ಕಲಬುರಗಿ, ಫೆಬ್ರವರಿ 15: ಆಳಂದದಲ್ಲಿರುವ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ (ಕುಂಜ ಮಶಾಕ್ ದರ್ಗಾ) ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗಿದೆ. ಅಧಿಕೃತ ಅನುಮತಿ ಪ್ರಕಾರ ಆಂದೋಲದ ಸಿದ್ದಲಿಂಗ ಸ್ವಾಮೀಜಿ, ಹರ್ಷಾನಂದ ಗುತ್ತೇದಾರ್, ಗುರುಶಾಂತ್ ಟೆಂಗಳಿ ಸೇರಿ 14 ಜನರ ಶಿವಲಿಂಗಕ್ಕೆ ಪೂಜೆ (ಶಿವಲಿಂಗ ಪೂಜೆ) ಸಲ್ಲಿಸಿದ್ದಾರೆ. ಆದರೆ ಪೂಜೆ ಬಳಿಕ ಶಿವಲಿಂಗದ ಆಕಾರವೇ ಬದಲಾಗಿದೆ ಎಂದು ಆರೋಪಿಸಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
14 ಜನ ಹಿಂದೂ ಮುಖಂಡರಿಂದ ಪೂಜೆ
ಇಂದು ಮಹಾಶಿವರಾತ್ರಿ ಹಬ್ಬದ ನಿಮಿತ್ಯ ಇಡೀ ನಾಡಿನ ಜನ ಶಿವನಾಮ ಪಠಿಸುತ್ತ, ಜಾಗರಣೆ ಮಾಡುತ್ತ ಶಿವನ ಧ್ಯಾನದಲ್ಲಿ ಮುಳುಗುತ್ತಾರೆ. ಆದರೆ ಬಿಸಿಲೂರು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಾತ್ರ ಅಘೋಷಿತ ಬಂದ್ ಆಗಿದೆ. ಇದಕ್ಕೆ ಕಾರಣ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆ ವಿವಾದ.
ಅಂದಹಾಗೆ ಮಹಾಶಿವರಾತ್ರಿ ನಿಮಿತ್ಯ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ 14 ಜನ ಹಿಂದೂಗಳ ಪೂಜೆ ಸಲ್ಲಿಸಲು ಉಚ್ಚಾರಣೆ ಅನುಮತಿ ನೀಡಿದ್ದು, ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪೂಜೆ ಸಲ್ಲಿಸಲು ಸಮಯ ನಿಗದಿಯಾಗಿತ್ತು. ಅದರಂತೆ ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ್, ಅರ್ಜಿದಾರರಾದ ಸಿದ್ದರಾಮಯ್ಯ ಹಿರೇಮಠ ಮತ್ತು ಗುರುಶಾಂತ್ ಟೆಂಗಳಿ ನೇತೃತ್ವದಲ್ಲಿ ಮಧ್ಯಾಹ್ನ 2.35ಕ್ಕೆ ಪೂಜೆ ಸಲ್ಲಿಸಲು ದರ್ಗಾದೊಳಗೆ ಪ್ರವೇಶ ಮಾಡಿದರು. ಸುಮಾರು 50 ನಿಮಿಷಗಳ ಕಾಲ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಜಲಾಭಿಷೇಕ, ಬಿಲ್ವಪತ್ರೆ, ಪಂಚಾಮೃತದಿಂದ ಪೂಜೆ ಸಲ್ಲಿಸಿ ಹೊರಬಂದರು.
ಶಿವಲಿಂಗ ಆಕಾರದಲ್ಲಿ ಬದಲಾವಣೆಯಾಗಿದೆ: ಸಿದ್ರಾಮಯ್ಯ ಹಿರೇಮಠ
ಶಿವಲಿಂಗ ಪೂಜೆ ಬಳಿಕ ಮಾತಾಡಿದ ಅರ್ಜಿದಾರ ಸಿದ್ರಾಮಯ್ಯ ಹಿರೇಮಠ, ಹೈಕೋರ್ಟ್ ಅನಮತಿಯಂತೆ ನಾವು ಶಿವರಾತ್ರಿ ದಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದೇವೆ. ಇದಕ್ಕೆ ಹಾಗೂ ಪ್ರತಿಕ್ರಿಯೆಗೆ ಧನ್ಯವಾದ ಹೇಳುತ್ತೇವೆ. ಪೊಲೀಸ್ ಭದ್ರತೆಯಲ್ಲಿ ನಾಡಿನ ಒಳಿತಿಗಾಗಿ ಪೂಜೆ ಸಲ್ಲಿಸಿದ್ದೇವೆ. ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಆಕಾರದಲ್ಲಿ ಬದಲಾವಣೆಯಾಗಿದೆ. ಆ ಬಗ್ಗೆ ತನಿಖೆಯಾಗಬೇಕು. ಅಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆ. ಹಿಂದೂ ಮುಖಂಡರ ಗಮನಕ್ಕೆ ತರದೆ ಕೆಲಸ ಮಾಡಿದ್ದಾರೆಂದು ಆರೋಪಿಸಿದರು.
ಹಿಂದೂಗಳ ಹಕ್ಕನ್ನ ದಮನ ಮಾಡಲಾಗುತ್ತಿದೆ: ಹರ್ಷಾನಂದ ಗುತ್ತೇದಾರ್ ಕಿಡಿ
ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ್ ಮಾತನಾಡಿ, ಉದ್ದೇಶಪೂರ್ವಕವಾಗಿ ಶಿವಲಿಂಗದ ಮೇಲೆ ಮಲಮೂತ್ರ ಮಾಡಿ ಅಪಮಾನ ಮಾಡಲಾಗಿದೆ, ಹೀಗಾಗಿ ಶಿವಲಿಂಗದ ಶುದ್ದಿಕರಣಕ್ಕೆ 202ರಲ್ಲಿ ತೆರಳಿದ್ದ ವೇಳೆ ಹಿಂದೂ ಮುಸ್ಲಿಂ ಭಾವೈಕ್ಯತೆ ಕೆಡಿಸಲು ಗಲಭೆ ಎಬ್ಬಿಸಲಾಯಿತು. ಬಳಿಕ ಸರ್ಕಾರ ಬಂದ ನಂತರ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅಡ್ಡಿಪಡಿಸುತ್ತಾ ಬಂದ್ದಿದ್ದು, ಸತತ ಮೂರ್ನಾಲ್ಕು ವರ್ಷದಿಂದ ಕೋರ್ಟ್ ಬಂದು ಪೂಜೆ ಮಾಡ್ತಿದ್ದು, ಕಾಂಗ್ರೆಸ್ ಹಿಂದೂಗಳ ಹಕ್ಕನ್ನ ದಮನ ಮಾಡುತ್ತಿದೆ ಎಂದು ಕಿಡಿಕಾರಿದರು.
ಬಿಗಿ ಪೊಲೀಸ್ ಬಂದೋಬಸ್ತ್
ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಈಶಾನ್ಯ ವಲಯ ಐಜಿಪಿ ಡಾ.ಶರಣಪ್ಪ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಯಿತು. ಆಳಂದ ಪಟ್ಟಣದಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಿದೆ. KSRP, DAR ತುಕಡಿ ಸೇರಿ 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ದರ್ಗಾ ಒಳಗೆ ಹಾಗೂ ದರ್ಗಾ ಸುತ್ತಮುತ್ತ 40ಕ್ಕೂ ಹೆಚ್ಚು ಸಿಸಿಟಿವಿಗಳ ಅಳವಡಿಕೆ ಮಾಡಲಾಗಿದೆ. ಜೊತೆಗೆ 4 ಅತ್ಯಾಧುನಿಕ ಡ್ರೋನ್ ಕ್ಯಾಮರಾಗಳ ಮೂಲಕ ಹದ್ದಿನಕಣ್ಣಿಡಲು, ಆಳಂದ ಸಂಪರ್ಕಿಸುವ ಎಲ್ಲಾ ಮಾರ್ಗಗಳಲ್ಲಿ ಚೆಕ್ಪೋಸ್ಟ್ ನಿರ್ಮಿಸಲಾಯಿತು.
ಇದನ್ನೂ ಓದಿ: ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಕೋರ್ಟ್ ಗ್ರೀನ್ ಸಿಗ್ನಲ್
ಮತ್ತೊಂದೆಡೆ ಕಲಬುರಗಿ ಬಹುಮನಿ ಕೋಟೆಯೊಳಗಿರೋ ಶಿವಲಿಂಗಕ್ಕೆ ಪೂಜೆಗೆ ಅವಕಾಶ ಕೊಡುವ ಪ್ರತಿಭಟನೆ ನಡೆಯಿತು. ಶಿವಲಿಂಗ ಪೂಜೆಗೆ ಅವಕಾಶ ನೀಡಿದ ಹಿನ್ನೆಲೆ ಧರಣಿ ಮಾಡಿದ ಹಿಂದೂ ಸಂಘಟನೆ ಮುಖಂಡರನ್ನು ಬಂಧಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 5:53 pm, ಭಾನುವಾರ, 15 ಫೆಬ್ರವರಿ 26