
ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ವಾಯುಪಡೆಯು ಐದು ಪಾಕಿಸ್ತಾನಿ ಯುದ್ಧ ವಿಮಾನಗಳು ಮತ್ತು ಒಂದು ದೊಡ್ಡ ವಿಮಾನವನ್ನು ಹೊಡೆದುರುಳಿಸಿದೆ. ಕ್ಷಿಪಣಿ ದಾಳಿಯಲ್ಲಿ ಹ್ಯಾಂಗರ್ನಲ್ಲಿದ್ದ ಎರಡು ಯುದ್ಧವಿಮಾನಗಳು ನಾಶವಾಗಿವೆ.
ಬೆಂಗಳೂರು (ಆ.9): ಆಪರೇಷನ್ ಸಿಂಧೂರ್ ಸಮಯದಲ್ಲಿ ಐದು ಪಾಕಿಸ್ತಾನಿ ಯುದ್ಧ ವಿಮಾನಗಳು ಮತ್ತು ಇನ್ನೊಂದು ದೊಡ್ಡ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಶನಿವಾರ ಅಧಿಕೃತವಾಗಿ ಹೇಳಿದ್ದಾರೆ. ಮೆಗಾ ಮಿಲಿಟರಿ ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನದ ವಾಯುಪಡೆಗೆ ಆದ ಹಾನಿಯ ಪ್ರಮಾಣವನ್ನು ಇದೇ ಮೊದಲ ಬಾರಿಗೆ ಭಾರತದ ವಾಯುಪಡೆ ಬಹಿರಂಗವಾಗಿ ಹೇಳಿದೆ. ಆಕಾಶದಲ್ಲಿದ್ದ ಪಾಕಿಸ್ತಾನದ ಆರು ಯುದ್ಧವಿಮಾನಗಳನ್ನು ಹೊಡೆದುರುಳಿಸಿದ್ದು ಮಾತ್ರವಲ್ಲದೆ, ಆಪರೇಷನ್ ಸಿಂದೂರ್ ದಾಳಿಯ ಸಮಯದಲ್ಲಿ ಹ್ಯಾಂಗರ್ನಲ್ಲಿದ್ದ (ಏರ್ಫೀಲ್ಡ್ನಲ್ಲಿ ಯುದ್ಧವಿಮಾನ ಇರಿಸುವ ಸ್ಥಳ) ಕನಿಷ್ಠ ಎರಡು ಯುದ್ಧವಿಮಾನಗಳು ಕ್ಷಿಪಣಿ ದಾಳಿಯಲ್ಲಿ ನಾಶವಾಗಿದೆ ಎಂದು ಏರ್ ಫೋರ್ಸ್ ಚೀಫ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ವಾರ್ಷಿಕ 16 ನೇ ಏರ್ ಚೀಫ್ ಮಾರ್ಷಲ್ ಎಲ್ ಎಂ ಕತ್ರೆ ಉಪನ್ಯಾಸದಲ್ಲಿ ಮಾತನಾಡಿದ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್, ಸಾಕಾಶ ಮಾರ್ಗದಲ್ಲಿ ಪಾಕಿಸ್ತಾನದ ಯುದ್ಧವಿಮಾನಗಳನ್ನು ಹೊಡೆದುರುಳಿಸಲು ರಷ್ಯಾ ನಿರ್ಮಿತ ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗಿತ್ತು ಎಂದಿದ್ದಾರೆ.
Scroll to load tweet…
ಹೊಡೆದುರುಳಿಸಿದ “ಬಿಗ್ ಬರ್ಡ್” ಬಹುಶಃ AWACS (ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ) ಅಥವಾ ಎಲೆಕ್ಟ್ರಾನಿಕ್ ಗುಪ್ತಚರ ವ್ಯವಸ್ಥೆ ಆಗಿರುವ ಸಾಧ್ಯತೆ ಹೆಚ್ಚಿದೆ. ಇದರ ನಷ್ಟವು ಪಾಕಿಸ್ತಾನದ ವಾಯು ಬಲಕ್ಕೆ ಭಾರಿ ಹೊಡೆತವನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ. ಮೇ 7 ರ ದಾಳಿಯ ಸಮಯದಲ್ಲಿ ದಾಳಿಗೊಳಗಾದ ಭಯೋತ್ಪಾದಕ ಗುರಿಗಳ ಉಪಗ್ರಹ ಚಿತ್ರಗಳನ್ನು ಏರ್ ಚೀಫ್ ಮಾರ್ಷಲ್ ಸಿಂಗ್ ಹಂಚಿಕೊಂಡಿದ್ದಾರೆ.
“ನಾವು (ಬಹಾವಲ್ಪುರ್ – ಜೆಇಎಂ ಪ್ರಧಾನ ಕಚೇರಿಯಲ್ಲಿ) ಉಂಟುಮಾಡಿದ ಹಾನಿಯ ಮೊದಲು ಮತ್ತು ನಂತರದ ಚಿತ್ರಗಳು ಇವು. ಇಲ್ಲಿ ಯಾವುದೇ ಕಟ್ಟಡಗಳೇ ಇಲ್ಲ. ಪಕ್ಕದ ಕಟ್ಟಡಗಳು ಸಾಕಷ್ಟು ಸುರಕ್ಷಿತವಾಗಿವೆ. ನಮ್ಮಲ್ಲಿ ಉಪಗ್ರಹ ಚಿತ್ರಗಳು ಮಾತ್ರವಲ್ಲದೆ, ಸ್ಥಳೀಯ ಮಾಧ್ಯಮಗಳಿಂದ ಈ ಕಟ್ಟಡದ ಒಳಗಿನ ಚಿತ್ರವನ್ನೂ ಪಡೆದುಕೊಂಡಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 22 ರಂದು 26 ಅಮಾಯಕರ ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ಭಾರತವು ಮೇ 7 ರಂದು ‘ಆಪರೇಷನ್ ಸಿಂದೂರ್’ ಎಂಬ ಸಂಕೇತನಾಮದ ಮಿಲಿಟರಿ ದಾಳಿಯಲ್ಲಿ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ದಾಳಿ ಮಾಡಿ ನೂರಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಿತ್ತು.