ಧರ್ಮಸ್ಥಳ ಪ್ರಕರಣ: ತನಿಖೆ ಇದ್ದಾಗ ಮಾತನಾಡುವುದು ಸರಿಯಲ್ಲ: ಸಚಿವ ಸಂತೋಷ್ ಲಾಡ್‌ | Dharmasthala Case Under Investigation Says Santosh Lad Gvd

ಧರ್ಮಸ್ಥಳ ಪ್ರಕರಣ: ತನಿಖೆ ಇದ್ದಾಗ ಮಾತನಾಡುವುದು ಸರಿಯಲ್ಲ: ಸಚಿವ ಸಂತೋಷ್ ಲಾಡ್‌ | Dharmasthala Case Under Investigation Says Santosh Lad Gvd



ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಮಣ್ಣು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಎಸ್‌ಐಟಿ ತನಿಖೆಗೊಳಪಡಿಸಿದೆ. ಹೀಗಾಗಿ ಆತುರದಿಂದ ಮಾತನಾಡುವುದು ಸರಿಯಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್‌ ತಿಳಿಸಿದರು.

ಹುಬ್ಬಳ್ಳಿ (ಜು.23): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಮಣ್ಣು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಎಸ್‌ಐಟಿ ತನಿಖೆಗೊಳಪಡಿಸಿದೆ. ಹೀಗಾಗಿ ಆತುರದಿಂದ ಮಾತನಾಡುವುದು ಸರಿಯಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್‌ ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ತನಿಖೆಯಾಗುತ್ತಿದೆ. ನಾವು ಏನೇ ಮಾಡಿದರೂ ಬಿಜೆಪಿಯವರು ಟೀಕೆ ಮಾತಾಡುತ್ತಾರೆ. ಆದರೆ, ಅವರ ಬಗ್ಗೆ ಮಾತ್ರ ನಾವು ಮಾತನಾಡುವ ಹಾಗಿಲ್ಲ ಎಂದರು.

ಮೋದಿ ಅವರ ಅಧಿಕಾರವಧಿ ಮುಗಿಯುವವರೆಗೂ ನಾವು ಯಾರು ಮಾತನಾಡುವಂಗಿಲ್ಲ. ಆದರೆ, ಅವರು ಮಾತನಾಡಿದರೂ ನಡೆಯುತ್ತದೆ ಎಂದರು. ಇ.ಡಿ.ಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಅನೇಕ ಬಾರಿ ಹೇಳುತ್ತಿದೆ. ರಾಜಕೀಯಕ್ಕಾಗಿ ಇ.ಡಿ. ಬಳಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿರುವುದುಂಟು. ನೆಗಟಿವ್ ವಿಚಾರಗಳಿದ್ದರೆ ದೇಶದಲ್ಲಿ ಹೊರಬರಲ್ಲ. ದೇಶದ ಪ್ರಧಾನಿ ಈವರೆಗೂ ಒಂದೇ ಒಂದು ಸುದ್ದಿಗೋಷ್ಠಿಯನ್ನೂ ನಡೆಸಿಲ್ಲ ಎಂದು ಟೀಕಿಸಿದರು.

ಪೆಹಲ್ಗಾಂದಲ್ಲಿ ಭಯೋತ್ಪಾದಕ ಕೃತ್ಯ ನಡೆಯಿತು. ಅದರ ನಂತರ ಪ್ರಧಾನಿ ಮೋದಿ ಅವರು 8-10 ದೇಶ ಸುತ್ತಿ ಬಂದರು. ಇದೀಗ ಬಿಹಾರ್ ಚುನಾವಣೆಯಲ್ಲಿ ಬ್ಯುಜಿ ಇದ್ದಾರೆ ಎಂದು ವ್ಯಂಗ್ಯವಾಡಿದರು. ಮಹದಾಯಿ ವಿಚಾರದಲ್ಲಿ ಗೋವಾಗೆ ಬೇಕಾದಾಗ ಪರಿಸರ ಕ್ಲಿಯರನ್ಸ್ ಕೊಡುತ್ತಾರೆ. ಆದರೆ, ಕರ್ನಾಟಕದ ಬಗ್ಗೆ ಪ್ರಶ್ನೆ ಬಂದಾಗ ಪರಿಸರ ಕ್ಲಿಯರೆನ್ಸ್‌ ಸಿಗುವುದಿಲ್ಲ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಯಾರೊಬ್ಬರೂ ಮಾತಾಡುವುದಿಲ್ಲ ಎಂದು ಟೀಕಿಸಿದರು.

ರಸಗೊಬ್ಬರದ ಕೊರತೆಯಿಲ್ಲ: ಯಾವುದೇ ರೀತಿಯ ರಸಗೊಬ್ಬರದ ಕೊರತೆ ಇಲ್ಲ. ರೈತರು ಈ ಕುರಿತು ಆತಂಕಗೊಳ್ಳಬಾರದು. ಅಗತ್ಯಕ್ಕೆ ತಕ್ಕಷ್ಟು ಗೊಬ್ಬರ ಪೂರೈಸಲಾಗುವುದು ಎಂದು ಭರವಸೆ ನೀಡಿದರು. ನವಲಗುಂದ ಕ್ಷೇತ್ರದಲ್ಲಿ 17 ಸಾವಿರ ಟನ್‌ ಯೂರಿಯಾ ಬೇಡಿಕೆ ಇತ್ತು. ಸರ್ಕಾರದಿಂದ 23 ಸಾವಿರ ಟನ್‌ ಯೂರಿಯಾ ಪೂರೈಸಲಾಗಿದೆ. ಅಗತ್ಯ ಬಿದ್ದರೆ ಮತ್ತಷ್ಟು ಪೂರೈಸಲಾಗುವುದು. ರೈತರು ಯಾವುದೇ ಕಾರಣಕ್ಕೂ ಹೆಚ್ಚು ಹಣ ನೀಡಿ ಗೊಬ್ಬರ ಖರೀದಿಸಬಾರದು. ಹಾಗೊಂದು ವೇಳೆ ಯಾರಾದರೂ ಹೆಚ್ಚಿನ ಹಣ ಪಡೆಯುತ್ತಿದ್ದರೆ ದಾಖಲೆಗಳೊಂದಿಗೆ ದೂರು ನೀಡಿದರೆ ಅವರ ಪರವಾನಗಿ ರದ್ದು ಮಾಡಲಾಗುವುದು ಎಂದು ತಿಳಿಸಿದರು.

ದೇಶದಲ್ಲಿ ಇನ್ನೂ ಮೂಲಭೂತ ಸಮಸ್ಯೆಗಳು ಕಾಡುತ್ತಿವೆ. ನೀರಿನ ಸಮಸ್ಯೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ದೇಶದಲ್ಲಿವೆ. ಸರ್ಕಾರದ ಸೌಲಭ್ಯಗಳಿಂದ ಜನ ವಂಚಿತರಾಗಿದ್ದರೆ. ಅವರನ್ನು ಗುರುತಿಸಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಜನತಾ ದರ್ಶನ ಆಯೋಜಿಸಲಾಗಿದೆ ಎಂದರು. ಪಂಪ ಉತ್ಸವ, ಸ್ಮಾರಕ ಮತ್ತು ಪ್ರಾಧಿಕಾರದ ಕುರಿತಂತೆ ಸಿಎಂ ಜತೆಗೆ ಚರ್ಚಿಸಿ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಅಣ್ಣಿಗೇರಿ ಮತ್ತು ಅಳ್ನಾವರಕ್ಕೆ ಬಜೆಟ್‌ನಲ್ಲಿ ಸಮುದಾಯ ಆಸ್ಪತ್ರೆ ಮಂಜೂರಾಗಿವೆ. ವಿಶೇಷವಾಗಿ ಅಣ್ಣಿಗೇರಿಗೆ ಇಸಿಜಿ ಸೌಲಭ್ಯ ಕುರಿತಂತೆ ಅಹವಾಲುಗಳು ಸಲ್ಲಿಕೆಯಾಗಿದ್ದು, ಸರ್ಕಾರಕ್ಕೆ ಈ ಬಗೆಗೆ ವರದಿ ಸಲ್ಲಿಸಲಾಗುವುದು. ಮಳೆಯಿಂದ 30 ಸಾವಿರ ಎಕರೆ ಬೆಳೆಹಾನಿಯಾಗಿದೆ ಎಂಬ ವರದಿ ಇದೆ. ಅದನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದರು.



Source link

Leave a Reply

Your email address will not be published. Required fields are marked *