
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದ 2ನೇ ದಿನದ ಕಾರ್ಯಾಚರಣೆ ಅಂತ್ಯಗೊಂಡಿದೆ. ದೂರುದಾರ ಸೂಚಿಸಿದ 5 ಸ್ಥಳದಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ.
ಧರ್ಮಸ್ಥಳ (ಜು.30) ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧ ನಡೆಯುತ್ತಿರುವ ಎಸ್ಐಟಿ ತನಿಖೆ ಹಾಗೂ ಕಾರ್ಯಾಚರಣೆ ಚುರುಕುಗೊಂಡಿದೆ. 2ನೇ ದಿನ ಕಾರ್ಯಾಚರಣೆಯಲ್ಲಿ ನಾಲ್ಕು ಸ್ಥಳವನ್ನು ಅಗೆದು ಪರಿಶೀಲಿಸಲಾಗಿದೆ. ದೂರುದಾರ ಸೂಚಿಸಿದ ನಾಲ್ಕೂ ಸ್ಥಳದಲ್ಲಿ ಯಾವುದೇ ಕಳೇಬರಹ ಪತ್ತೆಯಾಗಿಲ್ಲ. ಇದುವರೆಗೆ ಒಟ್ಟು 5 ಸ್ಥಳಗಳನ್ನು ಅಗೆದು ಪರಿಶೀಲಿಸಲಾಗಿದೆ. ಐದರಲ್ಲೂ ಯಾವುದೇ ಕಳೇಬರಹ ಪತ್ತೆಯಾಗಿಲ್ಲ.
ಧರ್ಮಸ್ಥಳ ಕಾಡಿನಲ್ಲಿ ಎಸ್ಐಟಿ ತನಿಖೆ
ದೂರುದಾರ ಮೊದಲ ದಿನದ ಸ್ಥಳ ಮಹಜರಿನಲ್ಲಿ13 ಸ್ಥಳಗಳನ್ನು ಗುರುತಿಸಿದ್ದ. ಈ ಸ್ಥಳದಲ್ಲಿ ಶವಗಳನ್ನು ಹೂತುಹಾಕಿರುವುದಾಗಿ ಆರೋಪಿಸಿದ್ದರು. ಪ್ರಭಾವಿಗಳ ಸೂಚನೆ ಮೇರೆಗೆ ರಹಸ್ಯವಾಗಿ ಶವಗಳನ್ನು ಹೂತುಹಾಕಿರುವುದಾಗಿ ಹೇಳಿದ್ದ. ದೂರುದಾರ ಸೂಚಿಸಿದ 13 ಸ್ಥಳಗಳ ಪೈಕಿ 5 ಸ್ಥಳಗಳನ್ನು ಎಸ್ಐಟಿ ಅಧಿಕಾರಿಗಳು ಉತ್ಖನನ ಮಾಡಿದ್ದಾರೆ. ಇಂದು ನಾಲ್ಕು ಸ್ಥಳಗಳಲ್ಲಿ ಉತ್ಖನನ ಮಾಡಲಾಗಿದ್ದು, ಎಸ್ಐಟಿ ಅಧಿಕಾರಿಗಳು ಬರಿಗೈಯಲ್ಲಿ ವಾಪಾಸ್ಸಾಗಿದ್ದಾರೆ.
ಆರಂಭಿಕ 5 ಸ್ಥಳದಲ್ಲಿ 12 ಶವ ಹೂಳಲಾಗಿದೆ ಎಂದಿದ್ದ ವಕೀಲ
ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ಅನನ್ಯ ಭಟ್ ಪರ ವಕೀಲ ಮಂಜುನಾಥ್ ನೀಡಿರು ಹೇಳಿಕೆ ಕುರಿತು ಇದೀಗ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ದೂರುದಾರ ಗುರುತಿಸಿದ್ದ ಆರಂಭಿಕ 5 ಸ್ಥಳದಲ್ಲಿ 12 ಶವಗಳನ್ನೂ ಹೂಳಲಾಗಿದೆ ಎಂದು ವಕೀಲ ಮಂಜುನಾಥ್ ಹೇಳಿದ್ದರು. ಆದರೆ ಆರಂಭಿಕ 5 ಸ್ಥಳದಲ್ಲಿ ಯಾವುದೇ ಅವಶೇಷ ಪತ್ತೆಯಾಗಿಲ್ಲ. 13ನೇ ಸ್ಥಳದಲ್ಲಿ ಹೆಚ್ಚಿನ ಶವಗಳನ್ನೂ ಹೂಳಲಾಗಿದೆ ಎಂದು ವಕೀಲರು ಹೇಳಿದ್ದಾರೆ.