
ತುರುವೇಕೆರೆಯಲ್ಲಿ ನಡೆದ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಕನ್ನಡದ ಶೋಚನೀಯ ಸ್ಥಿತಿಯ ಬಗ್ಗೆ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು. ಕನ್ನಡದ ಅಸ್ಮಿತೆ ಉಳಿಸಲು ಕನ್ನಡಿಗರು ಕೆರಳಬೇಕೆಂದು ಕರೆ ನೀಡಿದರು.
ತುರುವೇಕೆರೆ (ಸೆ.23): ರಾಜ್ಯದಲ್ಲಿ ಕನ್ನಡದ, ಕನ್ನಡಿಗರ ಸ್ಥಿತಿ ಶೋಚನಿಯ ಸ್ಥಿತಿಯಲ್ಲಿದೆ. ನಮ್ಮಲ್ಲಿ ಭಾಷಾಭಿಮಾನ ಕಡಿಮೆಯಾಗಿದೆ. ಇದೇ ಪ್ರವೃತ್ತಿ ಮುಂದುವರೆದಲ್ಲಿ ಕನ್ನಡಕ್ಕೆ ಅತ್ಯಂತ ಕೆಟ್ಟ ದಿನಗಳು ಬಂದರೂ ಆಶ್ಚರ್ಯವಿಲ್ಲ. ಹಾಗಾಗಿ ಕನ್ನಡಕ್ಕಾಗಿ ಕನ್ನಡಿಗರ ಮನಸ್ಸು ಅರಳಬೇಕಿದೆ. ಕನ್ನಡಕ್ಕೆ ಧಕ್ಕೆ ಬಂದಾಗ ನಾವು ಕೆರಳಬೇಕಿದೆ ಅಂದಾಗ ಮಾತ್ರ ಕನ್ನಡದ ಅಸ್ಮಿತೆ ಉಳಿಯಲು ಸಾಧ್ಯ ಎಂದು ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಹೇಳಿದರು.
ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಸಹಯೋಗದಲ್ಲಿ ನಡೆದ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಸಮ್ಮೇಳನಗಳು ಕನ್ನಡದ ಪ್ರಜ್ಞೆಯನ್ನು ವಿಸ್ತರಿಸುವ ಕೆಲಸ ಮಾಡಬೇಕು. ಕನ್ನಡವನ್ನು, ಬಳಸುವ, ಉಳಿಸುವ, ಬೆಳೆಸುವ ಆಂತರಿಕ ಪ್ರಜ್ಞೆ ಮೂಡಬೇಕು. ಕನ್ನಡಿಗರನ್ನು ಉಳಿಸಿದರೆ, ಜನ ಸಮುದಾಯ ಕನ್ನಡ ಭಾಷೆಯನ್ನು ಉಳಿಸುತ್ತಾರೆ. ಕನ್ನಡವನ್ನು ಓದುವ ಕಾರಣಕ್ಕಾಗಿ ಅವರು ನಿರುದ್ಯೋಗಿಗಳಾಗದಂತೆ, ನಮ್ಮನ್ನಾಳುವ ಮಂದಿ ನೋಡಿಕೊಳ್ಳಬೇಕು.
ಇದನ್ನೂ ಓದಿ: ‘ಏಯ್ ಡಿಕೆ ಶಿವಕುಮಾರ, ಹಿಂದಿ ಹೇರಿಕೆಗೆ ರಾಹುಲ್, ಸೋನಿಯಾಗಾಂಧಿ ಪರಿಹಾರ ಕೊಡ್ತಾರಾ?; ಕೋಡಿಹಳ್ಳಿ ಏಕವಚನದಲ್ಲೇ ವಾಗ್ದಾಳಿ!
ಸಮ್ಮೇಳನಾಧ್ಯಕ್ಷರಾದ ಪ್ರೊ.ಸಂಪಿಗೆ ತೋಂಟಾದಾರ್ಯ ಮಾತನಾಡಿ, ಸಹೃದಯ ಸಮಾಜ ನಿರ್ಮಾಣದಲ್ಲಿ ಸಾಹಿತ್ಯ, ಕೃಷಿ, ಕಲೆ, ರಂಗಭೂಮಿ ಮತ್ತು ವಾಸ್ತು ಶಿಲ್ಪಕ್ಕೆ ಶಿಕ್ಷಣ ಪ್ರಾಮುಖ್ಯತೆ ವಹಿಸುತ್ತವೆ. ಅಸತ್ಯದಿಂದ ಬೆಳಕಿನೆಡೆಗೆ ಸಾಗಬೇಕು. ಪರಸ್ಪರ ದ್ವೇಷ, ಅಸೂಯೆ, ಕ್ರೌರ್ಯ ಅಳಿಯ ಬೇಕು. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಶಿಕ್ಷಣ ನೀಡಬೇಕು ಎಂದರು. ಶಾಸಕ ಎಂ.ಟಿ.ಕೃಷ್ಣಪ್ಪ, ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿದರು, ‘ಕಲ್ಪವಿಜಯ’ ಸ್ಮರಣ ಸಂಚಿಕೆಯನ್ನು ವೇದಿಕೆಯ ಗಣ್ಯರು ಬಿಡುಗಡೆಗೊಳಿಸಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಪಿ.ರಾಜು ಸ್ವಾಗತಿಸಿದರು.ವಿವಿಧ ಹಂತದಲ್ಲಿ ಮೂರು ಗೋಷ್ಠಿಗಳು ಜರುಗಿದವು. ದಸರಾ ಆರಂಭದ ದಿನವಾಗಿದ್ದರಿಂದ ಬೃಹದಾಕಾರದ ಆನೆಯ ಅಂಬಾರಿ ಯ ಮಾದರಿಯನ್ನೂ ಸಹ ಮೆರವಣಿಗೆ ಮಾಡಲಾಯಿತು. ಇದು ಆಕರ್ಷಣೀಯವಾಗಿತ್ತು.
ಖಾಲಿ ಕುರ್ಚಿ ಕಂಡು ಬೇಸರ:
6 ನೇ ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಕ್ರಮಕ್ಕೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಶಾಸಕ ಎಂ.ಟಿ.ಕೃಷ್ಣಪ್ಪ ನವರು ಮಾತನಾಡಿದ ವೇಳೆ ಖಾಲಿ ಕುರ್ಚಿಗಳು ಇರುವ ಬಗ್ಗೆ ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದರು.