
<p>ಬೆಂಗಳೂರಿನಲ್ಲಿ ಕೇವಲ 5 ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವೈಮನಸ್ಸಿನಿಂದ ವ್ಯಕ್ತಿಯೊಬ್ಬ ಪರಿಚಿತರ ಮನೆಯವರನ್ನು ಜೀವಂತವಾಗಿ ಸುಡಲು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹೋಗಿದ್ದಾನೆ. ಮುಂದೇನಾಯ್ತು ನೀವೇ ನೋಡಿ…</p><img><p><strong>ಬೆಂಗಳೂರು (ಜು. 11): </strong>ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವೈಮನಸ್ಸಿನ ಹಿನ್ನೆಲೆಯಲ್ಲಿ, ವ್ಯಕ್ತಿಯೊಬ್ಬರು ಪರಿಚಿತರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದಾರುಣ ಘಟನೆ ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದೆ. ಆರೋಪಿಯನ್ನು ಸ್ಥಳೀಯ ಪೊಲೀಸರು ತಕ್ಷಣ ಪತ್ತೆಹಚ್ಚಿ ಬಂಧಿಸಿದ್ದಾರೆ.</p><img><p><strong>ಘಟನೆ ವಿವರ:</strong></p><p>ಜುಲೈ 1 ರಂದು ಸಂಜೆ 5.30ರ ವೇಳೆಗೆ ವಿವೇಕನಗರದ ನಿವಾಸಿ ವೆಂಕಟರಮಣಿ ಹಾಗೂ ಅವರ ಪುತ್ರ ಸತೀಶ್ ವಾಸವಿರುವ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮನೆಯೊಳಗಿದ್ದವರು ತಕ್ಷಣವೇ ಕೆಳಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.</p><img><p>ಆರೋಪಿ ಪತ್ತೆ ಹಚ್ಚಿರುವ ಪೊಲೀಸರು, ಈ ಕೃತ್ಯವನ್ನು ಸುಬ್ರಮಣಿ ಎಂಬಾತ ಎಸಗಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ. ಪಾರ್ವತಿ, ತನ್ನ ಮಗಳು ಮಹಾಲಕ್ಷ್ಮಿಯ ಮದುವೆಗೆ ಸತೀಶ್ ತಾಯಿ ವೆಂಕಟರಮಣಿಯಿಂದ ಸುಮಾರು 5 ಲಕ್ಷ ರೂ. ಸಾಲ ಪಡೆದಿದ್ದರು. ಈ ಹಣವನ್ನು ಸುಮಾರು 7-8 ವರ್ಷಗಳಾಗಿದ್ದರೂ ಹಿಂತಿರುಗಿಸಿಲ್ಲ. ಅನೇಕ ಬಾರಿ ಹಣವನ್ನು ವಾಪಸ್ ನೀಡುವಂತೆ ಮನವಿ ಮಾಡಿದರೂ ವಾಪಸ್ ಕೊಟ್ಟಿರಲಿಲ್ಲ.</p><img><p>ಇತ್ತೀಚೆಗಿನ ಮದುವೆ ಕಾರ್ಯಕ್ರಮವೊಂದರಲ್ಲಿ ವೆಂಕಟರಮಣಿ ಹಾಗೂ ಪಾರ್ವತಿ ಮುಖಾಮುಖಿಯಾಗಿದ್ದು, ಮತ್ತೊಮ್ಮೆ ಸಾಲದ ಬಗ್ಗೆ ಮಾತು ನಡೆದಿದೆ. ಈ ಬಗ್ಗೆ ತಮ್ಮ ಸುಬ್ರಮಣಿಗೆ ತಿಳಿಸಿದ್ದ ಪಾರ್ವತಿಯ ಮಾತು ಆತನಿಗೆ ಕೋಪಕ್ಕೆ ಕಾರಣವಾಗಿದ್ದು, ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.</p><img><p><strong>ಮನೆಯಲ್ಲಿದ್ದವರು ಜಸ್ಟ್ ಸೇಫ್:</strong></p><p>ಬೆಂಕಿ ಹಚ್ಚಿದಾಗ ಮನೆಗೆಲ್ಲಾ ಹೊಗೆ ತುಂಬಿ, ಸತೀಶ್ ತಾಯಿ ವೆಂಕಟರಮಣಿ ಹಾಗೂ ಸಹೋದರ ಮೋಹನ್ ದಾಸ್ ಒಳಗೇ ಇದ್ದರು. ಗಲಾಟೆ ಕೇಳಿದ ಸ್ಥಳೀಯರು ಮನೆಯಿಂದ ಹೊರಗೆ ಬರುವಂತೆ ಕೂಗಿಕೊಂಡಿದ್ದಾರೆ. ಈ ಕೂಗಾಟದಿಂದ ಎಚ್ಚೆತ್ತುಕೊಂಡ ಕುಟುಂಬಸ್ಥರು ತಕ್ಷಣವೇ ಮನೆ ಬಿಟ್ಟು ಹೊರಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.</p><img><p>ಬೆಂಕಿಯಿಂದ ಮನೆಯ ಮುಂಭಾಗ ಮತ್ತು ಕಿಟಕಿಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಘಟನೆಯ ಕುರಿತು ಸತೀಶ್ ಅವರು ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದರು. ಸಿಸಿಟಿವಿ ಕ್ಯಾಮೆರಾ ನೋಡಿ ಆರೋಪಿ ಪತ್ತೆ ಮಾಡಿದ್ದರು. ಆದರೆ, ಆತನನ್ನು ಬಂಧಿಸಲು ಮುಂದಾದಾಗ ತಲೆಮರೆಸಿಕೊಂಡಿದ್ದನು.</p><img><p><strong>ಪೊಲೀಸರ ಕಾರ್ಯಾಚರಣೆ:</strong></p><p>ಈ ಪ್ರಕರಣದ ತನಿಖೆ ಕೈಗೊಂಡಿದ್ದ ವಿವೇಕನಗರ ಠಾಣೆಯ ಪೊಲೀಸರು ಹಾಗೂ ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಅಕ್ಷಯ್ ಎಂ ಹಾಕೆ ಅವರು, ಆರೋಪಿಯ ಪತ್ತೆಗಾಗಿ ಹೊರ ರಾಜ್ಯಗಳವರೆಗೂ ಹುಡುಕಾಟ ನಡೆಸಿದರು. ಜುಲೈ 9ರಂದು ಈಜಿಪುರ ನಿವಾಸಿಯಾದ ಸುಬ್ರಮಣಿಯನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ. ಹಣಕಾಸಿನ ವಿಚಾರದಿಂದಾಗಿ ಬೆಂಕಿಹಚ್ಚುವಂತಹ ಕ್ರೂರ ಕೃತ್ಯ ಎಸಗಿರುವುದಾಗಿ ಆರೋಪಿಯು ಒಪ್ಪಿಕೊಂಡಿದ್ದಾನೆ.</p><img><p>ಒಬ್ಬ ಮಹಿಳೆಯ ಸಾಲದ ವಿಷಯ ಆಕೆಯ ತಮ್ಮನ ಕ್ರೌರ್ಯಕ್ಕೆ ಕಾರಣವಾದ ಘಟನೆ, ಬೆಂಗಳೂರಿನ ಹೃದಯ ಭಾಗವನ್ನೇ ಬೆಚ್ಚಿಬೀಳಿಸಿದೆ. ಅದೃಷ್ಟವಶಾತ್ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನ್ಯಾಯಕ್ಕಾಗಿ ಕಾನೂನು ಕ್ರಮಕೈಗೊಂಡಿದ್ದು, ಪೊಲೀಸರು ಕೂಡಾ ಚುರುಕಿನಿಂದ ಕಾರ್ಯನಿರ್ವಹಿಸಿ ಆರೋಪಿಯನ್ನು ಸೆರೆಹಿಡಿದಿದ್ದಾರೆ.</p>
Source link
ಸಾಲದ ಹಣ ವಾಪಸ್ ಕೊಟ್ಟಿಲ್ಲವೆಂದು ಜೀವಂತ ಸುಡಲು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿರಾತಕ!