
ಚುನಾವಣೆ ಜಟಾಪಟಿ ನಡುವೆ ಮೂವರು ಕಾಂಗ್ರೆಸ್ ನಾಯಕರು ಸಸ್ಪೆಂಡ್, ಕೋಲಾಹಲ ಶುರು, ಬಿಜೆಪಿಗೆ ಅಡ್ಡಮತದಾನ ಮಾಡಿದ್ದಾರೆ ಎಂದು ಮೂವರು ನಾಯಕರನ್ನು ಅಮಾನತು ಮಾಡಲಾಗಿದೆ. ಇದೀಗ ಈ ನಾಯಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ.
ಭುವನೇಶ್ವರ್ (ಮಾ.17) ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾಗಿದೆ. ಅಭ್ಯರ್ಥಿಗಳ ಘೋಷಣೆ, ಮುನಿಸು, ವಾಕ್ಸಮರ ಜೋರಾಗುತ್ತಿದೆ. ಇದರ ನಡುವೆ ರಾಜ್ಯಸಭಾ ಚುನಾವಣೆ ನಡೆದಿದೆ. ಈ ವೇಳೆ ಅಶಿಸ್ತು ತೋರಿದ ಕಾಂಗ್ರೆಸ್ ನಾಯಕರಿಗೆ ಅಮಾನತು ಶಿಕ್ಷೆ ಎದುರಾಗಿದೆ. ಬಿಜೆಪಿ ಅಭ್ಯರ್ಥಿಗೆ ಅಡ್ಡಮತದಾನ ಮಾಡಿದ ಒಡಿಶಾದ ಮೂವರು ಕಾಂಗ್ರೆಸ್ ನಾಯಕರು ಪಕ್ಷದಿಂದ ಅಮಾನತುಗೊಂಡಿದ್ದಾರೆ. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ದಿಲೀಪ್ ರೇಗೆ ಮೂವರು ಕಾಂಗ್ರೆಸ್ ನಾಯಕರು ಮತ ಚಲಾಯಿಸಿದ್ದರು. ಇದು ಒಡಿಶಾ ಕಾಂಗ್ರೆಸ್ನಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
ಕೆರಳಿದ ಕಾಂಗ್ರೆಸ್
ಒಡಿಶಾ ಕಾಂಗ್ರೆಸ್ನ ಸನಖೆಮುಂಡಿ ಕ್ಷೇತ್ರದ ಶಾಸಕ ರಮೇಶ್ ಚಂದ್ರ, ಮೊಹನಾ ಕ್ಷೇತ್ರದ ಶಾಸಕ ದಶರಥಿ ಗೊಮಂಗೋ ಹಾಗೂ ಬಾರಬತಿ ಕಟಕ್ ಕ್ಷೇತ್ರದ ಶಾಸಕಿ ಸೋಫಿಯಾ ಫ್ರಿರ್ದೋಸ್ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿದ್ದಾರೆ. ಸೋಮವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಈ ಮೂವರಕು ಕಾಂಗ್ರೆಸ್ ಶಾಸಕರು ಬಿಜೆಪಿ ಬೆಂಬಲಿತ ದಿಲೀಪ್ ರೇ ಪರ ಮತಚಲಾಯಿಸಿದ್ದರು. ಇದು ಕಾಂಗ್ರೆಸ್ ಪಕ್ಷವನ್ನು ಕೆರಳಿಸಿತ್ತು.
ಕಾಂಗ್ರೆಸ್ ಬೆನ್ನಿಗೆ ಚೂರಿದ ಇರಿದ ನಾಯಕರು ದೇಶಕ್ಕೆ ಚೂರಿ ಇರಿಯುತ್ತಾರೆ. ಅಶಿಸ್ತಿನ ನಡೆವಳಿಕೆಯಿಂದ ಮೂವರು ಶಾಸಕರನ್ನು ಅಮಾನತು ಮಾಡಲಾಗಿದೆ ಎಂದು ಒಡಿಶಾ ಕಾಂಗ್ರೆಸ್ ಸ್ಪಷ್ಟನೆ ನೀಡಿದೆ. ಎಲ್ಲಾ ದಾಖಲೆಗಳ ಪರಿಶೀಲನೆ, ನಾಯಕರ ನಡವಳಿಕೆ ಸೇರಿದಂತೆ ಹಲವು ಮಾನದಂಡಗಳನ್ನು ಪರಿಶೀಲಿಸಿ, ಕಾಂಗ್ರೆಸ್ ಶಿಸ್ತು ಸಮಿತಿ ಈ ನಿರ್ಧಾರ ಕೈಗೊಂಡಿದೆ ಎಂದಿದೆ. ಕಾಂಗ್ರೆಸ್ ಮಾತ್ರವಲ್ಲ ಒಡಿಶಾದ ಬಿಜೆಡಿ ಪಕ್ಷದ 8 ಶಾಕರು ಅಡ್ಡಮತದಾನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಬಜೆಡಿ ಪಕ್ಷದ ಅಭ್ಯರ್ಥಿ ದತ್ತೇಶ್ವರ ಹೊಟಗೆ ಬೆಂಬಲ ನೀಡಿತ್ತು. ಆದರೆ ಅಭ್ಯರ್ಥಿಯ ಪಕ್ಷ (ಬಿಜೆಡಿ) ನಾಯಕರೇ ಅಡ್ಡಮತದಾನ ಮಾಡಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವಿಗೆ ಕಾರಣವಾಗಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶ, ಹರ್ಯಾಣ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಆತಂಕ ಎದುರಿಸಿತ್ತು. ಬಿಜೆಪಿ ಆಪರೇಶನ್ ಕಮಲದ ಭೀತಿಯಿಂದ ಹಲವು ಶಾಸಕರು ಬೇರೆ ಬೇರೆ ರಾಜ್ಯಗಳ ರೆಸಾರ್ಟ್ನಲ್ಲಿ ಉಳಿದುಕೊಡಿದ್ದರು. ಈ ಪೈಕಿ ಒಡಿಶಾ ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್ನಲ್ಲಿ ಬೀಡುಬಿಟ್ಟಿದ್ದರು.