Headlines

ಕೃಷಿ ತರಬೇತಿ ಕೇಂದ್ರ ಸ್ಥಳಾಂತರ: ಸಚಿವ ಎಚ್.ಕೆ. ಪಾಟೀಲ್ ವಿರುದ್ಧ ಗ್ರಾಮಸ್ಥರ ಆಕ್ರೋಶ | Hk Patil Faces Backlash Over Shifting Krishi Training Centre To His Hometown Sat

ಕೃಷಿ ತರಬೇತಿ ಕೇಂದ್ರ ಸ್ಥಳಾಂತರ: ಸಚಿವ ಎಚ್.ಕೆ. ಪಾಟೀಲ್ ವಿರುದ್ಧ ಗ್ರಾಮಸ್ಥರ ಆಕ್ರೋಶ | Hk Patil Faces Backlash Over Shifting Krishi Training Centre To His Hometown Sat


ಗದಗ (ಆ.12): ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಕೃಷಿ ತರಬೇತಿ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರ ಸ್ವಗ್ರಾಮ ಹುಲಕೋಟಿಗೆ ಸ್ಥಳಾಂತರಿಸಲು ಮುಂದಾಗಿರುವ ಸರ್ಕಾರದ ನಿರ್ಧಾರದ ವಿರುದ್ಧ ಹೊಂಬಳ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತರಬೇತಿ ಕೇಂದ್ರವನ್ನು ಮೂಲ ಸ್ಥಳದಲ್ಲೇ ಉಳಿಸಬೇಕು ಎಂದು ಒತ್ತಾಯಿಸಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಆರಂಭದಲ್ಲಿ ಸಿಕ್ಕಿದ್ದ ಅನುಮೋದನೆ:
ಹೊಂಬಳ ಗ್ರಾಮವು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದ ಕುಗ್ರಾಮ. ಇಂತಹ ಗ್ರಾಮದಲ್ಲಿ 51 ಎಕರೆ ಪ್ರದೇಶದಲ್ಲಿ ಕೃಷಿ ತರಬೇತಿ ಕೇಂದ್ರ ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿತ್ತು. 2024ರಲ್ಲಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಕೂಡ ದೊರಕಿತ್ತು. ಈ ನಿರ್ಧಾರದಿಂದ ಗ್ರಾಮಸ್ಥರು ಸಂತಸಗೊಂಡಿದ್ದರು. ಈ ಯೋಜನೆ ಗ್ರಾಮದ ಅಭಿವೃದ್ಧಿಗೆ ಹೊಸ ಭರವಸೆ ಮೂಡಿಸಿತ್ತು.

ಸ್ಥಳಾಂತರಕ್ಕೆ ಕಾರಣವೇನು?
ಆದರೆ, ಕೃಷಿ ವಿಶ್ವವಿದ್ಯಾಲಯವು ಹೊಂಬಳದಲ್ಲಿ ಮೀಸಲಿಟ್ಟ ಜಾಗ ಕಟ್ಟಡ ನಿರ್ಮಾಣಕ್ಕೆ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ ಎಂದು ತಿಳಿದುಬಂದಿದೆ. ಇದರ ಆಧಾರದ ಮೇಲೆ, ತರಬೇತಿ ಕೇಂದ್ರವನ್ನು ಸಚಿವರ ಸ್ವಗ್ರಾಮ ಹುಲಕೋಟಿಗೆ ಸ್ಥಳಾಂತರಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಕ್ರಮವು ಗ್ರಾಮಸ್ಥರನ್ನು ಕೆರಳಿಸಿದೆ. ಇದು ಕೇವಲ ರಾಜಕೀಯ ಒತ್ತಡದಿಂದ ತೆಗೆದುಕೊಂಡ ನಿರ್ಧಾರ ಎಂದು ಅವರು ಆರೋಪಿಸಿದ್ದಾರೆ.

ಗ್ರಾಮಸ್ಥರಿಂದ ಹೋರಾಟದ ಎಚ್ಚರಿಕೆ
ಹೊಂಬಳ ಗ್ರಾಮಸ್ಥರಾದ ಅರುಣ್ ಕುಮಾರ್ ಮತ್ತು ರೈತ ಉಮೇಶ್ ಲಿಂಗರೆಡ್ಡಿ ಮಾತನಾಡಿ, ಸಚಿವರ ಪ್ರಭಾವದಿಂದ ಈ ಸ್ಥಳಾಂತರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ‘ನಮ್ಮ ಗ್ರಾಮದ ಅಭಿವೃದ್ಧಿಗೆ ಬಂದಿದ್ದ ಯೋಜನೆಯನ್ನು ವೈಯಕ್ತಿಕ ಲಾಭಕ್ಕಾಗಿ ಬೇರೆಡೆಗೆ ಸ್ಥಳಾಂತರಿಸುವುದು ಸರಿಯಲ್ಲ’ ಎಂದು ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ, ಮಂಜೂರಾದ ಮೂಲ ಗ್ರಾಮದಲ್ಲೇ ಕೃಷಿ ತರಬೇತಿ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ, ಎಲ್ಲ ರೈತರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಸಚಿವ ಎಚ್.ಕೆ. ಪಾಟೀಲ್ ಅವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.



Source link

Leave a Reply

Your email address will not be published. Required fields are marked *