
ಸಚಿವ ಪ್ರಿಯಾಂಕ್ ಖರ್ಗೆಯವರ ಆರ್ಎಸ್ಎಸ್ ನಿಷೇಧದ ಹೇಳಿಕೆಗೆ ಸಿ.ಟಿ. ರವಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಎಸ್ಎಸ್ ನಿಷೇಧಿಸುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಕ್ಕೆ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ವಿರುದ್ಧ ನೀಡಿದ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಆರ್ಎಸ್ಎಸ್ ಮೇಲೆ ನಿಷೇಧ ಹೇರುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಿಟಿ ರವಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಹಿಂದೂ ಕಾರ್ಯಕರ್ತರು, ಗೋವುಗಳ ಮೇಲಿನ ಅನಾಚಾರ ಕಾಂಗ್ರೆಸ್ ಅಧಿಕಾರದಲ್ಲೇ ಹೆಚ್ಚು ಎಂದಿದ್ದಾರೆ.
RSS ಬ್ಯಾನ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಕೊಟ್ಟ ಹೇಳಿಕೆಗೆ ಸಿಟಿ ರವಿ ಕೆಂಡಾಮಂಡಲ
ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯನ್ನು ಇಂದು ವಿರೋಧಿಸುವವರು, ಅಂಬೇಡ್ಕರ್ ಅವರ ಪೀಠಿಕೆ ಬದಲಾವಣೆಯಲ್ಲಿಯೂ ಮಾತು ಆಡದವರು. ಈ ದೃಷ್ಟಿಕೋನದಿಂದ ನೋಡಿದರೆ, ಹೊಸಬಾಳೆಯವರ ಮಾತುಗಳಲ್ಲಿ ಏನೂ ತಪ್ಪಿಲ್ಲ. ಪ್ರಿಯಾಂಕಾ ಖರ್ಗೆ ಇಂದಿರಾ ಗಾಂಧಿ ಅಥವಾ ನೆಹರೂಗಿಂತ ದೊಡ್ಡವರೇ? ನೆಹರೂಕಾಲದಲ್ಲಿ ಆರೆಸ್ಸೆಸ್ ಬ್ಯಾನ್ ಮಾಡಬೇಕೆಂದಿದ್ದರೂ ಸಹ, ನಿರ್ಧಾರಕ್ಕೆ ಬರಲಿಲ್ಲ. ಇಂದು ತಾವು ಒಬ್ಬರಿಗಿಂತ ಒಬ್ಬರು ಎತ್ತರದ ರಾಜಕೀಯ ಹೇಳಿಕೆ ನೀಡುತ್ತಾರೆ. ಸಂಘ ಅಸ್ಪೃಶ್ಯತೆಗೆ ವಿರುದ್ಧವಾಗಿ ಹಿಂದೂಗಳನ್ನು ಒಗ್ಗೂಡಿಸುತ್ತಿದೆ. ಈ ನಿಟ್ಟಿನಲ್ಲಿ ಸಂಘದ ಕಾರ್ಯವನ್ನು ಸಮರ್ಥವಾಗಿ ಅರ್ಥಮಾಡಿಕೊಳ್ಳಬೇಕಾದ ಅವಶ್ಯಕತೆಯಿದೆ. ಮಾಹಿತಿ ಕೊರತೆ ಇದ್ದರೆ, ಶಾಖೆಗಳಿಗೆ ಭೇಟಿ ನೀಡಿ ಸ್ಪಷ್ಟತೆಯನ್ನು ಪಡೆಯಿರಿ. ಇಲ್ಲವಾದರೆ, ಕಾಲವೇ ಉತ್ತರ ನೀಡುತ್ತದೆ.
ಅಂಬೇಡ್ಕರ್ ರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್: ಸಿಟಿ ರವಿ
ಅಂಬೇಡ್ಕರ್ ವಿರುದ್ಧ ಹೆಚ್ಚಾಗಿ ದ್ವೇಷ ವ್ಯಕ್ತಪಡಿಸಿದ ಪಕ್ಷವೇ ಕಾಂಗ್ರೆಸ್. ಅವರ ಕಾಲದಲ್ಲಿ ಒಂದು ಸ್ಮಾರಕವನ್ನೂ ನಿರ್ಮಿಸಲಾಗಿಲ್ಲ. ಮೂರು ಪೀಳಿಗೆಯವರು ಪ್ರಧಾನಿಯಾಗಿ ಸೇವೆ ಸಲ್ಲಿಸಿದರೂ ಭಾರತ ರತ್ನ ನೀಡಲಿಲ್ಲ. ಇದು ಇತಿಹಾಸ. ಮೋದಿ ಸರ್ಕಾರ ಅಂಬೇಡ್ಕರ್ ಅವರ “ಪಂಚತೀರ್ಥ”ವನ್ನು ಸ್ಥಾಪಿಸುವ ಮೂಲಕ ಇತಿಹಾಸ ದಿಕ್ಕು ಬದಲಿಸಿತು ಎಂದರು.
ಸಮಾಜವಾದ ಎಲ್ಲಿ ಹುಟ್ಟಿತೊ ಅಲ್ಲೇ ಸತ್ತು ಹೋಗಿದೆ: ಸಿಟಿ ರವಿ
“ಒಬ್ಬನೇ ಪೈಗಂಬರ್, ಒಂದೇ ದೇವರು, ಒಂದೇ ಪವಿತ್ರ ಗ್ರಂಥ – ಇವುಗಳ ಹೊರತಾಗಿ ಉಳಿದವರು ಸೈತಾನರು ಎಂದು ಹೇಳಿದ್ದನ್ನು ನಂಬಬೇಕೊ.?” ಆದರೆ ಭಾರತೀಯ ಸಂಸ್ಕೃತಿಯಲ್ಲಿ “ದೇವನೊಬ್ಬ ನಾಮ ಹಲವಾರು” ಎಂಬ ತತ್ವವಿದೆ. ಪ್ರತಿ ಧರ್ಮಕ್ಕೂ ಅದರದೇ ಆದ ದಾರ್ಶನಿಕತೆ ಇದೆ. ಮತಿಗೊಂದು ಮತ ಎಂದು ಡಿವಿಜಿ ಹೇಳಿದ್ದರು. ನಮ್ಮದು ಸಮಾಜವಾದ ಅಲ್ಲ ಸಮಾಜವಾದ ಇಂದು ನಾವೆಲ್ಲರೂ ಅಳಿಸಿದ ಒಂದು ಕನಸು. ಸಮಾಜವಾದ ಹುಟ್ಟಿದ ರಷ್ಯಾ ಮತ್ತು ಚೀನಾದಂತ ರಾಷ್ಟ್ರಗಳೇ ಈಗ ಬಂಡವಾಳಶಾಹಿ ಮಾರ್ಗವನ್ನು ಅಳವಡಿಸಿಕೊಂಡಿವೆ. “ಜಾತ್ಯಾತೀತ ಸಮಾಜವಾದ” ಎಂಬ ಪದವನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಚರ್ಚೆ ಇಲ್ಲದೆ ಸಂವಿಧಾನದಲ್ಲಿ ಸೇರಿಸಿದವರು ಇಂದಿರಾ ಗಾಂಧಿಯವರು. ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ – “ಭಾರತ ದೇಶವು ಯಾವುದೇ ಒಬ್ಬ ಧರ್ಮ ಅಥವಾ ಇಸಂ ಮೂಲಕ ಗುರುತಿಸಿಕೊಳ್ಳಬಾರದು.” ಇದು ಸಂವಿಧಾನದ ಮೂಲ ಆತ್ಮ. ಆದರೆ, ಕಳೆದ ಕೆಲ ದಶಕಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕೆಲವರು – “ಇಂದಿರಾ ಇಸ್ ಇಂಡಿಯಾ” ಎಂಬಂತಹ ಭಕ್ತಿಕಾವ್ಯದ ಶೈಲಿಯಲ್ಲಿ ಬೂಟು ನೆಕ್ಕಿದವರು. ಇಂದು ಜನ್ಮಸಿದ್ಧ ಹಕ್ಕುಗಳ ಕುರಿತು ಹೋರಾಟ ಮಾಡುವ ನೈತಿಕತೆ ಹೊಂದಿಲ್ಲ.
ಪುಣ್ಯ ಕೋಟಿ ಗೋವಿನ ಕಥೆ ಹೇಳಿರೋ ದೇಶ ನಮ್ಮದು
ಗೋವಿನ ಕುರಿತ ಇತ್ತೀಚಿನ ಘಟನೆಗಳು ಎಚ್ಚರಿಕೆಗೆ ಕಾರಣವಾಗಿವೆ. ಬೆಂಗಳೂರು ಚಾಮರಾಜಪೇಟೆ, ಕಡೂರು, ಹೊಸನಗರ, ಬೆಳಗಾವಿ ಮುಂತಾದ ಕಡೆಗಳಲ್ಲಿ ಹಸುವಿನ ಮೇಲಿನ ಹಲ್ಲೆ ಪ್ರಕರಣಗಳು ನಡೆದಿದ್ದು, ಈವರೆಗೂ ಮಾನಸಿಕ ಅಸ್ವಸ್ಥರೆಂದು ಸಮರ್ಥನೆ ನೀಡಲಾಗಿದೆ. ಆದರೆ ಇಷ್ಟು ಸಂಖ್ಯೆಯಲ್ಲಿ ಮಾನಸಿಕ ಅಸ್ವಸ್ಥರು ಹೇಗೆ ಇರುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಈ ತರಹದ ಘಟನೆಗಳು ಹೆಚ್ಚಾಗುತ್ತಿರುವುದನ್ನು ಗಮನಿಸಬೇಕು. ಬಸವಣ್ಣರು ಬೋಧಿಸಿದ “ಸಕಲ ಜೀವಾತ್ಮಗಳಿಗೂ ಒಳಿತಾಗಲಿ” ಎಂಬ ಸಂದೇಶ ಇಂದು ಮರೆತಂತಾಗಿದೆ. ನಮ್ಮ ದೇಶವು ಪುಣ್ಯಕೋಟಿ ಕಥೆಯನ್ನು ತಲಮೂರಿನಿಂದ ಹೇಳಿಕೊಂಡು ಬಂದಿದೆ – ಇಲ್ಲಿ ಹುಲಿ ಸಾಯುತ್ತದೆ ಆದರೆ ಗೋಪಾತ್ರ ಉಳಿಯುತ್ತದೆ ಎಂಬ ತತ್ವವಿದೆ. ಇಂದು ಆಗುತ್ತಿರುವ ಹಿಂಸಾತ್ಮಕ ಘಟನೆಗಳು ಸಮಾಜವನ್ನು ಕೆರಳಿಸಲು ಇಚ್ಛಾಪೂರ್ವಕವಾಗಿ ನಡೆಯುತ್ತಿರುವ ಶಂಕೆ ಇದೆ.
ಗೋ ರಕ್ಷಕರ ಬಂಧನ ಸರಿಯಲ್ಲ. ಅನಧಿಕೃತವಾಗಿ ಗೋ ಹತ್ಯೆ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು. ಇಂಗಳಗಿಯಲ್ಲಿ ಹಲ್ಲೆ ಮಾಡಿದವರಿಗೂ ಕಾನೂನು ಕ್ರಮ ಕೈಗೊಳ್ಳಬೇಕು. ಎಂಟು ಗೋ ಹತ್ಯಾ ಕೇಂದ್ರ ತೆರೆಯಲಾಗಿದೆ ಎಂಬುದು ಗಂಭೀರ ವಿಚಾರ. ಗೋ ಶಾಲೆಗೆ ಕಳಿಸಿದ ಹಸುಗಳನ್ನು ಮರುವಾಗಿ ಹತ್ಯೆಗೆ ಒಳಪಡಿಸುವ ಪ್ರಯತ್ನಗಳು ನಡೆಯುತ್ತಿವೆ.