
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾದ ನಂತರ ನಟ ದರ್ಶನ್ ಮತ್ತು ಪವಿತ್ರಾ ಗೌಡ ಜೈಲು ಸೇರಿದ್ದಾರೆ. ಜೈಲಿನೊಳಗೆ ಹೋಗುವ ಮುನ್ನ ತೆಗೆದ ಫೋಟೋದಲ್ಲಿ ದರ್ಶನ್ ಬೋಳು ತಲೆ ಮತ್ತು ಬಿಳಿ ಗಡ್ಡದೊಂದಿಗೆ ಕಾಣಿಸಿಕೊಂಡಿದ್ದಾರೆ. ಪವಿತ್ರಾ ಗೌಡ ನಗುಮುಖದಿಂದ ಕಾಣಿಸಿಕೊಂಡಿದ್ದಾರೆ.
ಬೆಂಗಳೂರು (ಆ.16): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜಾಮೀನು ರದ್ದುಗೊಂಡು ಪುನಃ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಹಾಗೂ ಆತನ ಸ್ನೇಹಿತೆ ಪವಿತ್ರಾ ಗೌಡ ಅವರು ಜೈಲಿನೊಳಗೆ ಹೋಗುವ ಮುನ್ನ ಮಾಡಿದ ತಪಾಸಣೆ ಫೋಟೋ ರಿವೀಲ್ ಆಗಿದೆ. ಅದರಲ್ಲಿ ನಟ ದರ್ಶನ್ಗೆ ಬೋಳು ತಲೆ, ಸುಕ್ಕುಗಟ್ಟಿದ ಮುಖ ಹಾಗೂ ನೆರೆತು ಬಿಳಿಯಾಗಿರುವ ಗಡ್ಡ ಕಂಡುಬಂದಿದೆ. ಮತ್ತೊಂದೆಡೆ ಆತನ ಸ್ನೇಹಿತೆ ಪವಿತ್ರಾ ಗೌಡ ಮಾತ್ರ ಜೈಲಿನೊಳಗೆ ಹೋಗುತ್ತಿದ್ದರೂ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂಬಂತೆ ನಗುಮುಖದಲ್ಲಿರುವುದು ಕಂಡುಬಂದಿದೆ.
ನಟ ದರ್ಶನ್ ತೂಗುದೀಪ ಈ ಹಿಂದೆ ಜೈಲಿನಲ್ಲಿದ್ದಾಗಲೂ ವಿಗ್ ಧರಿಸಿಕೊಂಡಿದ್ದರು. ಆಗ ಪ್ರತಿಬಾರಿ ಅವರನ್ನು ಭೇಟಿಯಾಗಲು ಮನೆಯವರು ಜೈಲಿಗೆ ಹೋದಾಗ ವಿಗ್ ಹಾಕಿಕೊಂಡೇ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಇದೀಗ ಜೈಲಿನೊಳಗೆ ಹೋಗುವ ಮುನ್ನ ನಟ ದರ್ಶನ್ ಅವರು ನಿಜ ಸ್ವರೂಪದಲ್ಲಿ ಹೇಗಿದ್ದಾರೆಯೋ ಅದೇ ರೀತಿಯಲ್ಲಿ ಫೋಟೋ ತೆಗೆದುಕೊಳ್ಳಲಾಗಿದೆ. ಆಗ ತಲೆ ಮೇಲೆ ಹಾಕಿದ್ದ ವಿಗ್ ಅನ್ನು ತೆಗೆಸಿ ನೈಸರ್ಗಿಕವಾಗಿ ಹೇಗೆ ಕಾಣಿಸುತ್ತಾರೆಯೋ ಅದೇ ರೀತಿ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಇದೇ ದರ್ಶನ್ ನಿಜ ಸ್ವರೂಪ ಎಂದು ಹೇಳಲಾಗುತ್ತಿದೆ.