Ninagaagi Serial- ಅತ್ತೆಯ ವಿಧವೆ ಶಾಸ್ತ್ರ: ಸೊಸೆ ರಚನಾಗೆ ಈ ವಾರದ ಕಿಚ್ಚನ ಚಪ್ಪಾಳೆ! | Vidhava Shashstra Stopped By Rachana In Ninagaagi Serial Suc

Ninagaagi Serial- ಅತ್ತೆಯ ವಿಧವೆ ಶಾಸ್ತ್ರ: ಸೊಸೆ ರಚನಾಗೆ ಈ ವಾರದ ಕಿಚ್ಚನ ಚಪ್ಪಾಳೆ! | Vidhava Shashstra Stopped By Rachana In Ninagaagi Serial Suc



ವಿಧವೆಯಾದ ಬಳಿಕ ಅರಿಶಿಣ-ಕುಂಕುಮ, ಹೂವು-ಬಳೆಗಳನ್ನು ತೆಗೆಯುವ ವಿಧವಾ ಶಾಸ್ತ್ರ ಮಾಡುತ್ತಿದ್ದವರಿಗೆ ನಿನಗಾಗಿ ನಾಯಕಿ ರಚನಾ ಕೊಟ್ಟ ತಿರುಗೇಟು ಈಗ ನೆಟ್ಟಿಗರ ಗಮನ ಸೆಳೆದಿದೆ. ಆಗಿದ್ದೇನು? 

ವಿಧವೆ ಎನ್ನುವುದು ಅನಾದಿಕಾಲದಿಂದಲೂ ಮಹಿಳೆಯರನ್ನು ಅತ್ಯಂತ ದುಸ್ಥಿತಿಗೆ ತಂದಿಟ್ಟ ಶಬ್ದ. ಹಿಂದಿನ ಕಾಲದಲ್ಲಿ ಗಂಡ ಸತ್ತ ಬಳಿಕ ಹೆಂಡತಿಗೂ ಬದುಕುವ ಹಕ್ಕು ಇಲ್ಲ ಎಂದು ಸತಿಸಹಗಮನವನ್ನೇ ಮಾಡಿಸುತ್ತಿದ್ದರು ಎಂದ ಮೇಲೆ ಹೆಣ್ಣಿನ ಮಹತ್ವ, ಆಕೆಯ ಜೀವಕ್ಕೆ ಇರುವ ಬೆಲೆ ಸುಲಭವಾಗಿ ಅರಿಯಬಹುದು. ಗಂಡೇ ಸರ್ವಸ್ವ, ಗಂಡನೇ ದೇವರು, ಆತನೇ ಎಲ್ಲ, ಆತನಿಲ್ಲದ ಮಹಿಳೆಯ ಬದುಕು ನಶ್ವರ… ಹೀಗೆಲ್ಲಾ ಇದ್ದ ಕಾಲವೊಂದಿತ್ತು. ಹಾಗೆಂದು ಈಗ ಕಾಲ ಸಂಪೂರ್ಣ ಬದಲಾಗಿ ಹೋಗಿದ್ಯಾ? ಖಂಡಿತ ಇಲ್ಲ. ಗಂಡ ಸತ್ತ ಹೆಣ್ಣನ್ನು ಅಂದು ಜೀವಂತವಾಗಿ ಸುಟ್ಟುಹಾಕುತ್ತಿದ್ದರೆ, ಇಂದು ವಿಧವೆ ಎನ್ನುವ ಪಟ್ಟಕಟ್ಟಿ ಆಕೆಯನ್ನು ಮಾನಸಿಕವಾಗಿ ಸುಟ್ಟುಹಾಕುವ ಕ್ರಿಯೆ ಇಂದಿಗೂ ಎಷ್ಟೋ ಕಡೆಗಳಲ್ಲಿ ಜೀವಂತವಾಗಿಯೇ ಇರುತ್ತದೆ.

ಹೆಂಡತಿ ಸತ್ತ ವಿಧುರ ಮಕ್ಕಳದ್ದೋ ಇನ್ನಾರದ್ದೋ ನೆಪವೊಡ್ಡಿ ವರ್ಷದ ಒಳಗೇ ಮದುವೆ ಮಾಡಿಕೊಂಡರೆ, ಗಂಡ ಸತ್ತಾಕೆ ಅಪಶಕುನ ಎನ್ನುವ ಹಣೆಪಟ್ಟಿ ಕಟ್ಟುವುದು ಇಂದಿಗೂ ಅಲ್ಲಲ್ಲಿ ನೋಡಬಹುದು. ಗಂಡ ಇಲ್ಲದವಳು ಯಾವ ಗಂಡಸಿನ ಜೊತೆ ಮಾತನಾಡಿದರೂ ಆಕೆಯನ್ನು ಚುಚ್ಚುವ ಮಾತುಗಳೇ ಕೇಳಿಬರುತ್ತದೆ. ಇನ್ನು ಹಲವು ಕಡೆಗಳಲ್ಲಿ ಗಂಡ ಸತ್ತ ಮೇಲೆ ಹೆಣ್ಣು ಅರಿಶಿಣ, ಕುಂಕುಮ ಹಚ್ಚುವಂತಿಲ್ಲ. ತಲೆಗೆ ಹೂವು ಮುಡಿಯುವಂತಿಲ್ಲ. ಇನ್ನು ಮಂಗಳಸೂತ್ರ, ಕಾಲುಂಗರವಂತೂ ನಿಷಿದ್ಧವೇ! ಈ ಬಗ್ಗೆ ಈ ಹಿಂದೆಯೂ ಹಲವು ಮಹಿಳೆಯರು ಸಿಡಿದೆದ್ದಿದ್ದು ಇದೆ, ಇಂದಿಗೂ ಅದರ ವಿರುದ್ಧ ಹೋಗುವವರೂ ಇದ್ದಾರೆ. ಅಷ್ಟಕ್ಕೂ ಕುಂಕುಮ, ಹೂವು, ಬಳೆ ಇವುಗಳನ್ನೇನು ಹೆಣ್ಣು ಮದುವೆಯಾದ ಮೇಲೆ ಹಾಕುವುದಲ್ಲ, ಬಾಲ್ಯದಿಂದಲೂ ಅದು ಆಕೆ ಧರಿಸಿಯೇ ಬಂದವಳು. ಕಾಲ ಬದಲಾದಂತೆ ಇವನ್ನೆಲ್ಲಾ ಈಗ ಗಂಡುಮಕ್ಕಳು ಮಾಡುತ್ತಿದ್ದರೆ, ಹೆಣ್ಣುಮಕ್ಕಳು ಗಂಡಸರಂತೆ ವೇಷ ಮಾಡಿಕೊಂಡು ತಿರುಗಾಡುವುದು ಮಾಮೂಲಾದರೂ ಅವೆಲ್ಲಾ ಹೆಣ್ಣಿನ ಜನ್ಮಸಿದ್ಧ ಹಕ್ಕು.

ಆದರೆ ವಿಪರ್ಯಾಸವೆಂದರೆ, ಗಂಡ ಸತ್ತ ಮೇಲೆ ವಿಧವಾ ಶಾಸ್ತ್ರವನ್ನೂ ಕೆಲವು ಕಡೆಗಳಲ್ಲಿ ಮಾಡುತ್ತಾರೆ. ಆದರೆ ಅದನ್ನು ಧಿಕ್ಕರಿಸುವ ಮನಸ್ಥಿತಿ ಹಲವು ಮಹಿಳೆಯರಲ್ಲಿಯೇ ಇರುವುದಿಲ್ಲ. ಆದರೆ ಇದೀಗ ನಿನಗಾಗಿ ಸೀರಿಯಲ್​ನಲ್ಲಿ ಅತ್ತೆಗೆ ಮಾಡ್ತಿದ್ದ ವಿಧವಾ ಶಾಸ್ತ್ರವನ್ನು ನಾಯಕಿ ರಚನಾ ತಡೆದಿದ್ದಾರೆ. ಇದರಿಂದ ಅಭಿಮಾನಿಗಳು ಫುಲ್​ ಖುಷಿಗೊಂಡಿದ್ದು, ಈ ವಾರದ ಕಿಚ್ಚನ ಚಪ್ಪಾಳೆ ರಚನಾಗೆ ಎನ್ನುತ್ತಿದ್ದಾರೆ.

ಈಗ ರಿಲೀಸ್​ ಮಾಡಿರುವ ಪ್ರೊಮೋದಲ್ಲಿ ಪದ್ಮಜಾಗೆ ವಿಧವೆ ಶಾಸ್ತ್ರ ಮಾಡಲು ಮಹಿಳೆಯರು ಮುಂದಾಗಿದ್ದರು. ಆಕೆಯ ಅರಿಶಿಣ, ಕುಂಕುಮ, ಬಳೆ ತೆಗೆಯಲು ಮಹಿಳೆಯರು ತೊಡಗಿದ್ದಾಗ ಇದನ್ನು ಪದ್ಮಜಾ ವಿರೋಧಿಸುತ್ತಿದ್ದಳು. ಆದರೂ ಗಂಡ ಸತ್ತ ಮೇಲೆ ಇದೆಲ್ಲಾ ಯಾಕೆ ಎನ್ನುತ್ತಲೇ ಮಹಿಳೆಯರು ಬಲವಂತದಿಂದ ಅವುಗಳನ್ನು ತೆಗೆಯಲು ಮುಂದಾದಾಗ ರಚನಾ ಅದನ್ನು ತಡೆದಿದ್ದಾಳೆ. ಈ ಶಾಸ್ತ್ರ ಬೇಕಾಗಿಲ್ಲ. ಅರಿಶಿಣ, ಕುಂಕುಮ, ಹೂವು, ಬಳೆ ಎನ್ನುವುದು ಹೆಂಗಸಿಗೆ ಗಂಡಲು ಹಾಕಿರುವ ಭಿಕ್ಷೆ ಅಲ್ಲ. ಆ ದೇವರು ಕೊಟ್ಟಿರುವ ಉಡುಗೊರೆ. ಹುಟ್ಟಿನಿಂದ ಸಾಯುವವರೆಗೂ ಅದು ಅವಳ ಹಕ್ಕು ಎಂದಿದ್ದಾಳೆ. ಈ ಡೈಲಾಗ್​ ಕೇಳಿ ನೆಟ್ಟಿಗರನ್ನು ಮನತುಂಬಿ ರಚನಾಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಸೀರಿಯಲ್​ಗಳು ಎಂದರೆ ಹೀಗೆ ಇರಬೇಕು, ಇಂಥ ಡೈಲಾಗ್​ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದಿದ್ದಾರೆ.

 

 



Source link

Leave a Reply

Your email address will not be published. Required fields are marked *