
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ರೆಡ್ ಅಲರ್ಟ್ ಘೋಷಣೆ. ಭಾರೀ ಮಳೆ, ಗಾಳಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ. ಸುರಕ್ಷಿತ ಸ್ಥಳಗಳಿಗೆ ತೆರಳಲು ಅಧಿಕಾರಿಗಳ ಸೂಚನೆ.
ಕಾರವಾರ, ಉತ್ತರಕನ್ನಡ (ಜುಲೈ.25): ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಹವಾಮಾನ ಇಲಾಖೆಯು ತೀವ್ರ ಎಚ್ಚರಿಕೆಯನ್ನು ಘೋಷಿಸಿದೆ. ಇಂದು ರಾತ್ರಿ 8:30 ರಿಂದ ಜುಲೈ 26ರ ಬೆಳಿಗ್ಗೆ 5:30 ರವರೆಗೆ ರೆಡ್ ಅಲರ್ಟ್ ಜಾರಿಯಲ್ಲಿರುವುದಾಗಿ ತಿಳಿಸಲಾಗಿದೆ.
ಭಾರೀ ಮಳೆಯ ಜೊತೆಗೆ ಗಂಟೆಗೆ 35-45 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಸಾರ್ವಜನಿಕರು ಮತ್ತು ಪ್ರವಾಸಿಗರು ಸಮುದ್ರ, ನದಿ ಹಾಗೂ ನೀರಿನ ತಾಣಗಳಿಗೆ ಭೇಟಿ ನೀಡದಂತೆ ಸೂಚಿಸಲಾಗಿದೆ.
ನದಿಗಳ ತೀರದಲ್ಲಿ ವಾಸಿಸುವವರು ಹಠಾತ್ ಪ್ರವಾಹ ಸಾಧ್ಯತೆ ಹಿನ್ನೆಲೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಾಯಕಾರಿ ಮರಗಳಿರುವ ಪ್ರದೇಶಗಳಲ್ಲಿ ಆಶ್ರಯ ಪಡೆಯದಂತೆ ಮತ್ತು ಗುಡ್ಡದ ಇಳಿಜಾರಿನಲ್ಲಿ ವಾಸಿಸುವವರು ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಪಾಲಕರು ತಮ್ಮ ಮಕ್ಕಳು ಸಮುದ್ರ ತೀರಕ್ಕೆ ಹೋಗದಂತೆ ವಿಶೇಷ ಜಾಗೃತೆ ವಹಿಸಬೇಕು ಎಂದು ಮನವಿ ಮಾಡಲಾಗಿದೆ. ಸಮುದ್ರ ತೀರದಲ್ಲಿ ಯಾವುದೇ ರೀತಿಯ ಮನರಂಜನಾ ಚಟುವಟಿಕೆಗಳನ್ನು ನಡೆಸದಂತೆ ಎಚ್ಚರಿಕೆ ನೀಡಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಲು ಕಂಟ್ರೋಲ್ ರೂಮ್ ಸಂಖ್ಯೆ 08382-229857 ಮತ್ತು ಮೊಬೈಲ್ ಸಂಖ್ಯೆ 9483511015 ಒದಗಿಸಲಾಗಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇದ್ದು, ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಸೂಚಿಸಲಾಗಿದೆ.