀತಿ ನಿಜ ಜೀವನದಲ್ಲಿಯೂ ಹಿಂದೊಮ್ಮೆ ಕಿಶನ್ ಅರ್ಥಾತ್ ರಾಜೇಶ್ ಅವರು ಅಸಲಿ ಜೀವನದಲ್ಲಿಯೂ ನೋವನ್ನು ಉಂಡವರೇ. ಇವರ ಪತ್ನಿ ರಾಜೇಶ್ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದರು. ಕೊನೆಗೆ ರಾಜೇಶ್ ಅವರು ಪತ್ನಿಗೆ ಕುಡಿಯುವ ಚಟವಿದ್ದ ವಿಡಿಯೋ ರಿಲೀಸ್ ಮಾಡಿದ್ದರು. ಕೊನೆಗೆ ಈ ವಿವಾದ ಅಲ್ಲಿಗೇ ತಣ್ಣಗಾಗಿದೆ. ಇದೀಗ ಕಿರುತೆರೆಯಲ್ಲಿ ಬಿಜಿಯಾಗಿರುವ ರಾಜೇಶ್ ಅವರು ತಮ್ಮ ಜೀವನದ ಹಲವು ವಿಚಾರಗಳನ್ನು ಯುಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.
ವರದಕ್ಷಿಣೆ ಕಿರುಕುಳದ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ರಾಜೇಶ್ ಅವರು ಅದನ್ನೆಲ್ಲಾ ನಾನು ಮನಸ್ಸಿನಿಂದ ಕಿತ್ತು ಹಾಕಿದ್ದೇನೆ. ಆ ಬಗ್ಗೆ ಮಾತನಾಡಲು ಇಷ್ಟ ಇಲ್ಲ ಎನ್ನುತ್ತಲೇ ಸದ್ಯದ ಕಿರುತೆರೆಯ ವಿಷಯದ ಬಗ್ಗೆ ಹೇಳಿದರು. ಕಿರುತೆರೆಯಲ್ಲಿ ನಟ ಎಂದ ಮಾತ್ರಕ್ಕೆ ಒಳ್ಳೆಯ ಪೇಮೆಂಟ್ ಇದೆ, ಒಂದರ ಮೇಲೊಂದರಂತೆ ಅವಕಾಶ ಸಿಗುತ್ತಿದೆ. ಇವರೇನು ಕಡಿಮೆ ಎಂದೆಲ್ಲಾ ಸಾಮಾನ್ಯ ಜನರು ಅಂದುಕೊಳ್ಳುತ್ತಾರೆ. ಆದರೆ ಅಸಲಿಗೆ ಇದರ ಕಥೆಯೇ ಬೇರೆ ಇದೆ ಎನ್ನುತ್ತಲೇ ಕಿರುತೆರೆಯ ಇನ್ನೊಂದು ಮುಖವನ್ನು ಬಯಲು ಮಾಡಿದ್ದಾರೆ ರಾಜೇಶ್. ಸೀರಿಯಲ್ಗಳಲ್ಲಿ ಹೀರೋ ಆದರೆ ಅವರಿಗೆ ಚೆನ್ನಾಗಿ ದುಡ್ಡು ಬರತ್ತೆ. ಆದರೆ ಉಳಿದ ಕಲಾವಿದರ ಬದುಕು ಬಲು ಕಷ್ಟ. ಕೆಲ ಪ್ರೊಡಕ್ಷನ್ ಹೌಸ್ನವರು ಪೇಮೆಂಟ್ ಕೊಡುತ್ತಾರೆ. ಆದರೆ ಹೆಚ್ಚಿನ ಪ್ರೊಡಕ್ಷನ್ ಹೌಸ್ನಿಂದ ಹಣ ಬರುವುದು ತುಂಬಾ ಕಷ್ಟ. ಕಮಿಟ್ ಆಗಬೇಕಾದರೆ ಅವರ ಅಗ್ರಿಮೆಂಟ್ಗಳನ್ನು ನಾವು ಸೈನ್ ಮಾಡಿಕೊಂಡು ಹೋಗಬೇಕು. ಎರಡು ಅಥವಾ ಮೂರು ತಿಂಗಳಿಗೆ ಒಮ್ಮೆ ನಿಮ್ಮ ಪೇಮೆಂಟ್ ಬರುತ್ತದೆ. ಜನವರಿಯಲ್ಲಿ ನಾವು ಶೂಟಿಂಗ್ ಮಾಡಿದ್ರೆ ಆ ಪೇಮೆಂಟ್ ಮಾರ್ಚ್ ಕೊನೆಯಲ್ಲಿ ಬರುತ್ತೆ ಎಂದು ಹೇಳಿದ್ದಾರೆ.
ಇದೇ ವೇಳೆ ಬಿಗ್ಬಾಸ್ ಮನೆಗೆ ಆಫರ್ ಬಂದಿತ್ತಾ ಎನ್ನುವ ಪ್ರಶ್ನೆಗೆ ಹಿಂದೊಮ್ಮೆ ಬಂದಿತ್ತು. ಆದರೆ ನನಗೆ ಹೋಗುವ ಮನಸ್ಥಿತಿ ಇರಲಿಲ್ಲ. ಆದ್ದರಿಂದ ರಿಜೆಕ್ಟ್ ಮಾಡಿಬಿಟ್ಟೆ. ಮುಂದೆ ಏನಾದ್ರೂ ಸಿಕ್ಕರೆ ಯೋಚನೆ ಮಾಡುತ್ತೇನೆ ಎಂದಿದ್ದಾರೆ. ಅಷ್ಟಕ್ಕೂ ಇದೀಗ ಬಿಗ್ಬಾಸ್ 12ನೇ ಸೀಸನ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ರಾಜೇಶ್ ಅವರಿಗೆ ಅವಕಾಶ ಸಿಗಬಹುದಾ ಎನ್ನುವ ಬಗ್ಗೆಯೂ ಚರ್ಚೆ ಶುರುವಾಗಿದೆ.
ಇದೇ ವೇಳೆ ಸೀರಿಯಲ್ಗಳು ಬೇರೆ ಭಾಷೆಗಳಿಂದ ರಿಮೇಕ್ ಆಗುತ್ತಿರುವ ಬಗ್ಗೆಯೂ ವಿಷಾದ ವ್ಯಕ್ತಪಡಿಸಿದ್ದಾರೆ ರಾಜೇಶ್. ಇದಕ್ಕೆ ಕಾರಣ, ರೀಮೇಕ್ಗಳಲ್ಲಿ ನಟರಿಗೆ ಅವರ ಪ್ರತಿಭೆ ಅನಾವರಣಗೊಳಿಸುವ ಅಷ್ಟೊಂದು ಆದ್ಯತೆ ಇಲ್ಲದೇ ಇರುವುದು. ‘‘ರಿಮೇಕ್ ಬಗ್ಗೆ ಹೇಳುವುದಾದರೆ, ಇಂಥ ಸೀರಿಯಲ್ಗಳಿಗೆ ಒಂದು ಬಾರ್ಡರ್ ಇರುತ್ತದೆ. ರೈಟರ್ ಅಥವಾ ನಟ ಅದನ್ನು ಚಾಚೂ ತಪ್ಪದೇ ಪಾಲಿಸಬೇಕು. ಮೀರಿ ಹೋಗುವಂತಿಲ್ಲ. ನಾನು ಇದಾಗಲೇ ಮೂರ್ನಾಲ್ಕು ರಿಮೇಕ್ ಸೀರಿಯಲ್ಗಳನ್ನು ಮಾಡಿದ್ದೇನೆ. ತುಂಬಾ ಕೆಟ್ಟ ಅನುಭವ. ನಾನು ಒಂದು ಸೀರಿಯಲ್ ಅನ್ನು ಮಾಡುತ್ತಿದ್ದೆ. ಹೇಗೆ ಅಂದ್ರೆ, ತಮಿಳಿನಲ್ಲಿರುವ ಸಣ್ಣ ಡೈಲಾಗ್ ಕೂಡ ಚೇಂಜ್ ಮಾಡದೇ ಇಲ್ಲಿ ಅನುಕರಣೆ ಮಾಡುತ್ತಿದ್ದರು. ಸ್ವಮೇಕ್ ಅಂತ ಬಂದಾಗ ಫ್ರೀಡಂ ಇರುತ್ತದೆ, ಹಾಗೆಯೇ ಜನ ಕೂಡ ಸ್ವೀಕರಿಸುತ್ತಾರೆ’’ ಎಂದು ಅಭಿಪ್ರಾಯ ಪಟ್ಟಿದ್ದಾರೆ ನಟ.