
ಹೊಸಪೇಟೆ ಭಾಗದಲ್ಲಿ ಟೊಮ್ಯಾಟೋ ಬೆಲೆ ದಾಖಲೆ ಮಟ್ಟಕ್ಕೆ ಕುಸಿದಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಫ್ತು ವ್ಯತ್ಯಯದಿಂದಾಗಿ ಬೇಡಿಕೆ ಕಡಿಮೆಯಾಗಿದ್ದು, ಸಾಗಾಣಿಕೆ ವೆಚ್ಚವೂ ಸಿಗದ ಕಾರಣ ರೈತರು ಟೊಮ್ಯಾಟೋವನ್ನು ರಸ್ತೆಗೆ ಸುರಿದು, ಜಾನುವಾರುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ.
ಹೊಸಪೇಟೆ (ಏ.5): ದೇಶದ ಬೆನ್ನಲುಬಾದ ರೈತರ ಬದುಕು ಈಗ ಅಕ್ಷರಶಃ ಬೀದಿಗೆ ಬಂದಿದೆ. ಬೆಲೆ ಕುಸಿತದಿಂದದ ರೈತರು ಕಂಗಾಲಾಗಿದ್ದಾರೆ. ಹೊಸಪೇಟೆ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಟೊಮ್ಯಾಟೋ ಬೆಲೆ ದಾಖಲೆ ಮಟ್ಟಕ್ಕೆ ಕುಸಿದಿದ್ದು, ಬೆಳೆ ಬೆಳೆದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇರಾನ್ ಯುದ್ಧ, ಗ್ಯಾಸ್ ಕೊರತೆ, ಹೋಟೆಲ್ ಬಂದ್, ತರಕಾರಿ ಕೇಳೋರಿಲ್ಲ
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸತತ ನಿರಂತರ ಯುದ್ಧದಿಂದಾಗಿ ಇದೀಗ ವಿಜಯನಗರ ಜಿಲ್ಲೆಯ ರೈತರ ಮೇಲೆ ನೇರ ಪರಿಣಾಮ ಬೀರಿದೆ. ರಫ್ತು ವಹಿವಾಟಿನಲ್ಲಿ ಉಂಟಾದ ವ್ಯತ್ಯಯ ಹಾಗೂ ಮಾರುಕಟ್ಟೆಯ ಏರುಪೇರಿನಿಂದಾಗಿ ಟೊಮ್ಯಾಟೋ ಬೇಡಿಕೆ ಕುಸಿದಿದ್ದು, ಸ್ಥಳೀಯ ಮಾರುಕಟ್ಟೆಗಳಲ್ಲಿ ಬೆಲೆ ತೀರಾ ಕೆಳಮಟ್ಟಕ್ಕೆ ಇಳಿದಿದೆ.
ಟ್ರ್ಯಾಕ್ಟರ್ನಲ್ಲಿ ತುಂಬಿ ಕುರಿ ಮೇಕೆಗಳಿಗೆ ಟೊಮ್ಯಾಟೋ ಸುರಿದ ರೈತರು
ಮಾರುಕಟ್ಟೆಗೆ ಟೊಮ್ಯಾಟೋ ತಂದರೆ ಸಾಗಾಣಿಕೆ ವೆಚ್ಚವೂ ಕೈಗೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಂಗಾಲಾದ ರೈತರು, ತಮ್ಮ ಹೊಲಗಳಲ್ಲಿ ಬೆಳೆದ ಟೊಮ್ಯಾಟೋಗಳನ್ನು ಟ್ರ್ಯಾಕ್ಟರ್ಗಳಲ್ಲಿ ಲೋಡ್ ಮಾಡಿಕೊಂಡು ಬಂದು ರಸ್ತೆ ಬದಿಗಳಲ್ಲಿ ಸುರಿಯುತ್ತಿದ್ದಾರೆ. ಮಾಡಿದ ಖರ್ಚೂ ಬರದ ಹಿನ್ನೆಲೆಯಲ್ಲಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಲೆ ಇಲ್ಲದ ಕಾರಣ ಟೊಮ್ಯಾಟೋವನ್ನು ಎಸೆಯುವ ಬದಲು, ರೈತರು ಅನಿವಾರ್ಯವಾಗಿ ತಮ್ಮ ಜಾನುವಾರುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ. ನೂರಾರು ಕೆಜಿ ಟೊಮ್ಯಾಟೋಗಳನ್ನು ಕುರಿ, ಮೇಕೆ ಹಾಗೂ ದನ-ಕರುಗಳಿಗೆ ಹಾಕುತ್ತಿರುವ ದೃಶ್ಯಗಳು ಎಂಥವರನ್ನೂ ಮರುಗಿಸುವಂತಿದೆ. ಕಷ್ಟಪಟ್ಟು ಬೆಳೆದ ಬೆಳೆ, ರೈತನ ಬೆವರಿಗೆ ಬೆಲೆಯೇ ಇಲ್ಲದಂತಾಗಿದೆ
ರೈತರಿಗೆ ಸರ್ಕಾರ ಪರಿಹಾರ ನೀಡಲಿ
ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದ ರೈತರು ಈಗ ಬೀದಿಗೆ ಬಿದ್ದಿದ್ದಾರೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು ಅಥವಾ ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.