ಸಿದ್ದರಾಮಯ್ಯ ಅಸಹಾಯಕರು, ಡಿಕೆಶಿ ಹಾದಿ ತಪ್ಪುತ್ತಿದ್ದಾರೆ! ಕೈ ನಾಯಕರ ವಿರುದ್ಧ ಕೆ.ಎನ್. ರಾಜಣ್ಣ ಗುಡುಗು! | Kn Rajanna Statement Against Dk Shivakumar And Siddaramaiah Helplessness Congress Internal Rift Sat

ಸಿದ್ದರಾಮಯ್ಯ ಅಸಹಾಯಕರು, ಡಿಕೆಶಿ ಹಾದಿ ತಪ್ಪುತ್ತಿದ್ದಾರೆ! ಕೈ ನಾಯಕರ ವಿರುದ್ಧ ಕೆ.ಎನ್. ರಾಜಣ್ಣ ಗುಡುಗು! | Kn Rajanna Statement Against Dk Shivakumar And Siddaramaiah Helplessness Congress Internal Rift Sat



ಸಿದ್ದರಾಮಯ್ಯ ಅಸಹಾಯಕರು, ಡಿಕೆಶಿ ಹಾದಿ ತಪ್ಪುತ್ತಿದ್ದಾರೆ! ಕೈ ನಾಯಕರ ವಿರುದ್ಧ ಕೆ.ಎನ್. ರಾಜಣ್ಣ ಗುಡುಗು! | Kn Rajanna Statement Against Dk Shivakumar And Siddaramaiah Helplessness Congress Internal Rift Sat

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಸಚಿವ ಸತೀಶ್ ಜಾರಕಿಹೊಳಿ ಭೇಟಿ ನಂತರ ಕಾಂಗ್ರೆಸ್ ಸರ್ಕಾರದ ಆಂತರಿಕ ಭಿನ್ನಮತವನ್ನು ಬಹಿರಂಗಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಅಸಹಾಯಕತೆ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಶಿಸ್ತು ಉಲ್ಲಂಘನೆಯ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಏ.17): ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗ ಬಹಿರಂಗ ಸತ್ಯವಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರ ಮಾಜಿ ಸಚಿವ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ತಟಸ್ಥ ಧೋರಣೆ’ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ‘ಶಿಸ್ತು’ ಉಲ್ಲಂಘನೆಯ ಬಗ್ಗೆ ರಾಜಣ್ಣ ಅತ್ಯಂತ ಕಠಿಣ ಪದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಅಸಹಾಯಕತೆ ನಮಗೆ ಬೇಸರ ತಂದಿದೆ!

ರಾಜಣ್ಣ ಅವರ ಮಾತಿನ ಮೊದಲ ಗುರಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಿದ್ದರು. ‘ಸಿದ್ದರಾಮಯ್ಯ ಅವರಿಂದ ಇಂಥ ಅಸಹಾಯಕತೆಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಸಿದ್ದರಾಮಯ್ಯ ಪರವಾಗಿ ಇರುವವರನ್ನು ಸತತವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಿಎಂ ಗಟ್ಟಿಯಾಗಿ ನಿಲ್ಲಬೇಕಿತ್ತು, ಆದರೆ ಅವರು ಯಾಕೆ ತಟಸ್ಥರಾಗಿದ್ದಾರೆ ಎಂಬುದು ನಮಗೆ ತಿಳಿಯುತ್ತಿಲ್ಲ. ಅವರ ಧ್ವನಿ ಕುಗ್ಗಿದಾಗ ನಮಗೂ ಅಸಹಾಯಕತೆ ಎನಿಸುತ್ತದೆ’ ಎಂದು ರಾಜಣ್ಣ ಬೇಸರ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರಿಗೆ ಯಾವುದಾದರೂ ‘ಕಂಪಲ್ಶನ್’ (ಒತ್ತಡ) ಇದೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.

ಹೆಸರೇಳದೆ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿ:

ಪಕ್ಷದ ಶಿಸ್ತಿನ ಬಗ್ಗೆ ಮಾತನಾಡುವ ಡಿ.ಕೆ. ಶಿವಕುಮಾರ್ ವಿರುದ್ಧ ಕೆ.ಎನ್. ರಾಜಣ್ಣ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದರು. ‘ಹಿಂದೆ ‘Who is Rahul Gandhi?’ (ರಾಹುಲ್ ಗಾಂಧಿ ಅಂದ್ರೆ ಯಾರು?) ಎಂದು ಕೇಳಿದವರ ಜೊತೆ ವೇದಿಕೆ ಹಂಚಿಕೊಳ್ಳುವುದು ಪಕ್ಷದ ಶಿಸ್ತಾ? ರಾಹುಲ್ ಗಾಂಧಿಯವರ ಶತ್ರುಗಳಿಂದ ಆಮಂತ್ರಣ ಬಂದರೂ ಅವರು ಹೋಗುವುದಿಲ್ಲ, ಆದರೆ ಇವರು ಅಂತಹವರ ಮನೆ ಮದುವೆಗಳಿಗೆ ಹೋಗಿ ಬರುತ್ತಾರೆ’ ಎಂದು ಟೀಕಿಸಿದರು. ಅಲ್ಲದೆ, ‘ಪ್ರಯಾಗ್‌ರಾಜ್‌ನಲ್ಲಿ ಹೋಗಿ ಮುಳುಗಿದರೆ ಬಡತನ ಹೋಗುತ್ತಾ ಎಂದು ಎಐಸಿಸಿ ಅಧ್ಯಕ್ಷರೇ ಪ್ರಶ್ನಿಸಿದ್ದರು, ಆದರೆ ಇವರು ಅಲ್ಲಿಗೂ ಹೋಗಿ ಮುಳುಗಿ ಬಂದರು’ ಎನ್ನುವ ಮೂಲಕ ಡಿ.ಕೆ. ಶಿವಕುಮಾರ್ ಅವರ ಧಾರ್ಮಿಕ ನಡವಳಿಕೆಗಳನ್ನೂ ರಾಜಕೀಯ ಅಸ್ತ್ರವಾಗಿ ಬಳಸಿದರು.

ಶಿಸ್ತಿನ ಕ್ರಮದಲ್ಲಿ ತಾರತಮ್ಯವೇಕೆ?

ಪಕ್ಷದಲ್ಲಿ ಶಿಸ್ತು ಎನ್ನುವುದು ಕೇವಲ ಕೆಲವರಿಗೆ ಮಾತ್ರವೇ? ಎಂಬ ಪ್ರಶ್ನೆಯನ್ನು ರಾಜಣ್ಣ ಕೇಳಿದ್ದಾರೆ. ‘ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಶಾಮನೂರು ಶಿವಶಂಕಪ್ಪ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಲಿಲ್ಲ. ಇನ್ನೊಂದು ಪಕ್ಷಕ್ಕೆ ಮತ ಹಾಕಿ ಎನ್ನುವುದು ಪಕ್ಷ ವಿರೋಧಿ ಚಟುವಟಿಕೆ ಅಲ್ವಾ?’ ಎಂದು ಪ್ರಶ್ನಿಸುವ ಮೂಲಕ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವದ ದ್ವಂದ್ವ ನೀತಿಯನ್ನು ಎತ್ತಿ ತೋರಿಸಿದರು.

ಸತೀಶ್ ಜಾರಕಿಹೊಳಿ ಭೇಟಿಯ ಮರ್ಮ:

ಸತೀಶ್ ಜಾರಕಿಹೊಳಿ ಮತ್ತು ಡಿ.ಕೆ. ಶಿವಕುಮಾರ್ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, ‘ಅವರೆಲ್ಲರೂ ಸಂಪುಟದ ಸದಸ್ಯರು, ಯಾರು ಯಾರನ್ನಾದರೂ ಭೇಟಿ ಮಾಡಬಹುದು. ಅದರಲ್ಲಿ ತಪ್ಪು ಭಾವಿಸುವ ಅಗತ್ಯವಿಲ್ಲ. ಆದರೆ ಸಿದ್ದರಾಮಯ್ಯ ಪರ ಇರುವವರನ್ನು ತುಳಿಯುವ ಪ್ರಯತ್ನ ನಡೆದರೆ ನಾವು ಸುಮ್ಮನಿರುವುದಿಲ್ಲ,’ ಎಂದು ಎಚ್ಚರಿಸಿದ್ದಾರೆ. ತಮಗೆ ಸಚಿವ ಸ್ಥಾನದ ಆಕಾಂಕ್ಷೆ ಇಲ್ಲ ಎಂದು ಸ್ಪಷ್ಟಪಡಿಸಿದ ರಾಜಣ್ಣ, ಪಕ್ಷದ ನಿಷ್ಠಾವಂತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿರುವುದಾಗಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಕೆ.ಎನ್. ರಾಜಣ್ಣ ಅವರ ಈ ಹೇಳಿಕೆಗಳು ಸಿದ್ದರಾಮಯ್ಯ ಬಣದಲ್ಲಿರುವ ಅಸಮಾಧಾನ ಸ್ಫೋಟಗೊಂಡಿರುವುದಕ್ಕೆ ಸಾಕ್ಷಿಯಾಗಿವೆ. ಇದು ಮುಂಬರುವ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.



Source link

Leave a Reply

Your email address will not be published. Required fields are marked *