ಲಾರ್ಡ್ಸ್ ಟೆಸ್ಟ್ ಸೋಲಿಗೆ ಭಾರತ ಈ ಇಬ್ಬರೇ ಕಾರಣ ಎಂದು ಟೀಕಿಸಿದ ಟೀಂ ಇಂಡಿಯಾ ಮಾಜಿ ಕೋಚ್ ಚಾಪೆಲ್! | Greg Chappell Criticizes Gill And Jadeja For India Lords Test Defeat Kvn

ಲಾರ್ಡ್ಸ್ ಟೆಸ್ಟ್ ಸೋಲಿಗೆ ಭಾರತ ಈ ಇಬ್ಬರೇ ಕಾರಣ ಎಂದು ಟೀಕಿಸಿದ ಟೀಂ ಇಂಡಿಯಾ ಮಾಜಿ ಕೋಚ್ ಚಾಪೆಲ್! | Greg Chappell Criticizes Gill And Jadeja For India Lords Test Defeat Kvn



ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತದ ಸೋಲಿಗೆ ನಾಯಕ ಶುಭ್‌ಮನ್ ಗಿಲ್ ಮತ್ತು ರವೀಂದ್ರ ಜಡೇಜಾ ಅವರನ್ನು ಗ್ರೆಗ್ ಚಾಪೆಲ್ ಟೀಕಿಸಿದ್ದಾರೆ. ಜಡೇಜಾ ಗೆಲ್ಲಲು ಪ್ರಯತ್ನಿಸಲಿಲ್ಲ, ಗಿಲ್ ಸಂವಹನ ಕೌಶಲ್ಯ ಸಾಲದು ಎಂದಿದ್ದಾರೆ. ಚಾಂಪಿಯನ್ ತಂಡಗಳಿಗೆ ನಾಯಕತ್ವದ ಸ್ಪಷ್ಟತೆ ಮುಖ್ಯ ಎಂದು ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

ಮೆಲ್ಬೋರ್ನ್: ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತದ ಸೋಲಿಗೆ ನಾಯಕ ಶುಭ್‌ಮನ್ ಗಿಲ್ ಮತ್ತು ರವೀಂದ್ರ ಜಡೇಜಾ ಅವರನ್ನು ಮಾಜಿ ಭಾರತೀಯ ಕೋಚ್ ಮತ್ತು ಆಸ್ಟ್ರೇಲಿಯಾದ ನಾಯಕ ಗ್ರೆಗ್ ಚಾಪೆಲ್ ಟೀಕಿಸಿದ್ದಾರೆ. ಲಾರ್ಡ್ಸ್‌ನಲ್ಲಿ ಜಡೇಜಾ ಚೆನ್ನಾಗಿ ಬ್ಯಾಟ್ ಮಾಡಿದರೂ ಗೆಲ್ಲಲು ಪ್ರಯತ್ನಿಸಲಿಲ್ಲ ಎಂದು ಚಾಪೆಲ್ ಕ್ರಿಕ್ ಇನ್ಫೋದಲ್ಲಿ ಬರೆದ ಲೇಖನದಲ್ಲಿ ಹೇಳಿದ್ದಾರೆ.

ಜಡೇಜಾ ಕ್ರೀಸ್‌ನಲ್ಲಿದ್ದ ಕೊನೆಯ ಬ್ಯಾಟ್ಸ್‌ಮನ್ ಎಂಬುದು ನಿಜ. ಆದರೆ ಪ್ರತಿ ಓವರ್‌ನ ನಾಲ್ಕನೇ ಎಸೆತದಲ್ಲಿ ಮಾತ್ರ ಸಿಂಗಲ್ಸ್ ತೆಗೆದುಕೊಂಡು ಟೈಲ್-ಎಂಡರ್‌ಗಳನ್ನು ರಕ್ಷಿಸಿದ್ದರಿಂದ ಭಾರತ ಗೆಲ್ಲಲು ಸಾಧ್ಯವಿಲ್ಲ. ಲೆಕ್ಕಾಚಾರದ ರಿಸ್ಕ್ ತೆಗೆದುಕೊಳ್ಳಬೇಕಿತ್ತು. ಈ ಸಂದೇಶವನ್ನು ಡ್ರೆಸ್ಸಿಂಗ್ ರೂಮಿನಿಂದ ನಾಯಕ ನೀಡಬೇಕಿತ್ತು. ಆದರೆ ಶುಭ್‌ಮನ್ ಗಿಲ್ ಅಥವಾ ಜಡೇಜಾ ಈ ಸ್ಪಷ್ಟತೆಯನ್ನು ತೋರಿಸಲಿಲ್ಲ ಎಂದು ಗ್ರೆಗ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

2019 ರಲ್ಲಿ ಲೀಡ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೆನ್ ಸ್ಟೋಕ್ಸ್ ಹೀಗೆ ಮಾಡುವುದನ್ನು ನಾವು ನೋಡಿದ್ದೇವೆ. ತನ್ನ ಸಾಮರ್ಥ್ಯದಲ್ಲಿ ವಿಶ್ವಾಸವಿಟ್ಟ ಸ್ಟೋಕ್ಸ್ ಕಳೆದ 50 ವರ್ಷಗಳಲ್ಲಿ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ಆಡಿದರು. ಗೆಲ್ಲುವ ಮತ್ತು ಸೋಲುವ ಸಾಧ್ಯತೆಗಳನ್ನು ಅರಿತುಕೊಂಡು ಸ್ಟೋಕ್ಸ್ ಆಡಿದರು. ತಂಡದ ಬೆಂಬಲ ಮತ್ತು ಮಾನಸಿಕ ಸ್ಥಿತಿ ಅವರಿಗಿತ್ತು. ಇದೇ ಚಾಂಪಿಯನ್ ತಂಡಗಳನ್ನು ವಿಭಿನ್ನವಾಗಿಸುತ್ತದೆ ಎಂದು ಗ್ರೆಗ್ ಚಾಪೆಲ್ ಹೇಳಿದ್ದಾರೆ.

ಶುಭ್‌ಮನ್ ಗಿಲ್ ತಂಡದ ಸದಸ್ಯರೊಂದಿಗೆ ಸ್ಪಷ್ಟವಾಗಿ ಸಂವಹನ ನಡೆಸಬೇಕು. ಇದು ಗಿಲ್ ಎದುರಿಸುತ್ತಿರುವ ನಿಜವಾದ ಸವಾಲು. ಭಾರತವನ್ನು ಹೇಗೆ ರೂಪಿಸಬೇಕೆಂಬುದರ ಬಗ್ಗೆ ಗಿಲ್‌ಗೆ ಸ್ಪಷ್ಟ ತಿಳುವಳಿಕೆ ಇರಬೇಕು. ಮಾತಿನಿಂದಲ್ಲ, ನಡವಳಿಕೆ ಮತ್ತು ಕೆಲಸದಿಂದ ನಾಯಕ ಮಾದರಿಯಾಗಬೇಕು. ಶ್ರೇಷ್ಠ ನಾಯಕರೆಲ್ಲರೂ ಉತ್ತಮ ಸಂವಹನಕಾರರು. ಈ ಕೌಶಲ್ಯವನ್ನು ಶುಭ್‌ಮನ್ ಗಿಲ್ ಬೆಳೆಸಿಕೊಳ್ಳಬೇಕು. ಅಭ್ಯಾಸದಲ್ಲಿ, ಡ್ರೆಸ್ಸಿಂಗ್ ರೂಮಿನಲ್ಲಿ ಅಥವಾ ಪಂದ್ಯದಲ್ಲಿ ಸ್ಪಷ್ಟವಾಗಿ ಮತ್ತು ಶಾಂತವಾಗಿ ಸಂವಹನ ನಡೆಸುವುದು ಮುಖ್ಯ. ಬ್ಯಾಟಿಂಗ್ ಪ್ರತಿಭೆಯಿಂದ ಮಾತ್ರ ನಾಯಕ ತಂಡದ ವಿಶ್ವಾಸ ಗಳಿಸಲು ಸಾಧ್ಯವಿಲ್ಲ ಎಂದು ಚಾಪೆಲ್ ಹೇಳಿದರು.

ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಆಂಡರ್ಸನ್-ತೆಂಡುಲ್ಕರ್ ಟ್ರೋಫಿಯಲ್ಲಿ ಈಗಾಗಲೇ ಮೂರು ಪಂದ್ಯಗಳು ಮುಕ್ತಾಯವಾಗಿದ್ದು, ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು ಸದ್ಯ 2-1ರ ಮುನ್ನಡೆ ಸಾಧಿಸಿದೆ. ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 5 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿತ್ತು. ಇದಾದ ಬಳಿಕ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ನಲ್ಲಿ ಶುಭ್‌ಮನ್ ಗಿಲ್ ಹಾಗೂ ಕೆ ಎಲ್ ರಾಹುಲ್ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ 336 ರನ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಇಂಗ್ಲೆಂಡ್‌ಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿತ್ತು. ಇದಷ್ಟೇ ಅಲ್ಲದೇ ಎಜ್‌ಬಾಸ್ಟನ್‌ನಲ್ಲಿ ಮೊದಲ ಗೆಲುವು ದಾಖಲಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿತ್ತು. 

ಇನ್ನು ಐತಿಹಾಸಿಕ ಲಾರ್ಡ್ಸ್ ಟೆಸ್ಟ್ ಪಂದ್ಯವು ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಐದು ದಿನಗಳ ಕಾಲ ನಡೆದ ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಬೌಲರ್‌ಗಳ ಅದ್ಭುತ ಪ್ರದರ್ಶನದ ಹೊರತಾಗಿಯೂ ಟೀಂ ಇಂಡಿಯಾ 193 ರನ್‌ಗಳ ಗುರಿ ಬೆನ್ನತ್ತುವಲ್ಲಿ ವಿಫಲವಾಯಿತು. ಆಲ್ರೌಂಡರ್ ರವೀಂದ್ರ ಜಡೇಜಾ ಆಕರ್ಷಕ ಅಜೇಯ ಅರ್ಧಶತಕ ಸಿಡಿಸಿದರಾದರೂ, ಕೊನೆಯಲ್ಲಿ 22 ರನ್ ಅಂತರದಲ್ಲಿ ಇಂಗ್ಲೆಂಡ್ ಗೆಲುವಿನ ನಗೆ ಬೀರಿತು. ಜಡೇಜಾ ಆಟದ ಬಗ್ಗೆ ಪರ ವಿರೋದದ ಚರ್ಚೆಗಳು ನಡೆಯುತ್ತಿವೆ. 



Source link

Leave a Reply

Your email address will not be published. Required fields are marked *