ಬೆಂಗಳೂರು, ಡಿಸೆಂಬರ್ 15: ರಾಜ್ಯದ ಅಂದಾಜು ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂಬ ಸುದ್ದಿ ಇತ್ತಿಚೆಗಷ್ಟೇ ಸದ್ದು ಮಾಡಿತ್ತು. ಈ ನಡುವೆ ಮತ್ತೊಂದು ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ, ರಾಜ್ಯದಾದ್ಯಂತ ಒಟ್ಟು 693.75 ಕಿಲೋಮೀಟರ್ ಉದ್ದದ ನದಿಗಳ ಹರಿವು ಮಾಲಿನ್ಯಗೊಂಡಿದ್ದು, ಕಲುಷಿತಗೊಂಡ ಈ ನದಿಗಳಿಂದ ನಗರಗಳು ಮತ್ತು ಪಟ್ಟಣಗಳಿಗೆ ಕುಡಿಯುವ ನೀರನ್ನು ಪೂರೈಸುತ್ತಿದೆ ಎಂಬುದು ಗೊತ್ತಾಗುತ್ತದೆ.
ಯಾವ್ಯಾವ ನದಿಗಳು ಮಲಿನ?
ನಗರ ಮತ್ತು ಗ್ರಾಮೀಣ ಪ್ರದೇಶಗಳ ಮನೆಗಳಿಂದ ಶುದ್ಧೀಕರಿಸಿದ ತ್ಯಾಜ್ಯ ನೀರು ನೇರವಾಗಿ ನದಿಗಳಲ್ಲಿ ಸೇರುವುದರಿಂದ ನೀರಿನ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಅರ್ಕಾವತಿ, ಲಕ್ಷಣ ತೀರ್ಥ, ತುಂಗಭದ್ರಾ, ಭದ್ರಾ, ತುಂಗಾ, ಕಾವೇರಿ, ಕಬಿನಿ, ಕಾಗಿನಾ, ಕೃಷ್ಣಾ, ಶಿಂಶಾ, ಭೀಮಾ ಮತ್ತು ನೇತ್ರಾವತಿ ನದಿಗಳು ಮಾಲಿನ್ಯಗೊಂಡಿವೆ.
ಅರ್ಕಾವತಿ ನದಿ ಅತ್ಯಂತ ಕಲುಷಿತ
ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಈ ಬಗ್ಗೆ ಮಾಹಿತಿ ನೀಡಿದ್ದು, ಬಯೋಕ್ಯಾಮಿಕಲ್ ಆಕ್ಸಿಜನ್ ಡಿಮ್ಯಾಂಡ್ ಮಟ್ಟದ ಆಧಾರದಲ್ಲಿ ನದಿಗಳನ್ನು P1 ರಿಂದ P5 ವರೆಗೆ ಐದು ವರ್ಗಗಳಾಗಿ ವಿಂಗಡಿಸಲಾಗಿದೆ. P1 ಅತ್ಯಧಿಕ ಮಾಲಿನ್ಯಗೊಂಡ ವರ್ಗ. ಲೀಟರ್ಗೆ 30 ಮಿಲಿಗ್ರಾಂಗಿಂತ ಹೆಚ್ಚು BOD ಇರುವ ನದಿಗಳು P1 ವರ್ಗಕ್ಕೆ ಸೇರುತ್ತವೆ. ಅರ್ಕಾವತಿ ನದಿ P1 ವರ್ಗದಲ್ಲಿದ್ದರೆ, P2 ಮತ್ತು P3 ವರ್ಗಗಳಲ್ಲಿ ಯಾವುದೇ ನದಿಗಳಿಲ್ಲ. ತುಂಗಭದ್ರಾ, ಭದ್ರಾ ಮತ್ತು ಶಿಂಶಾ ನದಿಗಳು P4 ವರ್ಗದಲ್ಲಿದ್ದು, ಉಳಿದ ಎಂಟು ವರ್ಗ ಮಾಲಿನ್ಯಗೊಂಡ ನದಿಗಳು P5ಕ್ಕೆ ಸೇರಿವೆ.
ಇದನ್ನೂ ಓದಿ: ಕೃಷ್ಣೆ, ಕಾವೇರಿ ಸೇರಿ ಕರ್ನಾಟಕದ 12 ನದಿಗಳ ನೀರು ಅಸುರಕ್ಷಿತ! ಮಾಲಿನ್ಯ ನಿಯಂತ್ರಣ ಮಂಡಲಿಕಾರಿ ವರದಿ
ನಗರಸಭೆಗಳು, ಪಟ್ಟಣಗಳು ಮತ್ತು ನದಿ ತೀರದ ಗ್ರಾಮಗಳಿಂದ ಹೊರಬರುವ ಗೃಹ ತ್ಯಾಜ್ಯ ನೀರು ಕನಿಷ್ಠ 17 ನದಿಗಳಿಗೆ ಸೇರುತ್ತಿರುವ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಮಾಹಿತಿ ನೀಡಿದೆ. ನದಿಗಳು ಕಲುಷಿತಗೊಳ್ಳಲು ಇದೇ ಪ್ರಮುಖ ಕಾರಣ. ಮಂಡ್ಯ, ರಾಮನಗರ, ವಿಜಯಪುರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಾಲಿನ್ಯಗೊಂಡ ಈ ನದಿಗಳಿಂದ ಮನೆಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಉತ್ತರ ಕನ್ನಡ, ಬಳ್ಳಾರಿ, ವಿಜಯನಗರ ಮತ್ತು ಬಾಗಲಕೋಟೆ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಮಾಲಿನ್ಯಗೊಂಡ ನದಿಗಳನ್ನೇ ನೀರು ಪೂರೈಕೆಗೆ ಅವಲಂಬಿಸಿವೆ. 2022–23ರಲ್ಲಿ ದಕ್ಷಿಣ ಪಿನಾಕಿನಿ, ಅಘನಾಶಿನಿ, ಶರಾವತಿ ಮತ್ತು ಗಂಗಾವಳಿ ನದಿಗಳನ್ನೂ ಮಾಲಿನ್ಯಗೊಂಡ ನದಿಗಳೆಂದು CPCB ಗುರುತಿಸಿತ್ತು. ಆದರೆ ರಾಜ್ಯ ಸರ್ಕಾರವು ನದಿಗಳು ಮಾಲಿನ್ಯಗೊಂಡಿಲ್ಲವೆಂದು ತಿಳಿಸಿ, ಪಟ್ಟಿಯಿಂದ ಹೆಸರು ತೆಗೆಯುವಂತೆ ಪತ್ರ ಬರೆದಿದೆ ಎಂದು ಸೂಚಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 11:43 am, ಸೋಮ, 15 ಡಿಸೆಂಬರ್ 25