
ನಟ ದರ್ಶನ್ ಸೇರಿ ಏಳು ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಸಾಕ್ಷ್ಯಾಧಾರಗಳನ್ನು ಸರಿಯಾಗಿ ಪರಿಗಣಿಸದೆ ಜಾಮೀನು ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಒಂದು ವಾರದೊಳಗೆ ಅಂತಿಮ ತೀರ್ಪು ನಿರೀಕ್ಷಿಸಲಾಗಿದೆ.
ನವದೆಹಲಿ (ಜು.24): ನಟ ದರ್ಶನ್ ಸೇರಿ ಏಳು ಆರೋಪಿಗಳಿಗೆ ಹೈಕೋರ್ಟ್ ನೀಡಿದ ಜಾಮೀನು ಆದೇಶದ ಕುರಿತು ಸುಪ್ರೀಂ ಕೋರ್ಟ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ಸಾಕ್ಷ್ಯಾಧಾರಗಳಿಗಿಂತ ಹೆಚ್ಚು ವಿಮರ್ಶೆ ಇಲ್ಲದೆ ಜಾಮೀನು ನೀಡಿರುವ ಹೈಕೋರ್ಟ್ ತೀರ್ಪು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ನ ಪರ್ದಿವಾಲಾ ಪೀಠ ತಿಳಿಸಿದೆ. ಸಾಕ್ಷ್ಯಾಧಾರಗಳ ಲಭ್ಯತೆ ಇದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೇ ಜಾಮೀನು ನೀಡಲಾಗಿದೆ ಎಂಬಾರ್ಥದಲ್ಲಿ ಹೈಕೋರ್ಟ್ ಜಾಮೀನು ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿಕಾರಿದೆ.
ಸುಪ್ರೀಂ ಕೋರ್ಟ್ನಲ್ಲಿ 1.40 ನಿಮಿಷಗಳ ಕಾಲ ನಡೆದ ವಿಚಾರಣೆಯಲ್ಲಿ, ಪೀಠವು ಪ್ರಕರಣದ ಸಾಕ್ಷ್ಯಾಧಾರಗಳು, ಎಫ್ಎಸ್ಎಲ್ ವರದಿ, ಸ್ಥಳ ಪರಿಶೀಲನೆ ವರದಿಗಳು ಎಲ್ಲವೂ ಸ್ಪಷ್ಟವಾಗಿರುವಾಗ, ಹೈಕೋರ್ಟ್ ಯಾಕೆ ಇಂತಹ ತೀರ್ಪು ನೀಡಿತು ಎಂಬ ಪ್ರಶ್ನೆ ಎತ್ತಿದೆ. ಅನೇಕ ಕರೆ ವಿವರಗಳು, ಪ್ರಮುಖ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು, ಹಾಗೂ ಇತರ ಮೌಲ್ಯಮಾಪನಗಳ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟತೆ ಕೇಳಿದೆ. ದರ್ಶನ್ (ಎ1) ಹಾಗೂ ಎರಡನೇ (ಎ2) ಆರೋಪಿ ಪವಿತ್ರಾ ಗೌಡಗೆ ಇರುವ ಸಂಬಂಧವನ್ನು ಪ್ರಶ್ನೆ ಮಾಡಲಾಗಿದೆ. ಅವರ ನಡುವೆ ನಡೆದ ಕರೆ ಸಂವಹನದ ವಿವರಗಳನ್ನು ಕೋರಿ, ತನಿಖಾ ವರದಿಗಳನ್ನು ಮತ್ತೆ ಪರಿಶೀಲಿಸಲು ಸೂಚಿಸಲಾಗಿದೆ.
ಜಾಮೀನು ಭವಿಷ್ಯ ಅನಿಶ್ಚಿತತೆ:
ಈ ವಿಚಾರಣೆಯ ನಂತರ, ದರ್ಶನ್ ಸೇರಿದಂತೆ ಜಾಮೀನು ಪಡೆದ ಎಲ್ಲ 7 ಆರೋಪಿಗಳ ಭವಿಷ್ಯ ಪ್ರಶ್ನಾರ್ಹವಾಗಿದೆ. ಸುಪ್ರೀಂ ಕೋರ್ಟ್ ಈ ಸಂಬಂಧ ಒಂದು ವಾರದ ಸಮಯ ನೀಡಿದ್ದು, ಅದನಂತರ ಅಂತಿಮ ಆದೇಶ ನೀಡಲಾಗುತ್ತದೆ. ಈ ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯಗಳು ಇರುವುದರಿಂದ, ಸುಪ್ರೀಂ ಕೋರ್ಟ್ ಇಡೀ ವಿಚಾರಣೆಯ ಮರು ಪರಿಶೀಲನೆ ನಡೆಸುತ್ತಿದೆ. ಹೀಗಾಗಿ, ದರ್ಶನ್ ವಿರುದ್ಧ ತೀವ್ರವಾದ ತೀರ್ಪು ಸಾಧ್ಯತೆ ಇದೆ ಎಂಬ ಅಂದಾಜು ಇದೆ.