5 ಹುಲಿ ಸಾವು ಮಾಸುವ ಮುನ್ನವೇ 18ಕ್ಕೂ ಹೆಚ್ಚು ಕೋತಿಗಳ ಮಾರಣಹೋಮ! | Asianet Suvarna News | Mass Killing Of Monkeys In Chamarajanagar District Rav

5 ಹುಲಿ ಸಾವು ಮಾಸುವ ಮುನ್ನವೇ 18ಕ್ಕೂ ಹೆಚ್ಚು ಕೋತಿಗಳ ಮಾರಣಹೋಮ! | Asianet Suvarna News | Mass Killing Of Monkeys In Chamarajanagar District Rav



ಚಾಮರಾಜನಗರದಲ್ಲಿ 18ಕ್ಕೂ ಹೆಚ್ಚು ಕೋತಿಗಳು ವಿಷಪ್ರಾಶನದಿಂದ ಸಾವನ್ನಪ್ಪಿವೆ. ಕಿಡಿಗೇಡಿಗಳು ಚೀಲಗಳಲ್ಲಿ ಕೋತಿಗಳ ಶವಗಳನ್ನು ತಂದು ಬಿಸಾಡಿರುವುದು ಕಂಡುಬಂದಿದೆ. ಈ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದಲ್ಲಿ ನಡೆದಿದ್ದು, ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.

ವರದಿ – ಪುಟ್ಟರಾಜು. ಆರ್.

ಚಾಮರಾಜನಗರ (ಜು.2): ವಿಷವಿಕ್ಕಿ 5 ಹುಲಿಗಳ ಹತ್ಯೆ ಪ್ರಕರಣ ಮಾಸುವ ಮುನ್ನವೇ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮತ್ತೊಂದು ಮನಕಲಕುವ ಘಟನೆ ನಡೆದಿದೆ. ವಿಷಪ್ರಾಶನದಿಂದ 18 ಕ್ಕೂ ಹೆಚ್ಚು ಕೋತಿಗಳನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ. ಯಾರೋ ಕಿಡಿಗೇಡಿಗಳು ರಾತ್ರೋರಾತ್ರಿ ಚೀಲದಲ್ಲಿ ತಂದು ಬಿಸಾಡಿ ಹೋಗಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 5 ಹುಲಿಗಳು ಮೃತಪಟ್ಟ ಬೆನ್ನಲ್ಲೆ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಕೊಡಸೋಗೆ ರಸ್ತೆಯಲ್ಲಿ ಕೋತಿಗಳ ಮಾರಣಹೋಮ ನಡೆದಿದೆ. ಕಂದೇಗಾಲ-ಕೊಡಸೋಗೆ ರಸ್ತೆಯಲ್ಲಿ ಎರಡು ಚೀಲಗಳಲ್ಲಿ ಕೋತಿಗಳ ಶವವನ್ನು ಕಟ್ಟಿಟ್ಟು ಬಿಸಾಡಿ ಹೋಗಿದ್ದಾರೆ. ದಾರಿಹೋಕರು ಚೀಲವನ್ನು ಬಿಚ್ಚಿ ನೋಡಿದ ವೇಳೆ 20 ಕ್ಕೂ ಅಧಿಕ ಕೋತಿಗಳು ಮೃತ ದೇಹಗಳು ಸಿಕ್ಕಿವೆ. ಮೇಲ್ನೋಟಕ್ಕೆ ವಿಷ ಪ್ರಶಾನ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಎರಡು ಚೀಲಗಳಲ್ಲಿ ಕೋತಿಗಳ ಶವವನ್ನು ಪಾಪಿಗಳು ಬಿಸಾಡಿ ಹೋಗಿದ್ದಾರೆ.

ಇನ್ನು, ಕೋತಿಗಳು ಶವ ಸಿಕ್ಕ ಪ್ರದೇಶವು ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯಕ್ಕೆ ಬರಲಿದ್ದು ಅರಣ್ಯ ಸಿಬ್ಬಂದಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಕೋತಿಗಳ ಸಾವಿಗೆ ಕಾರಣರಾದವರಿಗೆ ದೇವರೆ ಶಿಕ್ಷೆ ಕೊಡ್ತಾನೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಮೇಲ್ನೋಟಕ್ಕೆ ವಿಷ ಪ್ರಾಶನದಿಂದ ಸಾವನ್ನಪ್ಪಿರುವ ಶಂಕೆಯಿದ್ದು ಮರಣೋತ್ತರ ಪರೀಕ್ಷೆ ಬಳಿಕ ನಿಜಾಂಶ ಗೊತ್ತಾಗಲಿದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.

ಇನ್ನೂ ಕೋತಿಗಳ ಸಾವಿನ ಬಗ್ಗೆ ತಿಳಿಯುತ್ತಲೇ ಅರಣ್ಯ ಸಿಬ್ಬಂದಿ, ಅರಣ್ಯಾಧಿಕಾರಿಗಳು ಕೂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.ರಸ್ತೆಯಲ್ಲಿ ಬಿದ್ದಿದ್ದ ಕೋತಿಗಳನ್ನು ಅರಣ್ಯ ಇಲಾಖೆ ವಾಹನದಲ್ಲಿ ಕೊಂಡೊಯ್ದು ಪಶು ವೈದ್ಯರಾದ ವಾಸೀಂ ಮಿರ್ಜಾ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ಥಳಕ್ಕೆ ಬಂಡೀಪುರದ ಡಿಸಿಎಫ್ ಪ್ರಭಾಕರನ್ ಕೂಡ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಸಿಬ್ಬಂದಿಯಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಸ್ಥಳೀಯವಾಗಿ ಸಿಸಿಟಿವಿ ಪರಿಶೀಲನೆ ಮಾಡ್ತಿದ್ದೇವೆ, ವಿಷ ಪ್ರಾಶನ ಮಾಡಿ ಕೊಂದಿರುವ ಶಂಕೆಯಿದೆ.ಯಾರೇ ದುರ್ಘಟನೆ ಮಾಡಿದರು ಅವರ ವಿರುದ್ಧ ಕ್ರಮ ಜರುಗಿಸ್ತೀವಿ ಎಂದರು.

ಒಟ್ನಲ್ಲಿ 5 ಹುಲಿಗಳ ಸಾವು ಮಾಸುವ ಮುನ್ನವೇ ಈ ಕೋತಿಗಳ ಮಾರಣ ಹೋಮ ನಡೆದಿರೋದು ಮಾತ್ರ ಘೋರ ದುರಂತ. ಕೋತಿಗಳ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕಿದೆ..



Source link

Leave a Reply

Your email address will not be published. Required fields are marked *