ಮಲ್ಟಿಫ್ಲೆಕ್ಸ್ಗಳು ಸೇರಿ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಗಳ ಸಿನಿಮಾ ಪ್ರದರ್ಶನಕ್ಕೆ ಏಕರೂಪ ಟಿಕೆಟ್ ದರ ಜಾರಿಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ.
ಬೆಂಗಳೂರು (ಜು.16): ಮಲ್ಟಿಫ್ಲೆಕ್ಸ್ಗಳು ಸೇರಿ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಗಳ ಸಿನಿಮಾ ಪ್ರದರ್ಶನಕ್ಕೆ ಏಕರೂಪ ಟಿಕೆಟ್ ದರ ಜಾರಿಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ. ಮನರಂಜನಾ ತೆರಿಗೆ ಒಳಗೊಂಡಂತೆ ಟಿಕೆಟ್ ದರ ₹200 ಮೀರದಂತೆ ಕರ್ನಾಟಕ ಸಿನಿಮಾಗಳು (ನಿಯಂತ್ರಣ) ನಿಯಮಗಳು 2014ಕ್ಕೆ ತಿದ್ದುಪಡಿ ತಂದಿದೆ. ಈ ತಿದ್ದುಪಡಿ ಕರಡು ಸಂಬಂಧ ಯಾವುದೇ ಆಕ್ಷೇಪಣೆ ಮತ್ತು ಸಲಹೆಗಳು ಇದ್ದಲ್ಲಿ 15 ದಿನಗೊಳಗೆ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಬೇಕು.
ಒಂದು ವೇಳೆ ಯಾವುದೇ ಆಕ್ಷೇಪಣೆಗಳು ಬಾರದಿದ್ದಲ್ಲಿ ತಿದ್ದುಪಡಿ ಕರಡು ಅಧಿಸೂಚನೆ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ. ಮಲ್ಪಿಫ್ಲೆಕ್ಸ್ ಸೇರಿ ಕೆಲ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಅತ್ಯಂತ ದುಬಾರಿಯಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಧಿವೇಶನದಲ್ಲಿ ಸಹ ಈ ಬಗ್ಗೆ ಅನೇಕ ಸದಸ್ಯರು ಚರ್ಚಿಸಿ ಏಕರೂಪದ ದರ ನಿಗದಿಪಡಿಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರಮಂದಿರಗಳ ಟಿಕೆಟ್ ದರವನ್ನು ₹200 ನಿಗದಿಗೊಳಿಸುವುದಾಗಿ ಘೋಷಿಸಿದ್ದರು.
ದೆಹಲಿಗೆ ದಾವಣಗೆರೆ ಬಿಜೆಪಿ ಟೀಂ ಭೇಟಿ: ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ, ಬಿಜೆಪಿ ಭಿನ್ನರ ದೆಹಲಿ ಭೇಟಿ, ದಾವಣಗೆರೆಯಲ್ಲಿನ ಬಿಜೆಪಿ ಸ್ಥಳೀಯ ನಾಯಕರ ನಡುವಿನ ಬಣ ರಾಜಕೀಯದ ನಡುವೆಯೇ ದಾವಣಗೆರೆಯ ಬಿಜೆಪಿ ಟೀಂ ದೆಹಲಿಗೆ ಭೇಟಿ ನೀಡಿದೆ. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದ ಈ ತಂಡದಲ್ಲಿ ದಾವಣಗೆರೆ ಜಿಲ್ಲಾಧ್ಯಕ್ಷ ರಾಜಶೇಖರ್ ಸೇರಿ ಎಂಟು ಮಂದಿಯಿದ್ದಾರೆ. ತಮ್ಮ ದೆಹಲಿ ಭೇಟಿಯ ವೇಳೆ ತಂಡದ ಸದಸ್ಯರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ.
ಭೇಟಿ ವೇಳೆ, ತಂಡದ ಸದಸ್ಯರು ದಾವಣಗೆರೆ ಜಿಲ್ಲೆಯ ಬಿಜೆಪಿ ಗಲಾಟೆ ಸೇರಿ ಹಲವು ವಿಚಾರಗಳನ್ನು ಹೈಕಮಾಂಡ್ಗೆ ತಿಳಿಸಲಿದ್ದಾರೆ. ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನೇ ಮುಂದುವರಿಸಲು ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ದಾವಣಗೆರೆಯಲ್ಲಿ ಬಿಜೆಪಿಯ ಬಣ ರಾಜಕೀಯ ತಾರಕಕ್ಕೇರಿರುವ ಈ ಸಂದರ್ಭದಲ್ಲಿ ರೇಣುಕಾಚಾರ್ಯ ಅವರ ದೆಹಲಿ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಜಿಲ್ಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಬೆಂಬಲಿಗರು ಒಂದು ಕಡೆಯಾದರೆ, ಜಿಎಂ ಸಿದ್ದೇಶ್ವರ, ಬಿ.ಪಿ.ಹರೀಶ್ ಬೆಂಬಲಿಗರು ಒಂದು ಕಡೆ ಎನ್ನುವಂತಾಗಿದೆ.