
ಇನ್ನೇನು ರಾಜೇಂದ್ರ ಭೂಪತಿ, ಮಲ್ಲಿಯ ಅಪ್ಪ ಎಂಬ ಸತ್ಯ ರಿವೀಲ್ ಆಗುತ್ತಲೇ ಭೂಪತಿಯನ್ನು ಸಾಯಿಸಿರುವುದಕ್ಕೆ ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. ಆದರೆ ಹಳೆಯ ಮಲ್ಲಿಗೆ ನ್ಯಾಯ ಒದಗಿಸಲು ಹೊಸ ಮಲ್ಲಿಗೆ ಅನ್ಯಾಯ ಮಾಡಲಾಗಿದೆ ಅಂತಿದ್ದಾರೆ. ಏನಿದು ವಿಷ್ಯ ನೋಡಿ!
ಇದೀಗ ಅಮೃತಧಾರೆ ಸೀರಿಯಲ್ನಲ್ಲಿ ಯಾರೂ ಊಹಿಸದ ಟ್ವಿಸ್ಟ್ ಸಿಕ್ಕಿದೆ. ಇದಾಗಲೇ ಮಲ್ಲಿ, ರಾಜೇಂದ್ರ ಭೂಪತಿಯ ಮಗಳು ಎನ್ನುವುದು ಭೂಪತಿ ಮತ್ತು ಮಲ್ಲಿಗೆ ತಿಳಿಯದಿದ್ದರೂ ವೀಕ್ಷಕರಿಗೆ ತಿಳಿದು ಹಲವು ದಿನಗಳೇ ಆಗಿತ್ತು. ಆದರೆ ಇದೀಗ ಮಲ್ಲಿಗೂ ಈ ವಿಷಯ ತಿಳಿದಿದೆ. ಆದರೆ, ಅಂಥ ದುಷ್ಟ, ತನ್ನನ್ನು ಸಲಹುತ್ತಿರುವ ಗೌತಮ್-ಭೂಮಿಕಾರನ್ನು ಸಾಯಿಸಲು ಪ್ರಯತ್ನಿಸಿರುವ, ತನ್ನ ಬದುಕನ್ನೇ ಹಾಳು ಮಾಡಿ ತನ್ನ ಗಂಡನನ್ನು ಬೇರೊಬ್ಬಳಿಗೆ ಕೊಟ್ಟು ಮದುವೆ ಮಾಡಿಸಿದ ವ್ಯಕ್ತಿಯನ್ನು ಮಲ್ಲಿ ಅಪ್ಪ ಎಂದು ಒಪ್ಪಿಕೊಳ್ಳುವುದಾದರೂ ಹೇಗೆ? ಆದ್ದರಿಂದ ಆಕೆ ಭೂಪತಿಯನ್ನು ತನ್ನ ಅಪ್ಪ ಎಂದು ಒಪ್ಪಿಕೊಳ್ಳಲೇ ಇಲ್ಲ. ಇದೊಂದು ಭೂಪತಿಯನ್ನು ಸಿಕ್ಕಾಪಟ್ಟೆ ಕಾಡಿತು. ತನ್ನ ಮಗಳ ಬದುಕನ್ನು ತನ್ನ ಕೈಯಾರೆ ಹಾಳು ಮಾಡಿರುವ ಕಾರಣಕ್ಕೆ ಹಾಗೂ ಮಗಳು ತನ್ನನ್ನು ಅಪ್ಪ ಎಂದು ಒಪ್ಪಿಕೊಳ್ಳಲು ಹಿಂದೇಟು ಹಾಕಿರುವುದರಿಂದ ನಮನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಭೂಪತಿ ವಿಲನ್ ಆಗಿದ್ರೂ ಆತ ಒಳ್ಳೆಯವನಾಗಿರುವ ಈ ಸಂದರ್ಭದಲ್ಲಿ ಸಾವಿನ ಹಾದಿ ಹಿಡಿದಿರುವುದು ವೀಕ್ಷಕರಿಗೆ ಒಪ್ಪಿಗೆ ಆಗುತ್ತಿಲ್ಲ. ಆತ ಬದುಕಿದ್ದೇ ಜೈದೇವ್ಗೆ ಬುದ್ಧಿ ಕಲಿಸಬಹುದಿತ್ತು ಎನ್ನುವುದು ನೆಟ್ಟಿಗರ ಅಭಿಮತ. ಆತ ತನ್ನೆಲ್ಲಾ ಆಸ್ತಿಯನ್ನು ಮಗಳು ಮಲ್ಲಿಯ ಹೆಸರಿಗೆ ಮಾಡಿದ್ದಾನೆ. ಇದನ್ನು ಕೇಳಿ ಜೈದೇವನ ಹೃದಯವೇ ನಿಂತುಹೋದ ಅನುಭವವಾಗಿದೆ. ಇದೀಗ, ದಿಯಾಳನ್ನು ಬಿಟ್ಟು ಮಲ್ಲಿಯ ಕಡೆ ಬಂದರೂ ಬಂದನೇ ಆತ. ಆದರೆ ಅದೇನೇ ಆದರೂ ಭೂಪತಿಯನ್ನು ಸಾಯಿಸಬಾರದಿತ್ತು ಎಂದೇ ನೆಟ್ಟಿಗರು ಹೇಳುತ್ತಿದ್ದಾರೆ.
ಆದರೆ ಅದೇ ವೇಳೆ, ಭೂಪತಿಯನ್ನು ಸಾಯಿಸುವ ಹಿಂದಿರುವ ಉದ್ದೇಶವನ್ನೂ ನೆಟ್ಟಿಗರು ಯೋಚಿಸಿದ್ದಾರೆ. ಅದೇನೆಂದರೆ, ರಾಜೇಂದ್ರ ಭೂಪತಿ ಪಾತ್ರಧಾರಿ ಹನುಮಂತೇ ಗೌಡ ಅವರು, ಕಲರ್ಸ್ ಕನ್ನಡದ ಭಾರ್ಗವಿ ಎಲ್ಎಲ್ಬಿ ಚಿತ್ರದಲ್ಲಿ ಭಾರ್ಗವಿಯ ಅಪ್ಪನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಷ್ಟಕ್ಕೂ ಭಾರ್ಗವಿ ಪಾತ್ರಧಾರಿಯಾಗಿರುವ ರಾಧಾ ಭಗವತಿ ಅವರು ಈ ಹಿಂದೆ ಅಮೃತಧಾರೆಯಲ್ಲಿ ಮಲ್ಲಿಯಾಗಿ ನಟಿಸುತ್ತಿದ್ದರು. ಅಲ್ಲಿ ಅಪ್ಪ-ಮಗಳು ಆಗಬೇಕಿದ್ದವರು ಮತ್ತೊಂದು ಸೀರಿಯಲ್ನಲ್ಲಿ ಅಪ್ಪ-ಮಗಳು ಆಗಿದ್ದಾರೆ. ಅಲ್ಲಿಯೂ ನಟ ಹನುಮಂತೇ ಗೌಡ ಅವರದ್ದು ದೊಡ್ಡ ರೋಲ್ ಇದೆ.
ಇದೇ ಕಾರಣಕ್ಕೆ ಇದೀಗ ರಾಜೇಂದ್ರ ಭೂಪತಿಯನ್ನು ಸಾಯಿಸಲು ಕಾರಣ ಭಾರ್ಗವಿ ಎಲ್ಎಲ್ಬಿ ಸೀರಿಯಲ್ನಲ್ಲಿ ಶೂಟಿಂಗ್ ಇರುವುದೇ ಎನ್ನುವುದು ನೆಟ್ಟಿಗರ ಅಭಿಮತ. ಎರಡೂ ಸೀರಿಯಲ್ಗಳನ್ನು ಒಟ್ಟಿಗೇ ಹ್ಯಾಂಡಲ್ ಮಾಡುವುದು ಕಷ್ಟವಾಗಿದ್ದರಿಂದ ಅಮೃತಧಾರೆಯಲ್ಲಿ ಸಾಯಿಸಲಾಗಿದೆ ಎನ್ನುತ್ತಿದ್ದಾರೆ. ಇದೇ ಕಾರಣಕ್ಕೆ ಅಮೃತಧಾರೆಯ ಹಳೆಯ ಮಲ್ಲಿ ಅರ್ಥಾತ್ ರಾಧಾ ಭಗವತಿಗೆ ನ್ಯಾಯ ಒದಗಿಸಲು (ಭಾರ್ಗವಿ ಎಲ್ಎಲ್ಬಿ ಸೀರಿಯಲ್ ಮೂಲಕ), ಹೊಸ ಮಲ್ಲಿಗೆ ಅನ್ಯಾಯ ಮಾಡಿ ಸತ್ತೇ ಹೋದ ಎಂದು ತಮಾಷೆ ಮಾಡುತ್ತಿದ್ದಾರೆ.