
ರಾಜ್ಯದ ಮೊದಲ ಮಹಿಳಾ ಹೃದಯ ಕಸಿ ಸ್ವೀಕರಿಸಿದ ಕನ್ನಡತಿ ರೀನಾ ರಾಜು, 2009ರಲ್ಲಿಹೃದಯ ಕಸಿ ಮಾಡಿಸಿಕೊಂಡಿದ್ದಾರೆ. ಅವರು ‘ಲೈಟ್ ಎ ಲೈಫ್’ ಫೌಂಡೇಶನ್ ಮೂಲಕ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಕಸಿ ನಂತರವೂ ಸಕ್ರಿಯ ಜೀವನ ನಡೆಸಬಹುದು ಎಂಬುದಕ್ಕೆ ಸ್ಫೂರ್ತಿಯಾಗಿದ್ದಾರೆ.
ಇಂದಿನ ವೈದ್ಯಕೀಯ ಲೋಕ ಅದೆಷ್ಟು ಮುಂದುವರೆದಿದೆ ಎಂದರೆ ಯಾರದ್ದೇ ದೇಹದ ಯಾವುದೇ ಭಾಗವನ್ನು ಇನ್ನಾರಿಗೋ ಹಾಕಿ ಅವರ ಜೀವವನ್ನು ಉಳಿಸಬಹುದಾಗಿದೆ. ಇದೇ ಕಾರಣಕ್ಕೆ ಸಾಯುವ ಮುನ್ನ ತಮ್ಮ ಅಂಗಾಂಗ ದಾನಗಳ ಬಗ್ಗೆ ಬರೆದಿಟ್ಟರೆ, ಅವರ ಮರಣದ ನಂತರವೂ ಅದು ಎಷ್ಟೋ ಮಂದಿಯ ಜೀವವನ್ನು ಉಳಿಸಬಹುದಾಗಿದೆ. ಹೀಗೆ ಯಾರೋ ದಾನಿಗಳು ಕೊಟ್ಟಿರುವ ಹೃದಯವನ್ನು ತಮ್ಮ ದೇಹದಲ್ಲಿ ಇಟ್ಟುಕೊಂಡು ಆನಂದಕರ, ಆರೋಗ್ಯಕರ ಜೀವನ ಸಾಗಿಸುತ್ತಿರುವವರು, ರಾಜ್ಯದ ಮೊದಲ ಮಹಿಳಾ ಹೃದಯ ಕಸಿ (heart transplant) ಎಂದು ಎನ್ನಿಸಿಕೊಂಡಿರುವ ಕನ್ನಡದವರೇ ಆದ ರೀನಾ ರಾಜು. 2009 ಮತ್ತು 2017ರಲ್ಲಿ ಹೃದಯ ಕಸಿ ಪಡೆದ ಅವರು, ‘ಲೈಟ್ ಎ ಲೈಫ್’ (Light A Life) ಫೌಂಡೇಶನ್ ಮೂಲಕ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಮತ್ತು ಕಸಿ ರೋಗಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ವಿಶ್ವ ಟ್ರಾನ್ಸ್ಪ್ಲಾಂಟ್ ಗೇಮ್ಸ್ನಲ್ಲಿ ಭಾಗವಹಿಸಿ, ಕಸಿ ಪಡೆದವರೂ ಕೂಡ ದೈಹಿಕವಾಗಿ ಸಕ್ರಿಯರಾಗಿರಬಹುದು ಎಂದು ತೋರಿಸಿಕೊಟ್ಟಿದ್ದಾರೆ ರೀನಾ.
2009ರಲ್ಲಿ ಹೃದಯ ಕಸಿ
2009 ರಲ್ಲಿ ಕರ್ನಾಟಕದ ಮೊದಲ ಹೃದಯ ಕಸಿ ಸ್ವೀಕರಿಸಿದ ಹೆಗ್ಗಳಿಕೆ ಇವರದ್ದು. ಇದೀಗ ಅವರು, ಅಂಗಾಂಗ ಕಸಿ ಪಡೆದವರಿಗೆ ಸಹಾಯ ಮಾಡಲು ಮತ್ತು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಈ ಚಾರಿಟಬಲ್ ಟ್ರಸ್ಟ್ ಅನ್ನು ಸ್ಥಾಪಿಸಿದ್ದಾರೆ. ಅವರು ಹೃದಯ ಕಸಿ ಬಗ್ಗೆ ಇದ್ದ ಭಯವನ್ನು ಹೋಗಲಾಡಿಸಿ, ಶಸ್ತ್ರಚಿಕಿತ್ಸೆಯ ನಂತರವೂ ಲವಲವಿಕೆಯಿಂದ ಇರಬಹುದು ಎಂಬುದಕ್ಕೆ ಉದಾಹರಣೆಯಾಗಿರುವ ಇವರು ಇದೀಗ ಆ ದಿನವನ್ನು ಮತ್ತೊಮ್ಮೆ ಸ್ಮರಿಸಿದ್ದಾರೆ. rjsowjanya ಅವರ ಯುಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಶಸ್ತ್ರಚಿಕಿತ್ಸೆಯ ದಿನಗಳ ಬಗ್ಗೆ ಮಾತನಾಡಿದ್ದಾರೆ ರೀನಾ.
ಅವರ ಸಾವು, ನನಗೆ ಹುಟ್ಟು
ಹಾರ್ಟ್ ಸರ್ಜರಿ ಮಾಡಬೇಕು ಎಂದು ವೈದ್ಯರು ಹೇಳಿದಾಗ, ನನ್ನ ಸರ್ಜರಿ ಆಗಬಾರದು ಎಂದು ಪ್ರಾರ್ಥನೆ ಮಾಡಿದ್ದೆ. ಇದಕ್ಕೆ ಕಾರಣ, ನನಗೆ ಹೃದಯ ಹಾಕಬೇಕು ಎಂದರೆ ಅಲ್ಲಿ ಇನ್ನಾರನ್ನೋ ಬ್ರೈನ್ಡೆಡ್ ಎಂದು ಘೋಷಿಸಿರಬೇಕು, ಅರ್ಥಾತ್ ಅವರು ಸಾವನ್ನಪ್ಪಿರಬೇಕು. ಯಾರದ್ದೋ ಸಾವನ್ನು ಬಯಸಿದಂತೆ ಆಗುತ್ತದೆ ಎಂದು ನೆನಪಿಸಿಕೊಂಡಾಗಲೇ ಖಿನ್ನತೆಗೆ ಒಳಗಾದಂತೆ ಆಗಿದ್ದೆ ಎಂದು ಅಂದಿನ ದಿನವನ್ನು ನೆನಪಿಸಿಕೊಂಡಿದ್ದಾರೆ ರೀನಾ. ಆದರೆ ಎಲ್ಲವನ್ನೂ ದೇವರಿಗೆ ಬಿಟ್ಟೆ. 2009ರಲ್ಲಿ ನಿಮಗೆ ಮ್ಯಾಚ್ ಆಗುವ ದಾನಿ ಸಿಕ್ಕಿರುವುದಾಗಿ ಕರೆ ಬಂತು. ಮಂಗಳೂರಿನಿಂದ ಚೆನ್ನೈಗೆ ಆ ಹಾರ್ಟ್ ತರಲಾಗಿತ್ತು. ಆಪರೇಷನ್ ಥಿಯೇಟರ್ಗೆ ಕರೆದುಕೊಂಡು ಹೋಗಿದ್ದಷ್ಟೇ ಗೊತ್ತಿದೆ ಎಂದಿದ್ದಾರೆ.
ಮರುಹುಟ್ಟು ಪಡೆದಿದ್ದೆ
ಮುಂದೇನಾಯಿತೋ ಗೊತ್ತಿಲ್ಲ. ಅನಸ್ತೇಷಿಯಾ ಕೊಟ್ಟರು. ಎಚ್ಚರವಾದಾಗ ಎದುರಿಗೆ ದೇವತೆಯಂತೆ ನರ್ಸ್ ನಿಂತಿದ್ದರು. ನಿಮ್ಮ ಹೃದಯ ಕಸಿ ಯಶಸ್ವಿಯಾಗಿ ಆಗಿದೆ ಎಂದಾಗ ಒಮ್ಮೆ ನನಗೆ ನಂಬಲು ಆಗಲಿಲ್ಲ. ನಿಜಕ್ಕೂ ನಾನು ಜೀವನ ಆಗಿದ್ದೇನೋ ಎಂದು ಚಿವುಟಿಕೊಂಡು ನೋಡುವ ಸನ್ನಿವೇಶ ಬಂತು. ನಿಜಕ್ಕೂ ಯಶಸ್ವಿ ಆಯ್ತಾ ಎಂದಾಗ ಆ ನರ್ಸ್ ಹೌದು. ಎಲ್ಲವೂ ಸರಿಯಾಗಿದೆ ಎಂದರು. ಕೊನೆಗೆ ನನಗೆ ಕುಡಿಯಲು ಜ್ಯೂಸ್ ಕೊಟ್ಟರು. ಆದರೆ ನಾನು ಅದನ್ನು ಕುಡಿಯುವಂತೆ ಇರಲಿಲ್ಲ, ಏಕೆಂದರೆ ನಾನು ಹಲವು ವರ್ಷಗಳಿಂದ ತುಂಬಾ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಬೇಕಿತ್ತು. ಆಹಾರದಲ್ಲಿ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಇತ್ತು. ಇದನ್ನು ನಾನು ನರ್ಸ್ಗೆ ಹೇಳಿದಾಗ ಅವರು ನಕ್ಕು, ಇನ್ನು ಅದೆಲ್ಲಾ ಮುಗಿದ ಕಥೆ. ನೀವು ಆರಾಮಾಗಿ ಇದರ ಸೇವನೆ ಮಾಡಬಹುದು ಎಂದಾಗ ನಂಬಲು ಸಾಧ್ಯವಾಗಲಿಲ್ಲ. ಒಂದು ಹನಿ ಬಿಡದಂತೆ ಎಲ್ಲವನ್ನೂ ಕುಡಿದೆ ಎಂದು ನೆನಪಿಸಿಕೊಂಡಿದ್ದಾರೆ.
ಆ ಬಳಿಕ ಕೆಲವೊಂದು ನಿಯಮಗಳನ್ನು ಪಾಲಿಸಿದೆ. 15 ದಿನಗಳಲ್ಲಿಯೇ ಸಂಪೂರ್ಣ ರಿವಕರಿಯಾದೆ. ಇದು ನನಗೆ ದೇವರು ಕೊಟ್ಟ ಮರುಹುಟ್ಟು ಎಂದು ನೆನಪಿಸಿಕೊಂಡಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ವಿಶ್ವ ಟ್ರಾನ್ಸ್ಪ್ಲಾಂಟ್ ಗೇಮ್ಸ್ನಲ್ಲಿ ಭಾಗವಹಿಸಿ, ಕಸಿ ಪಡೆದವರೂ ಕೂಡ ದೈಹಿಕವಾಗಿ ಸಕ್ರಿಯರಾಗಿರಬಹುದು ಎಂದು ತೋರಿಸಿಕೊಟ್ಟಿದ್ದಾರೆ ರೀನಾ.