Headlines

ಸಿಎಂ ಬದಲಾವಣೆ ಕುರಿತು ನಮಗೆಲ್ಲ ಬಾಯಿ ಮುಚ್ಚಿಕೊಂಡು ಇರಲು ಹೇಳಿದ್ದಾರೆ: ಮಧು ಬಂಗಾರಪ್ಪ | Minister Madhu Bangarappa Reaction On Karnataka Cm Change Gow

ಸಿಎಂ ಬದಲಾವಣೆ ಕುರಿತು ನಮಗೆಲ್ಲ ಬಾಯಿ ಮುಚ್ಚಿಕೊಂಡು ಇರಲು ಹೇಳಿದ್ದಾರೆ: ಮಧು ಬಂಗಾರಪ್ಪ | Minister Madhu Bangarappa Reaction On Karnataka Cm Change Gow



ಸಿಎಂ ಬದಲಾವಣೆ ವಿಚಾರದಲ್ಲಿ ಮೌನ ವಹಿಸುವುದಾಗಿ ಕೊಪ್ಪಳದಲ್ಲಿ ಮಧು ಬಂಗಾರಪ್ಪ ಹೇಳಿಕೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಿಂದುತ್ವದ ಬಗ್ಗೆ ಬಿಜೆಪಿಗೆ ಏನು ಗೊತ್ತು ಎಂದು ಪ್ರಶ್ನಿಸಿದರು. ತಮ್ಮ ಹೇರ್‌ಸ್ಟೈಲ್‌ ಬಗ್ಗೆ ಮಾತನಾಡಿ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ಕೊಪ್ಪಳ ಜಿಲ್ಲೆಯ ಹಿರೇವಂಕಲಕುಂಟ ಗ್ರಾಮದಲ್ಲಿ ಮಧು ಬಂಗಾರಪ್ಪ ಅವರು ಸಿಎಂ ಬದಲಾವಣೆ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅವರು ಮಾತನಾಡುತ್ತಾ, “ಸಿಎಂ ಬದಲಾವಣೆ ಕುರಿತು ನಮಗೆಲ್ಲ ಬಾಯಿ ಮುಚ್ಚಿಕೊಂಡು ಇರಲು ಹೇಳಿದ್ದಾರೆ. ನೀವು ಮಾಧ್ಯಮದಲ್ಲಿ ಯಾವ ಮಟ್ಟಿಗೆ ಚರ್ಚೆ ಮಾಡಿಕೊಂಡು ಕುಳಿತುಕೊಳ್ಳುತ್ತೀರೋ ಅದಕ್ಕೆ ನನಗೆ ಯಾವುದೇ ಸಂಬಂಧವಿಲ್ಲ,” ಎಂದು ಹೇಳಿದ್ದಾರೆ.

“ನಾನು ಬಾಯಿ ತೆರೆದು ಏನು ಪ್ರಯೋಜನ? ನಾನು ಬಾಯಿ ತೆರೆಯುವವನು ಅಲ್ಲ. ಸಿಎಂ ಬದಲಾವಣೆ ವಿಚಾರದಲ್ಲಿ ಗಪ್‌ಚುಪ್ ಆಗಿಯೇ ಇರುತ್ತೇನೆ,” ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಸುರಜೆವಾಲ ಅವರ ಶಾಸಕರ ಸಭೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ, “ಅವರು ನಮ್ಮ ನಾಯಕರು. ಬಂದು ಸಭೆ ನಡೆಸಿ ಹೋಗುತ್ತಾರೆ. ಅದರಿಂದ ನಿಮಗೆ ಏನು?” ಎಂದು ಪ್ರಶ್ನಿಸಿದರು. ಶಾಸಕರ ಅಸಮಧಾನ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ, “ಅವರೇನು ನಿಮಗೆ ಬಂದು ಹೇಳಿದಾರಾ?” ಎಂದು ಮಧು ಬಂಗಾರಪ್ಪ ಹೇಳಿದರು.

ತನ್ನ ಹೇರ್‌ಸ್ಟೈಲ್‌ ಬಗ್ಗೆ ಕೇಳಿ ಚಪ್ಪಾಳೆ ಹೊಡೆಸಿಕೊಂಡ ಸಚಿವರು

ಕೊಪ್ಪಳ ಜಿಲ್ಲೆಯ ಹಿರೇವಂಕಲಕುಂಟ ಗ್ರಾಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬಿಜೆಪಿ ವಿರುದ್ಧ ತೀವ್ರ ವ್ಯಂಗ್ಯವಾಡಿದ್ದಾರೆ. “ಬಿಜೆಪಿ ಅವರು ಹಿಂದುತ್ವ, ಹಿಂದುತ್ವ ಎಂದು ಮಾತನಾಡುತ್ತಾರೆ. ಅವರಿಗೇನು ಗೊತ್ತು ಹಿಂದುತ್ವ ಬದನೆಕಾಯಿ!” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

“ಹಿಂದುತ್ವ ಇವರಿಗೇನು ಗೊತ್ತು? ದೇವಾಲಯಗಳನ್ನು ಅಭಿವೃದ್ಧಿಪಡಿಸಲು ಅವರಿಂದ ಆಗುತ್ತಿರಲಿಲ್ಲ. ನಾವು ಆರಾಧನಾ ಕಾರ್ಯಕ್ರಮಗಳ ಮೂಲಕ ದೇವಸ್ಥಾನಗಳಿಗೆ ಹಣ ನೀಡಿದ್ದೇವೆ. ಅಲ್ಲಿ ಯಾವ ಜಾತಿ ನೋಡಲಿಲ್ಲ. ಉದಾಹರಣೆಗೆ, ಅಜೀಂ ಪ್ರೇಮ್‌ಜಿ ಅವರು ಯಾವ ಜಾತಿಯವರು? ಇಂತಹ ಪುಣ್ಯಾತ್ಮರು ನಮ್ಮ ರಾಜ್ಯದಲ್ಲಿ ಇರುವುದೇ ನಮಗೆ ಪುಣ್ಯ.” ಎಂದು ಹೇಳಿದರು.

 “ನಮ್ಮ ತಂದೆ ಬಂಗಾರಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರಿ ಶಾಲೆಯಲ್ಲಿ ಕಲಿತವರು. ಸಿದ್ದರಾಮಯ್ಯ ನೇರವಾಗಿ 4ನೇ ತರಗತಿಗೆ ಹೋಗಿದ್ದಾರೆ. ಅದುವರೆಗೂ ಅವರು ದನ ಕಾಯುತ್ತಿದ್ದರೋ, ಏನು ಮಾಡುತ್ತಿದ್ದರೋ ಗೊತ್ತಿಲ್ಲ!” ಎಂದು ವ್ಯಂಗ್ಯಭರಿತವಾಗಿ ಹೇಳಿದರು.

“ನನ್ನ ಕ್ಷೇತ್ರದಲ್ಲಿ ಜನರು ದೇವಸ್ಥಾನಕ್ಕೆ ಹಣ ಕೇಳಲು ಬರುತ್ತಾರೆ. ಆದರೆ, ನಾನು ಯಾವುದೇ ದೇವಸ್ಥಾನಕ್ಕೆ ಹಣ ನೀಡುವುದಿಲ್ಲ. ದೇವಾಲಯದ ಗಂಟೆ ಹೊಡೆದರೆ ಏನಾಗುತ್ತೋ ಗೊತ್ತಿಲ್ಲ. ಆದರೆ, ಅದಕ್ಕಿಂತ ಹೆಚ್ಚು ಶಾಲೆಯ ಗಂಟೆ ಹೊಡೆಯಬೇಕು,” ಎಂದು ಶಿಕ್ಷಣಕ್ಕೆ ತಮ್ಮ ಒಲವು ವ್ಯಕ್ತಪಡಿಸಿದರು.

ಹೇರಸ್ಟೈಲ್ ಕುರಿತಾಗಿ ಮಧು ಬಂಗಾರಪ್ಪ ತಿಳಿಸುತ್ತಾ, “ನನ್ನ ಹೇರಸ್ಟೈಲ್ ಇರುವುದೇ ಹಿಂಗೆ. ಬಿಜೆಪಿಯವರು ಅನೇಕರು ಟೀಕೆ ಮಾಡುತ್ತಾರೆ. ಅವರು ಏನು ಬೇಕಾದರೂ ಮಾತನಾಡಲಿ. ಒಮ್ಮೆ ನಾನು ಹೇರ್‌ ಸ್ಟೈಲ್ ಸಣ್ಣದಾಗಿ ಮಾಡಿಸಿಕೊಂಡಿದ್ದೆ. ಆಗ ನಮ್ಮ ತಂದೆಯವರು ನನ್ನ ಜೊತೆ 15 ದಿನ ಮಾತನಾಡಿರಲಿಲ್ಲ. ಈಗ ನನ್ನ ಹೇರಸ್ಟೈಲ್ ಚೆನ್ನಾಗಿದ್ದರೆ ಒಂದು ಚಪ್ಪಾಳೆ ಹೊಡೆಯಿರಿ,” ಎಂದು ಮಧು ಬಂಗಾರಪ್ಪ  ಜನರಿಂದ ಚಪ್ಪಾಳೆ ಹೊಡೆಸಿಕೊಂಡರು.



Source link

Leave a Reply

Your email address will not be published. Required fields are marked *