
ಬಿಹಾರ ಬಳಿಕ ಬಂಗಾಳದಲ್ಲಿ ಕೋಲಾಹಲ, ರಾಜ್ಯಪಾಲ ಆನಂದ್ ಬೋಸ್ ದಿಢೀರ್ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯಪಾಲರ ಈ ನಡೆ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಕೋಲ್ಕತಾ (ಮಾ.05) ಬಿಹಾರದಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜಕೀಯ ಕ್ರಾಂತಿಯಾಗಿದೆ. ಇದರ ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೋಲಾಹಲ ಶುರುವಾಗಿದೆ. ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದತೆ ಇತ್ತ ರಾಜ್ಯಪಾಲ ಸಿವಿ ಆನಂದ್ ಬೋಸ್ ದಿಢೀರ್ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರ ರಾಜೀನಾಮೆಗೆ ಸ್ಪಷ್ಟ ಕಾರಣಗಳು ಬಹಿರಂಗವಾಗಿಲ್ಲ.
ಪಶ್ಚಿಮ ಬಂಗಾಳಕ್ಕೆ ರಾಜ್ಯಪಾಲರ ಕಂಟಕ
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಮರ ತಾರಕ್ಕಕೇರಿತ್ತು. ಈ ಪೈಕಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಹಿಂದಿನ ರಾಜ್ಯಪಾಲ ಜಗದೀಪ್ ದನ್ಕರ್ ನಡುವಿನ ಕಿತ್ತಾಟ ತೀವ್ರಗೊಂಡಿತ್ತು. ಆದರೆ ಜಗದೀಪ್ ದನ್ಕರ್ ರಾಜೀನಾಮೆಯಿಂದ ಈ ಜವಾಬ್ದಾರಿ ಸಿವಿ ಆನಂದ್ ಬೋಸ್ ಹೆಗಲೇರಿತ್ತು. ಆನಂದ್ ಬೋಸ್ ಹಾಗೂ ಮಮತಾ ಬ್ಯಾನರ್ಜಿ ಸರ್ಕಾರದ ನಡುವೆ ಕಿತ್ತಾಟ ಇರಲಿಲ್ಲ. ಆದರೆ ಆನಂದ್ ಬೋಸ್ ದಿಢೀರ್ ರಾಜೀನಾಮೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
2022ರಲ್ಲಿ ಸಿವಿ ಆನಂದ್ ಬೋಸ್ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಕಳೆದ ಮೂರು ವರ್ಷಗಳಿಂದ ಸಿವಿ ಬೋಸ್ ರಾಜ್ಯಪಾಲರಾಗಿ ಪಶ್ಚಿಮ ಬಂಗಾಳದಲ್ಲಿನ ಸರ್ಕಾರ ಹಾಗೂ ರಾಜ್ಯಪಾಲರ ತಿಕ್ಕಾಟಕ್ಕೆ ಅಂತ್ಯಹಾಡಿದ್ದರು. ಇದೀಗ ರಾಜೀನಾಮೆಯಿಂದ ಪಶ್ಚಿಮ ಬಂಗಾಳಕ್ಕೆ ಹೊಸ ರಾಜ್ಯಪಾಲರ ನೇಮಕವಾಗಲಿದೆ. ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯಪಾಲರ ರಾಜೀನಾಮೆ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಆನಂದ್ ಬೋಸ್ಗೂ ಮೊದಲು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್ ಧನ್ಕರ್, ರಾಜೀನಾಮೆ ನೀಡಿ ಉಪ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ್ದರು. ಬಳಿಕ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಆದರೆ ಜಗದೀಪ್ ಧನ್ಕರ್ ದಿಢೀರ್ ತಮ್ಮ ಆರೋಗ್ಯದ ಕಾರಣ ನೀಡಿ ರಾಜೀನಾಮೆ ನೀಡಿದ್ದರು. ಧನ್ಕರ್ ರಾಜೀನಾಮೆ ಬಳಿಕ ಸದ್ಯ ಸಿಪಿ ರಾಧಾಕೃಷ್ಣನ್ ಉಪರಾಷ್ಟ್ರಪತಿಯಾಗಿದ್ದಾರೆ.