
ಪ್ರಭಾವಿ ಜ್ಯೋತಿಷಿಯೊಬ್ಬನನ್ನು ಮಹಿಳೆಯ ಮೇಲೆ ಅತ್ಯಾ*ಚಾರ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ. ತನಿಖೆಯ ವೇಳೆ, ಈತ ತನ್ನ ಕಚೇರಿಯಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ 58ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅದನ್ನು ಚಿತ್ರೀಕರಿಸಿದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈತನ ಬಂಧಿಸಿದ್ದೆ ಒಂದು ರೋಚಕ ಸ್ಟೋರಿ..
35 ವರ್ಷದ ಮಹಿಳೆ ಮೇಲೆ ಪದೇ ಪದೇ ಅತ್ಯಾ*ಚಾರ: ಪ್ರಭಾವಿ ಜ್ಯೋತಿಷಿಯ ಬಂಧನ
ಮುಂಬೈ: 35 ವರ್ಷದ ಮಹಿಳೆ ಮೇಲೆ ಪದೇ ಪದೇ ಅತ್ಯಾ*ಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಾರಾಷ್ಟ್ರದ ನಾಸಿಕ್ನ ಪ್ರಭಾವಿ ಜ್ಯೋತಿಷಿಯೊಬ್ಬನನ್ನು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆಗಿಳಿದ ಪೊಲೀಸರಿಗೆ ಈ ಕಾಮಿ ಜ್ಯೋತಿಷಿಯ ಹಲವು ರೋಚಕ ವಿಚಾರಗಳು ಬೆಳಕಿಗೆ ಬಂದಿದ್ದು, ಆರೋಪಿ ಜ್ಯೋತಿಷಿ ಲೈಂಗಿಕ ದೌರ್ಜನ್ಯವೆಸಗಿದ್ದು, ಕೇವಲ ಒಬ್ಬ ಮಹಿಳೆಯನ್ನು ಅಲ್ಲ ಎಂಬುದು ಗೊತ್ತಾಗಿದೆ. ಈತನ ಕೋಣೆಯಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿದ್ದು, ಈತನ ಮನೆಯಿಂದ ವಶಪಡಿಸಿಕೊಂಡ ಪೆನ್ಡ್ರೈವ್ನಲ್ಲಿ 58 ಬೇರೆ ಬೇರೆ ಮಹಿಳೆಯರ ಮೇಲೆ ಈತ ಲೈಂಗಿಕ ದೌರ್ಜನ್ಯವೆಸಗಿರುವುದು ತನಿಖೆಯಿಂದ ತಿಳಿದು ಬಂದಿದೆ.
67 ವರ್ಷದ ಅಶೋಕ್ ಖರತ್ ಬಂಧಿತ ಜ್ಯೋತಿಷಿ
ಬಂಧಿತ ಕಾಮುಕ ಜೋಯಿಷನನ್ನು 67 ವರ್ಷದ ಅಶೋಕ್ ಖರತ್ ಎಂದು ಗುರುತಿಸಲಾಗಿದೆ. ಸಾಕಷ್ಟು ಪ್ರಭಾವಿ ಆಗಿರುವ ಈತನ ಬಳಿಗೆ ಮಹಾರಾಷ್ಟ್ರದಿಂದ ದೆಹಲಿವರೆಗಿನ ರಾಜಕಾರಣಿಗಳು ಪರಿಹಾರ ಕೇಳಿಕೊಂಡು ಬರುತ್ತಿದ್ದರು ಎಂದು ವರದಿಯಾಗಿದೆ. ಈಗ 35 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಪ್ರಕಾರ ಆರೋಪಿ ಜೋಯಿಷ ತನಗೆ ಅಮಲು ಔಷಧ ನೀಡಿ, ಸಮ್ಮೋಹನಗೊಳಿಸಿದರು ಮತ್ತು ತನ್ನ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಜ್ಯೋತಿಷಿ ಲೈಂಗಿಕ ಶೋಷಣೆ ನಡೆಸಿದ್ದು, ಕೇವಲ ಒಬ್ಬ ಮಹಿಳೆ ಮೇಲಲ್ಲ ಎಂದು ತಿಳಿದು ಬಂದಿದೆ.
ಮಹಿಳೆಯರಿಗೆ ಸಮ್ಮೋಹನ ಮಾಡಿ ಅತ್ಯಾ*ಚಾರ
ಪೊಲೀಸರು ದಾಖಲಿಸಿದ ಎಫ್ಐಆರ್ ಪ್ರಕಾರ ಆರೋಪಿ ಅಶೋಕ್ ಖರತ್ ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದು, ತನ್ನನ್ನು ತಾನು ಕ್ಯಾಪ್ಟನ್ ಎಂದು ಹೇಳಿಕೊಳ್ಳುತ್ತಿದ್ದ. ಈತ ಮಹಿಳೆಯೊಬ್ಬರಿಗೆ ಆಕೆಯ ವೈಯಕ್ತಿಕ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿ ತನ್ನ ಕಚೇರಿಗೆ ಕರೆಸಿಕೊಂಡಿದ್ದ, ಆಕೆ ಒಮ್ಮೆ ಅಲ್ಲಿಗೆ ಬಂದ ನಂತರ ಮಹಿಳೆಗೆ ಮಾದಕ ವಸ್ತು ನೀಡಿ ಹಿಪ್ನೋಟೈಸ್(ಸಮ್ಮೋಹನ) ಮಾಡುತ್ತಿದ್ದ. ಇದಾದ ನಂತರ ಆತ ಮಹಿಳೆಯರಿಗೆ ಅವರ ಪತಿಯನ್ನು ಕೊಲ್ಲುವುದಾಗಿ ಹೇಳಿ ಅಥವಾ ಮಾಟಮಂತ್ರ ಮಾಡುವುದಾಗಿ ಹೇಳಿ ಭಯ ಹುಟ್ಟಿಸಿ ಅತ್ಯಾ*ಚಾರ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕಚೇರಿಯಲ್ಲಿತ್ತು ರಹಸ್ಯ ಸಿಸಿಟಿವಿ:
ತನ್ನ ಕಚೇರಿಯಲ್ಲಿ ಆತ ರಹಸ್ಯ ಸಿಸಿಟಿವಿಯನ್ನು ಆರೋಪಿ ಅಳವಡಿಸಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಈತನ ಕಚೇರಿಯಿಂದ ಪೊಲೀಸರು ಪೆನ್ಡ್ರೈವ್ವೊಂದನ್ನು ವಶಕ್ಕೆ ಪಡೆದಿದ್ದು ಅದರಲ್ಲಿ 58 ಮಹಿಳೆಯರ ಅಶ್ಲೀಲ ವೀಡಿಯೋಗಳಿರುವುದು ತಿಳಿದು ಬಂದಿದೆ. ಈ ಪ್ರಕರಣದ ತನಿಖೆಗಾಗಿ ಮಹಾರಾಷ್ಟ್ರ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿ ತೇಜಸ್ವಿನಿ ಸತ್ಪುಟೆ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ಎಸ್ಐಟಿಯನ್ನು ರಚಿಸಿದೆ. ಆರೋಪಿಗಳಿಂದ ವಶಪಡಿಸಿಕೊಂಡಿರುವ ಅಪರಾಧದ ವೀಡಿಯೊಗಳು ಮತ್ತು ದಾಖಲೆಗಳ ಸಂಪೂರ್ಣ ಪರಿಶೀಲನೆಯನ್ನು ನಾಸಿಕ್ ಅಪರಾಧ ಶಾಖೆ ನಡೆಸುತ್ತಿದೆ.
ಮಹಾರಾಷ್ಟ್ರದಿಂದ ದೆಹಲಿವರೆಗೆ ರಾಜಕೀಯ ನಾಯಕರ ಸಂಪರ್ಕ
ಆರೋಪಿ ಜ್ಯೋತಿಷಿ ನಾಸಿಕ್ನ ದುಬಾರಿ ಕೆನಡಾ ಕಾರ್ನರ್ ಪ್ರದೇಶದಲ್ಲಿ ‘ಓಕಸ್ ಪ್ರಾಪರ್ಟಿ ಡೀಲರ್ಸ್ ಮತ್ತು ಡೆವಲಪರ್ಸ್’ ಎಂಬ ಕಚೇರಿಯನ್ನು ನಿರ್ವಹಿಸುತ್ತಿದ್ದ, ಆದರೆ ಆತ ನಡೆಸುತ್ತಿದ್ದ ವ್ಯವಹಾರವು ರಿಯಲ್ ಎಸ್ಟೇಟ್ ಬದಲಾಗಿ ಅಪರಾಧದ ವ್ಯವಹಾರವಾಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪಿ ಅಶೋಕ್ ಖರತ್ ಸಮಾಜದಲ್ಲಿ ಸಾಕಷ್ಟು ಪ್ರಭಾವವನ್ನು ಹೊಂದಿದ್ದು, ದೈವಿಕ ಶಕ್ತಿಗಳನ್ನು ಹೊಂದಿರುವ ವ್ಯಕ್ತಿ ಎಂದು ಅನೇಕರು ನಂಬಿದ್ದರು. ಈತನಿಗೆ ಮಹಾರಾಷ್ಟ್ರದಿಂದ ದೆಹಲಿವರೆಗೆ ರಾಜಕಾರಣಿಗಳ ಸಂಪರ್ಕವಿತ್ತು. ಮಹಾರಾಷ್ಟ್ರದ ಮಿರ್ಗಾಂವ್ನಲ್ಲಿ, ಈತ ಈಶಾನ್ಯೇಶ್ವರ ದೇವಸ್ಥಾನ ಮತ್ತು ಒಂದು ಭವ್ಯವಾದ ಆಶ್ರಯಧಾಮವನ್ನು ಹೊಂದಿದ್ದು, ಅಲ್ಲಿ ಪ್ರಮುಖ ಮತ್ತು ಪ್ರಭಾವಿ ವ್ಯಕ್ತಿಗಳು ಆಗಾಗ್ಗೆ ಈತನನ್ನು ಭೇಟಿ ಮಾಡುತ್ತಿದ್ದರು.
ಇದನ್ನೂ ಓದಿ: ರೆಡ್ ಬುಲ್ ಎಫ್1 ಕಾರಿಗೆ ನಿಂಬೆ ಮೆಣಸಿನಕಾಯಿ ಕಟ್ಟಿ ತೆಂಗಿನಕಾಯಿ ಒಡೆದು ಪೂಜೆ ಮಾಡಿದ ವಿದೇಶಿ ಮಹಿಳೆ
ನಾಶಿಕ್ನ ಸಿನ್ನಾರ್ನಲ್ಲಿರುವ ಶ್ರೀ ಈಶಾನ್ಯೇಶ್ವರ ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದ ಈ ಜ್ಯೋತಿಷಿ ಅಶೋಕ್ ಖರತ್ ಪ್ರಮುಖ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ವ್ಯಾಪಾರೋದ್ಯಮಿಗಳಿಗೆ ತಮ್ಮ ಆಧ್ಯಾತ್ಮಿಕ ಮಾರ್ಗದರ್ಶಕರೆಂದು ಗುರುತಿಸಿಕೊಂಡಿದ್ದರು.
ಕಳ್ಳ ಜ್ಯೋತಿಷಿ ಸಿಕ್ಕಿಬಿದ್ದ ಕಹಾನಿಯೇ ರೋಚಕ
ನಾಸಿಕ್ನಲ್ಲಿರುವ ಜ್ಯೋತಿಷಿಯ ತೋಟದ ಮನೆಯಲ್ಲಿ ರಹಸ್ಯ ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕತ್ತಲೆಯ ಮರೆಯಲ್ಲಿ, ಪೊಲೀಸರು ಆರೋಪಿಯ ಮನೆಯ ಹೊರಗೆ ಕಳ್ಳ, ಕಳ್ಳ ಎಂದು ಕೂಗುತ್ತಾ ಗೊಂದಲ ಹಾಗೂ ಭಯದ ವಾತಾವರಣವನ್ನು ಸೃಷ್ಟಿಸಿದರು. ಈ ಗದ್ದಲವನ್ನು ನೆಪವಾಗಿಟ್ಟುಕೊಂಡು, ತಂಡವು ಖರತ್ ಅವರ ಮನೆಗೆ ನೇರವಾಗಿ ಪ್ರವೇಶಿಸಿತು, ಮತ್ತು ಏನಾಗುತ್ತಿದೆ ಎಂದು ಅವನಿಗೆ ಅರ್ಥವಾಗುವ ಮೊದಲೇ, ಪೊಲೀಸರು ಆತನನ್ನು ಅವನ ಮಲಗುವ ಕೋಣೆಯಿಂದಲೇ ಬಂಧಿಸಿದ್ದಾರೆ. ಈ ದಾಳಿಯ ವೇಳೆ ಆತನ ತೋಟದ ಮನೆಯಲ್ಲಿದ್ದ ಒಂದು ಪಿಸ್ತೂಲ್, ಜೀವಂತ ಕಾರ್ಟ್ರಿಡ್ಜ್ಗಳು ಮತ್ತು ಹಲವಾರು ಬಳಸಿದ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಕೊನೆಕ್ಷಣದಲ್ಲಿ ಏನಾದರೂ ಆಗಬಹುದು: ಶಾಮನೂರು ಕುಟುಂಬಕ್ಕೆ ಬಿಜೆಪಿ ಟಿಕೆಟ್ ಕೊಟ್ಟರು ಅಚ್ಚರಿಯಿಲ್ಲ: ಯತ್ನಾಳ್
ಮಿರ್ಗಾಂವ್ನಲ್ಲಿರುವ ದೇವಾಲಯ ಮತ್ತು ಆಶ್ರಮದಲ್ಲಿಯೂ ತೀವ್ರ ಶೋಧ ನಡೆಸಲಾಗಿದ್ದು, ಇದರಲ್ಲಿ ಹಲವಾರು ಅನುಮಾನಾಸ್ಪದ ದಾಖಲೆಗಳು ಪತ್ತೆಯಾಗಿವೆ. ಹೆಚ್ಚುವರಿಯಾಗಿ, ಮಹಾರಾಷ್ಟ್ರದಾದ್ಯಂತ ಅವನ ಒಡೆತನದ ಅನೇಕ ಆಸ್ತಿಗಳು ತನಿಖೆಯ ವ್ಯಾಪ್ತಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ಈಗ ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿಯನ್ನೂ ಹುಟ್ಟುಹಾಕಿದೆ. ಈ ಹಿಂದೆ ಮಹಾರಾಷ್ಟ್ರದ ಅನೇಕ ರಾಜಕಾರಣಿಗಳು ಈ ಜ್ಯೋತಿಷಿಯನ್ನು ಭೇಟಿ ಮಾಡಿದ್ದಾರೆನ್ನಲಾಗಿದ್ದು, ಮಹಿಳೆಯರನ್ನು ಶೋಷಿಸುವವರ ಪಾದಗಳನ್ನು ತೊಳೆಯಬೇಕೇ? ಉಪಮುಖ್ಯಮಂತ್ರಿಗಳು ಈ ನಡವಳಿಕೆಯನ್ನು ಅರಿತುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಎಂದು ಉದ್ಧವ್ ಠಾಕ್ರೆ ಅವರ ಪಕ್ಷದ ಸುಷ್ಮಾ ಅಂಧಾರೆ ಅವರು ಹೇಳಿದ್ದಾರೆ.