
ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಉಡುಪಿಯ ಕಾಪು ಹೊಸ ಮಾರಿಗುಡಿ ಕ್ಷೇತ್ರದ ನಡುವೆ ಒಂದು ವಿಶೇಷ ದೈವಿಕ ಸಂಬಂಧವಿದೆ. ಕ್ಷೇತ್ರದ ದೇವಿಯ ಆಶೀರ್ವಾದದಿಂದ ಅವರು ನಾಯಕನಾದದ್ದು, ದೇವಸ್ಥಾನಕ್ಕೆ ನೀಡಿದ ಕೊಡುಗೆ ಮತ್ತು ಅವರ ಅಚಲ ಭಕ್ತಿಯ ಕುರಿತು ಈ ಲೇಖನ ವಿವರಿಸುತ್ತದೆ.
ಉಡುಪಿ (ಮಾ.9): ಭಾರತೀಯ ಕ್ರಿಕೆಟ್ನ ಹೊಸ ಪರ್ವ ಆರಂಭವಾಗಿರುವುದು ನಮಗೆಲ್ಲರಿಗೂ ಗೊತ್ತು. ಆದರೆ, ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಕರಾವಳಿಯ ಉಡುಪಿ ಜಿಲ್ಲೆಯ ನಡುವೆ ಒಂದು ಗಾಢವಾದ ದೈವಿಕ ಸಂಬಂಧವಿದೆ ಎಂಬುದು ಹಲವರಿಗೆ ತಿಳಿದಿಲ್ಲ. ಹೌದು, ‘ಮಿಸ್ಟರ್ 360’ ಖ್ಯಾತಿಯ ಸೂರ್ಯಕುಮಾರ್ ಯಾದವ್ ನಮ್ಮ ಹೆಮ್ಮೆಯ ಉಡುಪಿಯ ಅಳಿಯ! ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಅವರು ಮೂಲತಃ ಉಡುಪಿ ಜಿಲ್ಲೆಯ ಕಾಪು ತಾಲೂಕಿನವರು. ಸದ್ಯ ಮುಂಬೈ ನಿವಾಸಿಯಾಗಿದ್ದರೂ, ದೇವಿಶಾ ಅವರ ಕುಟುಂಬದ ಬೇರುಗಳು ಇರುವುದು ಕಾಪುವಿನಲ್ಲಿ. ಈ ದಂಪತಿಗಳು ಕಾಪುವಿನ ಪ್ರಸಿದ್ಧ ಆರಾಧ್ಯ ದೈವ ಕಾಪು ಹೊಸ ಮಾರಿಗುಡಿ ಅಮ್ಮನವರ ಪರಮ ಭಕ್ತರು.
ಮಾರಿಯಮ್ಮನ ಸನ್ನಿಧಿಯಲ್ಲಿ ನಡೆದ ಆ ನುಡಿ ಸತ್ಯವಾಯಿತು!
ಸೂರ್ಯಕುಮಾರ್ ಅವರ ಜೀವನದಲ್ಲಿ ಕಾಪು ಮಾರಿಗುಡಿ ಅಮ್ಮನವರ ಪವಾಡ ಅಚ್ಚರಿಯ ರೀತಿಯಲ್ಲಿ ನಡೆದಿದೆ. 2024ರ ಜುಲೈ 9 ರಂದು ಸೂರ್ಯಕುಮಾರ್ ಯಾದವ್ ದಂಪತಿ ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿ ಅಮ್ಮನವರ ಆಶೀರ್ವಾದ ಪಡೆದಿದ್ದರು. ಈ ವೇಳೆ ದೇವಸ್ಥಾನದ ಅರ್ಚಕರು ಸೂರ್ಯಕುಮಾರ್ ಅವರಿಗೆ ವಿಶೇಷ ಆಶೀರ್ವಾದ ಮಾಡಿ, “ನೀವು ಭಾರತೀಯ ತಂಡದ ಕ್ಯಾಪ್ಟನ್ ಆಗಲಿ” ಎಂದು ಶುಭಹಾರೈಸಿದ್ದರು.
ಅಚ್ಚರಿಯೆಂದರೆ, ದೇವಿಯ ಸನ್ನಿಧಿಯಲ್ಲಿ ಅರ್ಚಕರು ಆಡಿದ ನುಡಿ ಕೇವಲ 9 ದಿನಗಳಲ್ಲಿ ಸತ್ಯವಾಯಿತು. ಜುಲೈ 18 ರಂದು ಬಿಸಿಸಿಐ ಸೂರ್ಯಕುಮಾರ್ ಅವರನ್ನು ಭಾರತೀಯ ಟಿ20 ತಂಡದ ನಾಯಕ ಎಂದು ಅಧಿಕೃತವಾಗಿ ಘೋಷಿಸಿತು.
ಕ್ಷೇತ್ರಕ್ಕೆ ನೀಡಿದ ಮಹತ್ತರ ಕೊಡುಗೆ
ಕೇವಲ ಭಕ್ತಿಯಷ್ಟೇ ಅಲ್ಲದೆ, ಈ ದಂಪತಿಗಳು ದೇವಸ್ಥಾನದ ಪುನರ್ನಿರ್ಮಾಣ ಕಾರ್ಯದಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮರು ನಿರ್ಮಾಣಗೊಂಡ ಕಾಪು ಹೊಸ ಮಾರಿಗುಡಿಗೆ ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ದಂಪತಿಗಳು ₹25 ಲಕ್ಷ ವೆಚ್ಚದ ಕಲಾತ್ಮಕ ಆಧಾರ ಸ್ತಂಭವನ್ನು (ಕಂಬ) ಕೊಡುಗೆಯಾಗಿ ನೀಡಿದ್ದಾರೆ.
ಸಂಕಷ್ಟದ ಸಮಯದಲ್ಲಿ ಬೆನ್ನಿಗೆ ನಿಂತ ದೇವಿ
ನಾಯಕನಾದ ನಂತರ ಸೂರ್ಯಕುಮಾರ್ ಅವರ ಫರ್ಫಾರ್ಮೆನ್ಸ್ನಲ್ಲಿ ಏರುಪೇರಾದಾಗಲೂ ದೇವಿಶಾ ಶೆಟ್ಟಿ ಅವರು ಎರಡು ಬಾರಿ ಏಕಾಂಗಿಯಾಗಿ ಕ್ಷೇತ್ರಕ್ಕೆ ಭೇಟಿ ನೀಡಿ, ತಾಯಿಯ ಬಳಿ ಪ್ರಾರ್ಥಿಸಿ ಹೋಗಿದ್ದರು. ಇದು ಅವರ ಕುಟುಂಬಕ್ಕೆ ಅಮ್ಮನವರ ಮೇಲಿರುವ ನಂಬಿಕೆಯನ್ನು ತೋರಿಸಿದೆ.
ಸಕ್ಕರೆ-ಬೆಲ್ಲದ ತುಲಾಭಾರ ಸಂಕಲ್ಪ
ಟಿ20 ವಿಶ್ವಕಪ್ ಗೆದ್ದ ನಂತರ ಸೂರ್ಯಕುಮಾರ್ ಯಾದವ್ ದಂಪತಿಗಳು ಮತ್ತೊಮ್ಮೆ ಕ್ಷೇತ್ರಕ್ಕೆ ಬರಬೇಕೆಂಬುದು ಮಾರಿಗುಡಿ ಕ್ಷೇತ್ರದ ಪ್ರಮುಖರ ಇಚ್ಛೆಯಾಗಿದೆ. ಈ ಸಂಭ್ರಮದ ಅಂಗವಾಗಿ ದೇವಸ್ಥಾನದ ವತಿಯಿಂದ ಬೆಲ್ಲ ಮತ್ತು ಸಕ್ಕರೆ ತುಲಾಭಾರ ನಡೆಸುವ ಸಂಕಲ್ಪವನ್ನೂ ಮಾಡಲಾಗಿದೆ.