
ನ್ಯಾಯಾಂಗ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಜೈಸನ್ ಮತ್ತು ಲೆವಿನಾ ಎಂಬ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ರಾಜ್ಯದ ವಿವಿಧೆಡೆ 15 ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು (ಮಾ.25): ನ್ಯಾಯಾಂಗ ಇಲಾಖೆಯಲ್ಲಿ ಪ್ರೊಸೆಸ್ ಸರ್ವೆಯರ್, ಎಸ್ಡಿಎ, ಎಫ್ಡಿಎ ಮತ್ತು ಚಾಲಕನಂತಹ ಸರ್ಕಾರಿ ಉದ್ಯೋಗಗಳನ್ನು ಕೊಡಿಸುವುದಾಗಿ ನಂಬಿಸಿ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಖತರ್ನಾಕ್ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜೈಸನ್ ಮತ್ತು ಲೆವಿನಾ ಬಂಧಿತ ಆರೋಪಿಗಳಾಗಿದ್ದು, ಇವರ ಬಂಧನದೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಆರಕ್ಕೆ ಏರಿದೆ.
ವಂಚನೆಯ ಜಾಲ ಬಯಲಾಗಿದ್ದು ಹೇಗೆ?
ಜೈಸನ್ ಮತ್ತು ಲೆವಿನಾ ದಂಪತಿ, ನ್ಯಾಯಾಂಗ ಇಲಾಖೆಯಲ್ಲಿ ತಮಗೆ ಉನ್ನತ ಮಟ್ಟದ ಸಂಪರ್ಕವಿದೆ ಎಂದು ಹೇಳಿಕೊಂಡು ಉದ್ಯೋಗಾಕಾಂಕ್ಷಿಗಳನ್ನು ನಂಬಿಸುತ್ತಿದ್ದರು. ಖಾಲಿ ಇರುವ ಹುದ್ದೆಗಳ ಬಗ್ಗೆ ನಿಖರವಾದ ಮಾಹಿತಿ ನೀಡಿ, ನೇಮಕಾತಿ ಪತ್ರ ನೀಡುವುದಾಗಿಯೂ ಭರವಸೆ ನೀಡುತ್ತಿದ್ದರು. ಇದನ್ನು ನಂಬಿದ ನೂರಾರು ಜನರು ಲಕ್ಷಾಂತರ ರೂಪಾಯಿ ಹಣವನ್ನು ಈ ದಂಪತಿಗೆ ನೀಡಿದ್ದಾರೆ. 2022ರಲ್ಲಿ ಚಿಕ್ಕಬಳ್ಳಾಪುರ ಟೌನ್ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಮೊದಲ ವಂಚನೆ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಇವರ ವಂಚನೆಯ ಪುರಾಣ ಆರಂಭವಾಗಿತ್ತು.
ದಂಪತಿ ಮೇಲೆ 15 ಕೇಸ್
ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರೋಬ್ಬರಿ 11 ಪ್ರಕರಣಗಳು ಸೇರಿದಂತೆ ರಾಜ್ಯದ ವಿವಿಧ ಠಾಣೆಗಳಲ್ಲಿ ಒಟ್ಟು 15 ಪ್ರಕರಣಗಳು ಈ ಜೋಡಿಯ ವಿರುದ್ಧ ದಾಖಲಾಗಿವೆ. ಯಲಹಂಕ, ಯಲಹಂಕ ನ್ಯೂಟೌನ್, ಬೊಮ್ಮನಹಳ್ಳಿ, ಆರ್.ಟಿ. ನಗರ, ಮಂಡ್ಯ ಮತ್ತು ಗದಗ ಜಿಲ್ಲೆಗಳಲ್ಲೂ ಇವರ ವಂಚನೆಯ ಕಬಂಧಬಾಹು ಚಾಚಿತ್ತು. ಪ್ರಕರಣದ ಗಂಭೀರತೆಯನ್ನು ಅರಿತ ಸಿಸಿಬಿ ಪೊಲೀಸರು, ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಿದ್ದರು.
ಕನ್ನಡಿಗ IAS ಅಧಿಕಾರಿ ದಿ. ಮಹಾಂತೇಶ್ ಬೀಳಗಿ ಪುತ್ರಿಗೆ ಸರ್ಕಾರಿ ನೌಕರಿ: ಸಚಿವ ಸಂಪುಟದ ಮಹತ್ವದ ತೀರ್ಮಾನ
ಸಿಸಿಬಿ ತನಿಖೆಯಲ್ಲಿ ಬಯಲಾದ ಸತ್ಯಾಂಶಗಳು
ಸಿಸಿಬಿ ಪೊಲೀಸರ ವಿಶೇಷ ತಂಡವು ನಡೆಸಿದ ತನಿಖೆಯಲ್ಲಿ ದಂಪತಿಯ ವಂಚನೆಯ ಸಂಪೂರ್ಣ ಚಿತ್ರಣ ಬಯಲಾಗಿದೆ. ಉದ್ಯೋಗಾಕಾಂಕ್ಷಿಗಳಿಂದ ಪಡೆದ ಹಣದಲ್ಲಿ ಜೈಸನ್ ಮತ್ತು ಲೆವಿನಾ ಐಷಾರಾಮಿ ಜೀವನ ನಡೆಸುತ್ತಿದ್ದರು. ಬೆಂಗಳೂರು ಮತ್ತು ಇತರೆಡೆಗಳಲ್ಲಿ ದುಬಾರಿ ಜಮೀನು ಮತ್ತು ಸೈಟ್ಗಳನ್ನು ಖರೀದಿಸಿದ್ದರು. ಸಿಸಿಬಿ ಅಧಿಕಾರಿಗಳು ಬಂಧಿತರಿಂದ ಪ್ರಾಥಮಿಕವಾಗಿ 38 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ. ವಂಚನೆಯ ಹಣದಿಂದ ಖರೀದಿಸಿದ ಆಸ್ತಿಗಳನ್ನು ಜಪ್ತಿ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದು, ಈ ಸಂಬಂಧ ನ್ಯಾಯಾಲಯಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ.
ಈ ದಂಪತಿ 2022, 2025, ಮತ್ತು 2026ನೇ ಸಾಲುಗಳಲ್ಲಿ ನಿರಂತರವಾಗಿ ವಂಚನೆ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ದಂಪತಿಯಿಂದ ಇನ್ನೂ ಹೆಚ್ಚಿನ ಜನರು ಮೋಸ ಹೋಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಜಾಲದಲ್ಲಿ ಯಾರಾದರೂ ಸರ್ಕಾರಿ ನೌಕರರು ಅಥವಾ ಬೇರೆ ಮತ್ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಸರ್ಕಾರಿ ಉದ್ಯೋಗದ ಆಸೆಯಲ್ಲಿರುವ ಯುವಜನರು ಇಂತಹ ವಂಚಕರ ಬಗ್ಗೆ ಎಚ್ಚರದಿಂದಿರಬೇಕು ಮತ್ತು ಯಾವುದೇ ಹುದ್ದೆಗೆ ಹಣ ನೀಡಿ ಹಿಂಬಾಗಿಲಿನಿಂದ ಪ್ರವೇಶಿಸಲು ಪ್ರಯತ್ನಿಸಬಾರದು ಎಂದು ಸಿಸಿಬಿ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.