
ದೆಹಲಿ ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. 2018-19ರ ಆಸ್ಪತ್ರೆ ನಿರ್ಮಾಣ ಯೋಜನೆಯಲ್ಲಿನ ಅಕ್ರಮ ಹಾಗೂ ಹಣಕಾಸು ಅವ್ಯವಹಾರದ ಆರೋಪದ ಮೇಲೆ ಈ ದಾಳಿ ನಡೆದಿದೆ. 5,590 ಕೋಟಿ ರೂ. ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.
ದೆಹಲಿ: ಆಮ್ ಆದ್ಮಿ ಪಕ್ಷದ (AAP) ಪ್ರಮುಖ ನಾಯಕ ಹಾಗೂ ದೆಹಲಿ ಶಾಸಕ ಸೌರಭ್ ಭಾರದ್ವಾಜ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಇಂದು ಬೆಳಿಗ್ಗೆ ದಾಳಿ ನಡೆಸಿದೆ. ಒಟ್ಟು 13 ಕಡೆಗಳಲ್ಲಿ ಒಂದೇ ಸಮಯದಲ್ಲಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ದಾಳಿ 2018-19ರಲ್ಲಿ ದೆಹಲಿ ಸರ್ಕಾರ ರೂಪಿಸಿದ್ದ ಆಸ್ಪತ್ರೆಗಳ ನಿರ್ಮಾಣ ಯೋಜನೆಗೆ ಸಂಬಂಧಿಸಿದೆ. ಆ ಸಮಯದಲ್ಲಿ ಸರ್ಕಾರವು 24 ಹೊಸ ಆಸ್ಪತ್ರೆಗಳ ನಿರ್ಮಾಣಕ್ಕಾಗಿ 5,590 ಕೋಟಿ ರೂ. ಮೌಲ್ಯದ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿತ್ತು. ಆದರೆ, ಈ ಯೋಜನೆಯಲ್ಲಿ ಭಾರಿ ಮಟ್ಟದ ಅಕ್ರಮ ಮತ್ತು ಹಣಕಾಸು ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಗರಣಕ್ಕೆ ಸಂಬಂಧಿಸಿದಂತೆ ಮನಿ ಲಾಂಡ್ರಿಂಗ್ ಪ್ರಕರಣ ದಾಖಲಾಗಿದ್ದು, ಅದರ ಅಡಿ ಇಡಿ ತನಿಖೆ ನಡೆಸುತ್ತಿದೆ. ದೆಹಲಿಯ ಹಲವಾರು ಸ್ಥಳಗಳಲ್ಲಿನಂತೆ ಸೌರಭ್ ಭಾರದ್ವಾಜ್ ಹಾಗೂ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರ ನಿವಾಸ ಮತ್ತು ಕಚೇರಿಗಳ ಮೇಲೂ ಶೋಧ ಕಾರ್ಯ ನಡೆದಿದೆ.
5590 ಕೋಟಿಯ ಯೋಜನೆಗೆ ಅಕ್ರಮದ ನೆರಳು
ಮೂಲಗಳ ಪ್ರಕಾರ, ಆಸ್ಪತ್ರೆ ನಿರ್ಮಾಣಕ್ಕಾಗಿ ಹೊರಡಿಸಿದ ಕೋಟ್ಯಾಂತರ ರೂಪಾಯಿಗಳಲ್ಲಿ ಟೆಂಡರ್, ಗುತ್ತಿಗೆ ಹಾಗೂ ಪಾವತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೆಲವು ಕಂಪನಿಗಳಿಗೆ ನಿಯಮ ಉಲ್ಲಂಘಿಸಿ ಗುತ್ತಿಗೆ ನೀಡಲಾಗಿದೆ, ಹಾಗೆಯೇ ಕಾಗದ ದಾಖಲೆಗಳಲ್ಲಿ ದೊಡ್ಡ ವ್ಯತ್ಯಾಸವಿದೆ ಎಂದು ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸೌರಭ್ ಭಾರದ್ವಾಜ್ ಹಾಗೂ ಸತ್ಯೇಂದ್ರ ಜೈನ್ ವಿರುದ್ಧ ಅಧಿಕೃತ ದೂರು ದಾಖಲಾಗಿದೆ. ಇವರಿಬ್ಬರು ಆ ಸಮಯದಲ್ಲಿ ಆರೋಗ್ಯ ಇಲಾಖೆ ಸಂಬಂಧಿತ ನಿರ್ಧಾರಗಳಲ್ಲಿ ನೇರವಾಗಿ ಭಾಗಿಯಾಗಿದ್ದರು ಎಂಬ ಆರೋಪವಿದೆ. ಇಡೀ ಪ್ರಕ್ರಿಯೆಯಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ಹೂಡಿಕೆಗಳ ದುರುಪಯೋಗ ನಡೆದಿದೆ ಎಂಬ ಸುಳಿವು ಇಡಿಗೆ ಲಭಿಸಿದೆ. ಈ ದಾಳಿ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ವಿವಿಧ ಹಗರಣ ಪ್ರಕರಣಗಳಲ್ಲಿ ಇಡೀ ತನಿಖೆಯ ಅಡಿಯಲ್ಲಿ ಇರುವ ಆಪ್ ಪಕ್ಷದ ಹಲವಾರು ನಾಯಕರ ಪೈಕಿ, ಇದೀಗ ಸೌರಭ್ ಭಾರದ್ವಾಜ್ ಹೆಸರು ಸೇರ್ಪಡೆಯಾಗಿದೆ.