
ರಾಜಸ್ಥಾನ ರಾಯಲ್ಸ್ ವಿರುದ್ಧದ ಸೋಲಿಗೆ ಬೌಲಿಂಗ್ ವೈಫಲ್ಯವೇ ನೇರ ಕಾರಣ ಎಂದು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಪವರ್ಪ್ಲೇನಲ್ಲಿ ಬೌಲರ್ಗಳು ವಿಫಲರಾದರು ಎಂದ ಅವರು, ಎದುರಾಳಿ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ನಿರ್ಭೀತ ಬ್ಯಾಟಿಂಗ್ ಅನ್ನು ಶ್ಲಾಘಿಸಿದರು.
ಮುಂಬೈ: ರಾಜಸ್ಥಾನ ರಾಯಲ್ಸ್ ವಿರುದ್ಧದ ಸೋಲಿಗೆ ನಮ್ಮ ಬೌಲಿಂಗ್ ವೈಫಲ್ಯವೇ ನೇರ ಕಾರಣ ಅಂತ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಒಪ್ಪಿಕೊಂಡಿದ್ದಾರೆ. “ಪವರ್ಪ್ಲೇನಲ್ಲಿ ನಮ್ಮ ಬೌಲರ್ಗಳು ಅಂದುಕೊಂಡಂತೆ ಬೌಲ್ ಮಾಡಲಿಲ್ಲ. ಈ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ಬೌಲಿಂಗ್ ವಿಭಾಗವೇ ಹೊರಬೇಕು,” ಅಂತ ಹಾರ್ದಿಕ್ ಖಡಕ್ಕಾಗಿ ಹೇಳಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 27 ರನ್ಗಳ ಸೋಲು ಕಂಡಿತ್ತು. ಮಳೆಯಿಂದಾಗಿ ಪಂದ್ಯವನ್ನು 11 ಓವರ್ಗಳಿಗೆ ಇಳಿಸಲಾಗಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ 3 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮುಂಬೈ 9 ವಿಕೆಟ್ ಕಳೆದುಕೊಂಡು 123 ರನ್ ಗಳಿಸಲಷ್ಟೇ ಶಕ್ತವಾಯಿತು.
ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಕೊಂಡಾಡಿದ ಹಾರ್ದಿಕ್ ಪಾಂಡ್ಯ
ಈ ಸೋಲಿನ ನಡುವೆಯೂ ಹಾರ್ದಿಕ್ ಪಾಂಡ್ಯ ಎದುರಾಳಿ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಆಟವನ್ನು ಹಾಡಿ ಹೊಗಳಿದ್ದಾರೆ. ವೈಭವ್ ಕೇವಲ 14 ಎಸೆತಗಳಲ್ಲಿ 39 ರನ್ ಚಚ್ಚಿದ್ದರು. “ಕೇವಲ 16-17 ವರ್ಷದ ಹುಡುಗ ಇಷ್ಟೊಂದು ಆತ್ಮವಿಶ್ವಾಸದಿಂದ ಆಡೋದನ್ನು ನೋಡಿದ್ರೆ ಆಶ್ಚರ್ಯ ಆಗುತ್ತೆ. ಮ್ಯಾಚ್ಗೂ ಮುನ್ನ ನಾವು ಅವನ ಬಗ್ಗೆ ಚರ್ಚೆ ಮಾಡಿದ್ವಿ. ಅವನ ಶಾಟ್ಗಳು, ನಿರ್ಭೀತ ಬ್ಯಾಟಿಂಗ್ ಶೈಲಿ ಅದ್ಭುತವಾಗಿದೆ. ವೈಭವ್ಗೆ ಉಜ್ವಲ ಭವಿಷ್ಯವಿದೆ,” ಅಂತ ಪಾಂಡ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಪವರ್ಪ್ಲೇನಲ್ಲಿ ನಾವು ಸರಿಯಾದ ಲೆಂಗ್ತ್ನಲ್ಲಿ ಬೌಲ್ ಮಾಡೋಕೆ ಆಗಲಿಲ್ಲ. ಇದರ ಸಂಪೂರ್ಣ ಹೊಣೆ ಬೌಲಿಂಗ್ ಯೂನಿಟ್ನದ್ದೇ. ಎದುರಾಳಿ ತಂಡದವರು ತುಂಬಾ ಚೆನ್ನಾಗಿ ಬ್ಯಾಟ್ ಮಾಡಿದರು. ಟಿ20 ಕ್ರಿಕೆಟ್ನಲ್ಲಿ ಕೆಲವು ಮುಖ್ಯ ಎಸೆತಗಳನ್ನು ಸರಿಯಾಗಿ ಹಾಕೋದು ಬಹಳ ಮುಖ್ಯ. ನಾವು 27 ರನ್ಗಳಿಂದ ಸೋತಿದ್ದೇವೆ. ಒಂದು ವೇಳೆ ನಾವು ಇನ್ನೂ ಐದು ಎಸೆತಗಳನ್ನು ಸರಿಯಾಗಿ ಹಾಕಿದ್ದರೆ, ಐದು ಸಿಕ್ಸರ್ಗಳನ್ನು ತಪ್ಪಿಸಬಹುದಿತ್ತು. ಆಗ ನಾವು ಪಂದ್ಯಕ್ಕೆ ವಾಪಸ್ ಬರುತ್ತಿದ್ದೆವು,” ಎಂದು ಹಾರ್ದಿಕ್ ವಿಶ್ಲೇಷಿಸಿದ್ದಾರೆ.
ಬ್ಯಾಟಿಂಗ್ ಬಗ್ಗೆ ಮಾತಾಡಿದ ಪಾಂಡ್ಯ, ‘ಈ ಸೋಲಿಗೆ ಬ್ಯಾಟಿಂಗ್ ಕಾರಣ ಅಂತ ನನಗನ್ನಿಸುವುದಿಲ್ಲ. ಬೌಲರ್ಗಳಿಗೆ ಲಯ ಕಂಡುಕೊಳ್ಳಲು ಆಗದೇ ಇದ್ದಿದ್ದೇ ನಮಗೆ ಮುಳುವಾಯ್ತು. ಆರಂಭದಿಂದಲೇ ಎದುರಾಳಿ ಓಪನರ್ಗಳು ನಮ್ಮ ಮೇಲೆ ಒತ್ತಡ ಹೇರಿದರು’ ಅಂತಾನೂ ಹೇಳಿದ್ದಾರೆ.
ಮುಂದಿನ ಪಂದ್ಯ ಆರ್ಸಿಬಿ ವಿರುದ್ಧವಿದ್ದು, ಈ ಬಗ್ಗೆ ಹಾರ್ದಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಮಾಡಿದ ತಪ್ಪುಗಳಿಂದ ಪಾಠ ಕಲಿತು, ಮುಂದಿನ ಪಂದ್ಯಕ್ಕೆ ಚೆನ್ನಾಗಿ ತಯಾರಿ ನಡೆಸುತ್ತೇವೆ’ ಎಂದು ಅವರು ಹೇಳಿದ್ದಾರೆ.
ಸತತ ಎರಡು ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಆರ್ಸಿಬಿ!
ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿದ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇದೀಗ ಏಪ್ರಿಲ್ 10ರಂದು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಇದಾದ ನಂತರ ಏಪ್ರಿಲ್ 12ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಎರಡು ಪಂದ್ಯಗಳಲ್ಲಿ ಆರ್ಸಿಬಿಗೆ ಕಠಿಣ ಸವಾಲು ಎದುರಾಗುವ ನಿರೀಕ್ಷೆಯಿದೆ.