ನವದೆಹಲಿ, ಜೂನ್ 25: ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 50 ವರ್ಷಗಳು ಪೂರ್ಣಗೊಂಡಿರುವ ಸಮಯದಲ್ಲಿ ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಹೊರತಂದಿರುವ ‘ದಿ ಎಮರ್ಜೆನ್ಸಿ ಡೈರೀಸ್-ಇಯರ್ಸ್ ದಟ್ ಫೋರ್ಜ್ಡ್ ಎ ಲೀಡರ್’ (The Emergency Diaries – Years that Forged a Leader) ಪುಸ್ತಕವನ್ನು ಗೃಹ ಸಚಿವ ಅಮಿತ್ ಶಾ ಇಂದು ಲೋಕಾರ್ಪಣೆ ಮಾಡಲಿದ್ದಾರೆ.
ಈ ಪುಸ್ತಕವು ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಆಗ ಯುವ ಆರ್ಎಸ್ಎಸ್ ಪ್ರಚಾರಕರಾಗಿದ್ದ ಪ್ರಧಾನಿ ಮೋದಿ ವಹಿಸಿದ ಪಾತ್ರವನ್ನು ಒಳಗೊಂಡಿದೆ. ಪುಸ್ತಕದ ವಿಶೇಷ ಮುನ್ನುಡಿಯನ್ನು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಬರೆದಿದ್ದಾರೆ.
ಪುಸ್ತಕದ ಪ್ರಕಾರ, ಪ್ರಧಾನಿ ಮೋದಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಿಖ್, ಸ್ವಾಮೀಜಿ ಹೀಗೆ ಹತ್ತಾರು ವೇಷಗಳನ್ನು ತೊಟ್ಟಿದ್ದ ಪ್ರಧಾನಿ ಮೋದಿ ಕುರಿತು ಉಲ್ಲೇಖಿಸಲಾಗಿದೆ.
1970 ರ ದಶಕದ ಮಧ್ಯಭಾಗದಲ್ಲಿ ಭಾರತವು ತುರ್ತು ಪರಿಸ್ಥಿತಿಯ ಸಂಕೋಲೆಯಲ್ಲಿ ಸಿಲುಕಿದ್ದಾಗ, ಸಂಘದ ಯುವ ಪ್ರಚಾರಕರಾಗಿದ್ದ ಮೋದಿ, ಇತರ ಹಲವಾರು ಪ್ರಮುಖ ನಾಯಕರು ಮತ್ತು ಕಾರ್ಯಕರ್ತರೊಂದಿಗೆ, ಇಂದಿರಾ ಗಾಂಧಿಯವರ ನಿರಂಕುಶ ಆಡಳಿತದ ವಿರುದ್ಧ ಪ್ರತಿಭಟಿಸಿದ್ದರು ಎಂಬುದನ್ನು ಪುಸ್ತಕದಲ್ಲಿ ಹೇಳಲಾಗಿದೆ.
ಮತ್ತಷ್ಟು ಓದಿ: ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಒತ್ತೆಯಾಳಾಗಿರಿಸಿಕೊಂಡಿತ್ತು, ತುರ್ತು ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಮಾತು
ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಪ್ರಧಾನಿ ಮೋದಿ, ತುರ್ತು ಪರಿಸ್ಥಿತಿ ಹೇರಿದಾಗ, ನಾನು ಆರ್ಎಸ್ಎಸ್ನ ಯುವ ಪ್ರಚಾರಕನಾಗಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ತುರ್ತು ಪರಿಸ್ಥಿತಿ ವಿರೋಧಿ ಚಳವಳಿ ನನಗೆ ಕಲಿಕೆಯ ಅನುಭವವಾಗಿತ್ತು. ಇದು ನಮ್ಮ ಪ್ರಜಾಪ್ರಭುತ್ವ ರಚನೆಯನ್ನು ರಕ್ಷಿಸುವ ಮಹತ್ವವನ್ನು ಪುನರುಚ್ಚರಿಸಿತು.
ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಆ ಅನುಭವಗಳಲ್ಲಿ ಕೆಲವನ್ನು ಪುಸ್ತಕದ ರೂಪದಲ್ಲಿ ಸಂಗ್ರಹಿಸಿದೆ ಎಂದು ನನಗೆ ಸಂತೋಷವಾಗಿದೆ. ಇದರ ಮುನ್ನುಡಿಯನ್ನು ಸ್ವತಃ ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ ಅನುಭವಿ ಎಚ್ಡಿ ದೇವೇಗೌಡರು ಬರೆದಿದ್ದಾರೆ.
ತುರ್ತು ಪರಿಸ್ಥಿತಿಯ ಆ ಕರಾಳ ದಿನಗಳನ್ನು ನೆನಪಿಸಿಕೊಳ್ಳುವ ಅಥವಾ ಆ ಸಮಯದಲ್ಲಿ ಅವರ ಕುಟುಂಬಗಳು ಅನುಭವಿಸಿದ ಎಲ್ಲಾ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ಇದು 1975 ರಿಂದ 1977 ರವರೆಗಿನ ಸಮಯದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ