
ಹೈದರಾಬಾದ್ನಲ್ಲಿ ನಟ ಅಲ್ಲು ಅರ್ಜುನ್ ಹೊಸ ಮಲ್ಟಿಪ್ಲೆಕ್ಸ್ ‘ಅಲ್ಲು ಸಿನಿಮಾಸ್’ ಶುರು ಮಾಡಿದ್ದಾರೆ. ಇಲ್ಲಿನ ‘ವಾಲ್ ಆಫ್ ಫೇಮ್’ನಲ್ಲಿರೋ ನಿರ್ದೇಶಕರ ಲಿಸ್ಟ್ ಈಗ ಸಖತ್ ಚರ್ಚೆಯಲ್ಲಿದೆ.
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹೈದರಾಬಾದ್ನಲ್ಲಿ ತಮ್ಮದೇ ಆದ ‘ಅಲ್ಲು ಸಿನಿಮಾಸ್’ ಎಂಬ ಹೊಚ್ಚಹೊಸ ಮಲ್ಟಿಪ್ಲೆಕ್ಸ್ ಥಿಯೇಟರ್ ಅನ್ನು ಗುರುವಾರವಷ್ಟೇ ಉದ್ಘಾಟಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅತ್ಯಾಧುನಿಕ ಸೌಲಭ್ಯಗಳು ಮತ್ತು ಟೆಕ್ನಾಲಜಿಯಿಂದ ಸಿದ್ಧವಾಗಿರುವ ಈ ಥಿಯೇಟರ್ನ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರಲ್ಲಿ ಒಂದು ವಿಷಯ ಸಿನಿರಸಿಕರ ಗಮನ ಸೆಳೆದಿದೆ.
ಈ ಥಿಯೇಟರ್ ಕಾಂಪ್ಲೆಕ್ಸ್ನ ಒಂದು ಗೋಡೆಯನ್ನು ‘ವಾಲ್ ಆಫ್ ಫೇಮ್’ ಅಂತ ಹೆಸರಿಟ್ಟು, ಭಾರತದ ಖ್ಯಾತ ನಿರ್ದೇಶಕರ ಫೋಟೋಗಳನ್ನು ಫ್ರೇಮ್ ಹಾಕಿ ಹಾಕಿದ್ದಾರೆ. ಪ್ರತಿಯೊಂದು ಫೋಟೋದ ಕೆಳಗೆ ಅವರ ಹೆಸರನ್ನೂ ಬರೆಯಲಾಗಿದೆ. ವಿಶೇಷ ಅಂದ್ರೆ, ಈ ಲಿಸ್ಟ್ನಲ್ಲಿ ಬೇರೆ ಬೇರೆ ಭಾಷೆಯ ನಿರ್ದೇಶಕರಿದ್ದರೂ, ಕನ್ನಡದ ಇಬ್ಬರು ನಿರ್ದೇಶಕರಿಗೆ ಜಾಗ ಸಿಕ್ಕಿದೆ.
ಈ ‘ವಾಲ್ ಆಫ್ ಫೇಮ್’ನಲ್ಲಿ ಎಸ್.ಎಸ್. ರಾಜಮೌಳಿ, ಸುಕುಮಾರ್, ಮಣಿರತ್ನಂ, ವೆಟ್ರಿಮಾರನ್, ಆಟ್ಲಿ ಜೊತೆಗೆ ನಮ್ಮ ಕನ್ನಡದ ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಕೂಡ ಇದ್ದಾರೆ. ಇವರ ಜೊತೆ ಮಲಯಾಳಂನಿಂದ ಸ್ಥಾನ ಪಡೆದ ಏಕೈಕ ನಿರ್ದೇಶಕ ಅಂದ್ರೆ ಅದು ಲಿಜೋ ಜೋಸ್ ಪೆಲ್ಲಿಸ್ಸೆರಿ. ಇನ್ನು ತ್ರಿವಿಕ್ರಮ್ ಶ್ರೀನಿವಾಸ್, ಪ್ರಶಾಂತ್ ನೀಲ್, ರಾಜ್ಕುಮಾರ್ ಹಿರಾನಿ, ಸಂಜಯ್ ಲೀಲಾ ಬನ್ಸಾಲಿ ಮತ್ತು ಸಂದೀಪ್ ರೆಡ್ಡಿ ವಂಗಾ ಅವರ ಫೋಟೋಗಳೂ ಈ ಗೋಡೆಯ ಮೇಲಿದೆ.
ಬೇಸರ ವ್ಯಕ್ತಪಡಿಸಿದ ಸಿನಿರಸಿಕರು
ಆದರೆ, ಕೆಲವು ಪ್ರಮುಖ ನಿರ್ದೇಶಕರನ್ನು ಕೈಬಿಟ್ಟಿದ್ದಕ್ಕೆ ಸಿನಿರಸಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಆಟ್ಲಿ ಫೋಟೋ ಹಾಕಿ, ಅವರ ಗುರು ಶಂಕರ್ ಅವರನ್ನೇ ಮರೆತಿದ್ದಾರೆ. ರಾಮ್ ಗೋಪಾಲ್ ವರ್ಮಾಗೂ ಇಲ್ಲಿ ಜಾಗ ಸಿಕ್ಕಿಲ್ಲ ಎಂದು ಹಲವರು ಬೆಟ್ಟು ಮಾಡಿ ತೋರಿಸಿದ್ದಾರೆ. ಅಷ್ಟೇ ಅಲ್ಲ, ಹಿರಿಯ ನಿರ್ದೇಶಕರಾದ ಕೆ.ವಿ. ರೆಡ್ಡಿ, ಸಿಂಗೀತಂ ಶ್ರೀನಿವಾಸ ರಾವ್, ರಾಘವೇಂದ್ರ ರಾವ್ ಅವರನ್ನು ಕಡೆಗಣಿಸಿದ್ದಕ್ಕೂ ಟೀಕೆಗಳು ಕೇಳಿಬಂದಿವೆ.
ಆದರೆ, ಈ ಆಯ್ಕೆಯ ಹಿಂದೆ ಬೇರೆಯೇ ಕಾರಣ ಇರಬಹುದು ಅಂತಲೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲು ಅರ್ಜುನ್ ತಾವು ಈಗಾಗಲೇ ಕೆಲಸ ಮಾಡಿದ ಮತ್ತು ಮುಂದೆ ಕೆಲಸ ಮಾಡಲು ಇಷ್ಟಪಡುವ ನಿರ್ದೇಶಕರ ಪಟ್ಟಿಯನ್ನು ಇಲ್ಲಿ ಹಾಕಿರಬಹುದು ಎನ್ನಲಾಗುತ್ತಿದೆ. ‘ಪುಷ್ಪ: ದಿ ರೈಸ್’ ಭರ್ಜರಿ ಯಶಸ್ಸಿನ ನಂತರ ಅಲ್ಲು ಅರ್ಜುನ್ ಬೇರೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಸದ್ಯ ಅವರು ಆಟ್ಲಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಅಲ್ಲು ಅರ್ಜುನ್ ಅವರ 22ನೇ ಸಿನಿಮಾ ಮತ್ತು ಆಟ್ಲಿ ಅವರ 6ನೇ ಚಿತ್ರವಾಗಿದೆ. ಇದೊಂದು ಭಾರಿ ಬಜೆಟ್ನ ಸಿನಿಮಾ ಆಗಲಿದೆ.