
ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ನಲ್ಲಿ ಆರ್ಎಸ್ಎಸ್ ಕಾರ್ಯಕರ್ತರಿಗೆ ಪದಾಧಿಕಾರಿಗಳ ಹುದ್ದೆ ನೀಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಕೆಪಿಸಿಸಿಗೆ ದೂರು ಸಲ್ಲಿಕೆಯಾದ ನಂತರ, ಜಿಲ್ಲಾ ಸಮಿತಿಯು ವಿವಾದಿತ ನೇಮಕಾತಿಗಳಿಗೆ ತಡೆ ನೀಡಿದೆ.
ಕಾಂಗ್ರೆಸ್ ಹುದ್ದೆಯಲ್ಲಿ ಆರ್ಎಸ್ಎಸ್ ಕಾರ್ಯಕರ್ತರು: ಕೈ ಪಾಳಯದಲ್ಲಿ ಭುಗಿಲೆದ್ದ ಆಕ್ರೋಶ
ಕಾರವಾರ : ಜಿಲ್ಲೆಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳ ಪ್ರಮುಖ ಹುದ್ದೆಯೊಂದು ಬಿಜೆಪಿ ಜೊತೆ ಹೆಚ್ಚಾಗಿ ಗುರುತಿಸಿಕೊಂಡಿರುವ ಆರ್ಎಸ್ಎಸ್ ಸಂಘಟನೆಯ ಕಾರ್ಯಕರ್ತರಿಗೆ ಸಿಕ್ಕಿದೆ. ಈ ವಿಚಾರ ಈಗ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ಕೆಪಿಸಿಸಿಗೆ ಕೆಲ ಕಾರ್ಯಕರ್ತರು ದೂರು ನೀಡಿದ್ದಾರೆ.
ಕಾಂಗ್ರೆಸ್ ಹುದ್ದೆಗೆ RSS ಮುಖಂಡರ ಎಂಟ್ರಿ, ಜಿಲ್ಲಾಧ್ಯಕ್ಷರಿಂದ ತಡೆ
ಉತ್ತರಕನ್ನಡ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಪಟ್ಟಿಯಲ್ಲಿ ಆರ್.ಎಸ್.ಎಸ್. ನ ಸಕ್ರಿಯ ಕಾರ್ಯಕರ್ತರು ಸ್ಥಾನ ಪಡೆದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಿದೆ. ಕಾಂಗ್ರೆಸ್ನ ಹಲವು ನಾಯಕರು ಆರ್ಎಸ್ಎಸ್ನ ಬದ್ಧ ವೈರಿಗಳಾಗಿದ್ದು, ಆರ್ಎಸ್ಎಸ್ನ್ನು ಈಗಾಗಲೇ ವಿಷ ಸರ್ಪಕ್ಕೆ ಹೋಲಿಸಿದ್ದಾರೆ. ಸಚಿವ ಪ್ರಿಯಾಂಕಾ ಖರ್ಗೆ ರಾಜ್ಯದಲ್ಲಿ ಆರ್ಎಸ್ಎಸ್ನ್ನು ಬ್ಯಾನ್ ಮಾಡಬೇಕು ಎಂದು ಹೇಳುವ ಮೂಲಕ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಹೀಗಿರುವಾಗ ಆರ್ಎಸ್ಎಸ್ನ ಸಕ್ರಿಯ ಆರ್ಯಕರ್ತರನ್ನೇ ಈಗ ಕಾಂಗ್ರೆಸ್ನ ಪದಾಧಿಕಾರಿ ಹುದ್ದೆಗೆ ನೇಮಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಆರ್ಎಸ್ಎಸ್ ಕಾರ್ಯಕರ್ತರಿಗೆ ಪಟ್ಟ ನೀಡಿದ್ದಕ್ಕೆ ಕೈ ಕಾರ್ಯಕರ್ತರು ಗರಂ
ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಿದ್ಧವಿರೇಶ ಮೇಘರಾಜು, ಉಪಾಧ್ಯಕ್ಷರಾಗಿ ಅರವಿಂದ ತೆಲಗುಂದ ಅವರನ್ನು ನೇಮಕ ಮಾಡಲಾಗಿದೆ ಇವರಿಬ್ಬರು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅವರ ಆಪ್ತರಾಗಿದ್ದು, ಆರ್ಎಸ್ಎಸ್ನಲ್ಲಿ ಸಕ್ರಿಯರಾಗಿದ್ದಾರೆ. ಹೀಗಾಗಿ ಆರ್.ಎಸ್.ಎಸ್. ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷ ಪದಾಧಿಕಾರಿ ಹುದ್ದೆ ನೀಡಿದ್ದಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಸಂಬಂಧ ಕೆಲ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷರಿಗೆ ಈ ಸಂಬಂಧ ದೂರು ನೀಡಿದ್ದಾರೆ. ಈ ಹಿನ್ನೆಲೆ ತಕ್ಷಣ ಎಚ್ಚೆತ್ತ ಜಿಲ್ಲಾ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆಗೆ ತಡೆ ನಿಡಿದೆ. ಉತ್ತರಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಅವರುನೂತನ ಪದಾಧಿಕಾರಿಗಳ ಆಯ್ಕೆಗೆ ತಡೆ ನೀಡಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು: ಗ್ರಾಮ ಪಂಚಾಯತ್ ಸದಸ್ಯನ ಭೀಕರ ಹತ್ಯೆ