
ಸಿದ್ಧಾಪುರದ ಸಂಚಲನಕಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ಐವರ ನ್ಯಾಯಾಂಗ ಬಂಧನವನ್ನು ಫೆಬ್ರವರಿ 21ರವರೆಗೆ ವಿಸ್ತರಿಸಲಾಗಿದೆ. ಸಿದ್ಧಾಪುರ JMFC ನ್ಯಾಯಾಲಯ ಈ ಆದೇಶ ನೀಡಿದೆ.
ಕಾರವಾರ (ಫೆ.11): ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಸಿದ್ಧಾಪುರದ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ಐವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. ಸಿದ್ಧಾಪುರದ JMFC ನ್ಯಾಯಾಲಯದ ನ್ಯಾಯಮೂರ್ತಿ ಉಮೇಶ್ ಎಂ.ಪಿ. ಅವರು ಫೆಬ್ರವರಿ 21ರವರೆಗೆ ಬಂಧನ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಫೆ. 14ರಂದು ವ್ಯಾಲಂಟೈನ್ ಡೇ ಸಮಯದಲ್ಲೂ ಅನೈತಿಕ ಪ್ರೇಮಿಗಳು ಜೈಲಲ್ಲೇ ವ್ಯಾಲಂಟೈನ್ ಡೇ ಆಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ
ಈ ಪ್ರಕರಣದಲ್ಲಿ ಒಟ್ಟು 8 ಜನರನ್ನು ಆರೋಪಿಗಳೆಂದು ಗುರುತಿಸಲಾಗಿದ್ದು, ಸದ್ಯ ಐವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಐವರು ಆರೋಪಿಗಳನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆ ಬಳಿಕ ನ್ಯಾಯಾಧೀಶರು ಇವರ ಕಸ್ಟಡಿಯನ್ನು ವಿಸ್ತರಿಸಿದ್ದಾರೆ. ಪ್ರಕರಣದ A1 ಸುಚಿತ್ರಾ, A2 ಲೋಕನಾಥ್, A3 ಕಮಲಾಕರ ಭಟ್, A4 ಆಕಾಶ್ ಹಾಗೂ A8 ವಿನಯ್ಗೆ ಬಂಧನ ಅವಧಿ ವಿಸ್ತರಿಸಲಾಗಿದೆ.
ಉಳಿದ ಮೂವರು ಆರೋಪಿಗಳ ವಿಚಾರಣೆ ಫೆ. 13ಕ್ಕೆ
ಪ್ರಕರಣದ ಉಳಿದ ಮೂವರು ಆರೋಪಿಗಳಾದ ಫೈಸಲ್, ಮೆಹಫೂಸ್ ಮತ್ತು ಇರ್ಫಾನ್ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇವರ ಕಸ್ಟಡಿ ಅವಧಿ ಮುಗಿಯುತ್ತಿದ್ದಂತೆ, ಅಂದರೆ ಫೆಬ್ರವರಿ 13ರಂದು ಇವರನ್ನು ನ್ಯಾಯಾಧೀಶರು ವಿಚಾರಣೆ ನಡೆಸಲಿದ್ದಾರೆ.
ದೀರ್ಘಕಾಲದ ತನಿಖೆ ಮತ್ತು ಸಾಕ್ಷ್ಯಗಳ ಸಂಗ್ರಹಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಪ್ರಮುಖ ಆರೋಪಿಗಳಾದ ಸುಚಿತ್ರಾ ಮತ್ತು ಭಟ್ ಗ್ಯಾಂಗ್ ಈಗ ಫೆಬ್ರವರಿ 21ರವರೆಗೆ ಜೈಲಿನಲ್ಲೇ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.