
ಮೈಸೂರಿನ ಕಾಂಗ್ರೆಸ್ ಸಮಾವೇಶದಿಂದ ವಾಪಾಸ್ಸಾಗುತ್ತಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರ ಎಸ್ಕಾರ್ಟ್ ವಾಹನ ಪಲ್ಟಿಯಾಗಿದೆ. ಎಸ್ಕಾರ್ಟ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕೆಶಿ ಅವರಿಗೆ ಯಾವುದೇ ಅಪಾಯವಾಗಿಲ್ಲ.
ಮಂಡ್ಯ (ಜು.19): ಮೈಸೂರಿನಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಸಾಧನಾ ಸಮಾವೇಶದಿಂದ ಅರ್ಧಕ್ಕೆ ವಾಪಾಸ್ ಬಂದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರ ಎಸ್ಕಾರ್ಟ್ ವಾಹನ ನಡು ರಸ್ತೆಯಲ್ಲಿಯೇ ಪಲ್ಟಿಯಾಗಿದೆ. ಸಾಧನಾ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮುಗಿದ ಬಳಿಕ ಹಾಗೂ ಸಿಎಂ ಸಿದ್ಧರಾಮಯ್ಯ ಭಾಷಣ ಆರಂಭ ಮಾಡುವ ಮುನ್ನವೇ ಸಾಧನಾ ಸಮಾವೇಶದಿಂದ ಅವರು ಹೊರಹೋಗಿದ್ದರು.
ಬೆಂಗಳೂರಿಗೆ ಡಿಕೆ ಶಿವಕುಮಾರ್ ವಾಪಾಸ್ ಬರುತ್ತಿದ್ದ ವೇಳೆ ಅವರ ಎಸ್ಕಾರ್ಟ್ ವಾಹನ ಪಲ್ಟಿಯಾಗಿದ. ಕಾರಿನಲ್ಲಿದ್ದ ಇಬ್ಬರು ಎಸ್ಕಾರ್ಟ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೌಡಹಳ್ಳಿ ಟಿಎಂ ಹೊಸೂರು ಬಳಿಯ ಬೆಂ-ಮೈ ಎಕ್ಸ್ಪ್ರೆಸ್ ಹೈವೆಯಲ್ಲಿ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ವ್ಯಾಪ್ತಿಯ ಎಕ್ಸ್ಪ್ರೆಸ್ ಹೈವೆ ಇದಾಗಿದೆ.
ಮೈಸೂರಿನ ಸಾಧನಾ ಸಮಾವೇಶ ಮುಗಿಸಿ ಡಿಸಿಎಂ ಡಿಕೆಶಿ ಬೆಂಗಳೂರಿಗೆ ವಾಪಾಸ್ ಬರುತ್ತಿದ್ದರು. ಡಿಕೆ ಶಿವಕುಮಾರ್ ಬೆಂಗಾವಲು ವಾಹನದಲ್ಲಿ ಎಸ್ಕಾರ್ಟ್ ಸಿಬ್ಬಂದಿ ತೆರಳುತ್ತಿದ್ದರು. ಡಿವೈಡರ್ ಡಿಕ್ಕಿಯಾಗಿ ಎಸ್ಕಾರ್ಟ್ ವಾಹನ ಪಲ್ಟಿಯಾಗಿದೆ. ಎಸ್ಕಾರ್ಟ್ ಕಾರಿನಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು, ಮೈಸೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಡಿಕೆಶಿ ಕುಳಿತಿದ್ದ ಕಾರು ಎಸ್ಕಾರ್ಟ್ ವಾಹನ ಹಿಂಬಾಲಿಸುತ್ತದ್ದರು. ಹಿಂದೆಯಿದ್ದ ಕಾರಣ ಅದೃಷ್ಟವಶಾತ್ ಡಿಕೆ ಶಿವಕುಮಾರ್ ಕಾರಿಗೆ ಯಾವುದೇ ಹಾನಿಯಾಗಿಲ್ಲ. ಸಿಬ್ಬಂದಿಯನ್ನು ಆಸ್ಪತ್ರೆಗೆ ಕಳಿಸಿ, ಘಟನೆ ಬಳಿಕ ಡಿಕೆ ಶಿವಕುಮಾರ್ ಬೆಂಗಳೂರಿಗೆ ಪ್ರಯಾಣ ಮುಂದುವರೆಸಿದ್ದಾರೆ.