
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಕರ್ನಾಟಕದ ಕೈಗಾರಿಕಾ ವಲಯವನ್ನು ನಿರ್ಲಕ್ಷಿಸಿದ್ದಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಕೈಗಾರಿಕೆಗಳನ್ನು ಉಳಿಸಲು ಪ್ರಧಾನಿ ಮೋದಿಯವರು ನೇರವಾಗಿ ಹಸ್ತಕ್ಷೇಪ ಮಾಡಬೇಕೆಂದು ಮನವಿ ಮಾಡಿದರು.
ನವದೆಹಲಿ (ಮಾ.24): ಕರ್ನಾಟಕದ ಸದ್ಯದ ಪರಿಸ್ಥಿತಿಯನ್ನು ನೋಡಿದರೆ ‘ಕರ್ನಾಟಕವನ್ನು ಆ ದೇವರೇ ಕಾಪಾಡಬೇಕು” ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ರಾಜ್ಯಸಭೆಯಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ಕೈಗಾರಿಕಾ ವಲಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೇರವಾಗಿ ಹಸ್ತಕ್ಷೇಪ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ:
ರಾಜ್ಯಸಭೆಯಲ್ಲಿ ವಿನಿಯೋಗ ಮಸೂದೆಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ದೇವೇಗೌಡರು, ರಾಜ್ಯದ ಕಾಂಗ್ರೆಸ್ ಸರ್ಕಾರವು ಕೈಗಾರಿಕಾ ವಲಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಟೀಕಿಸಿದರು. ‘ಕರ್ನಾಟಕ ಸರ್ಕಾರವು ಹೇಗೆ ಕೆಲಸ ಮಾಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈಗಿನ ಸ್ಥಿತಿ ನೋಡಿದರೆ ಆ ದೇವರೇ ರಾಜ್ಯವನ್ನು ಉಳಿಸಬೇಕಾಗಿದೆ. ಈ ಸರ್ಕಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಕರ್ನಾಟಕದ ಕೈಗಾರಿಕೆಗಳನ್ನು ಉಳಿಸಲು ನೀವೇ (ಮೋದಿ) ಏನಾದರೂ ಮಾಡಿ’ ಎಂದು ಅವರು ಮನವಿ ಮಾಡಿದರು.
ಕುಮಾರಸ್ವಾಮಿ ಸಾಧನೆ ನೆನೆದ ಗೌಡರು:
ತಮ್ಮ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ಗಳನ್ನು ಸ್ಥಾಪಿಸಿದ್ದರು. ಆದರೆ, ಅವರು ಅಧಿಕಾರದಿಂದ ಕೆಳಗಿಳಿದ ನಂತರ ಆ ಯೋಜನೆಗಳು ಕುಂಠಿತಗೊಂಡಿವೆ. ಇಂದು ಕೇವಲ ಒಂದು ಸಣ್ಣ ಘಟಕ ಮಾತ್ರ ಉಳಿದುಕೊಂಡಿದೆ ಎಂದು ವಿಷಾದಿಸಿದರು. ಪ್ರಸ್ತುತ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿ ಅವರಿಗೆ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಬೆಂಬಲಿಸುವಂತೆ ತಾವೇ ಸಲಹೆ ನೀಡಿದ್ದಾಗಿ ದೇವೇಗೌಡರು ಬಹಿರಂಗಪಡಿಸಿದರು.
ಮೋದಿ ನಾಯಕತ್ವಕ್ಕೆ ಮೆಚ್ಚುಗೆ:
ಪ್ರಧಾನಿ ನರೇಂದ್ರ ಮೋದಿ ಒಬ್ಬ ಪ್ರಬುದ್ಧ ನಾಯಕ ಎಂದು ಬಣ್ಣಿಸಿದ ಗೌಡರು, ಪಶ್ಚಿಮ ಏಷ್ಯಾದ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಮೋದಿ ಅವರ ನಾಯಕತ್ವದ ಮೇಲೆ ಜಗತ್ತಿಗೆ ನಂಬಿಕೆಯಿದೆ ಎಂದರು. ‘ನಾನು ಅಧಿಕಾರಕ್ಕಾಗಿ ಹಪಹಪಿಸುವ ರಾಜಕಾರಣಿಯಲ್ಲ. ಕಾಂಗ್ರೆಸ್ ಜೊತೆಗಿನ ಮೈತ್ರಿಯಲ್ಲಿ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ಮೋದಿ ಅವರ ಮೇಲಿನ ನಂಬಿಕೆಯಿಂದಾಗಿ ನಾವು ಎನ್ಡಿಎ ಮೈತ್ರಿಕೂಟಕ್ಕೆ ಸೇರಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
ಖರ್ಗೆ ಅವರ ಹೇಳಿಕೆಗೆ ತಿರುಗೇಟು:
ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ ಅವರು ದೇವೇಗೌಡರ ಬಗ್ಗೆ ಲೇವಡಿ ಮಾಡಿದ್ದ ‘ನಮ್ಮನ್ನು ಪ್ರೀತಿಸಿ, ಮೋದಿ ಅವರನ್ನು ಮದುವೆಯಾದರು’ ಎಂಬ ಮಾತಿಗೆ ಗೌಡರು ಗೌರವಯುತವಾಗಿಯೇ ಉತ್ತರ ನೀಡಿದರು. ‘ಖರ್ಗೆ ಅವರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನನಗಿಲ್ಲ. ಆದರೆ, ನಾನು ರಾಜ್ಯಸಭೆಗೆ ಆಯ್ಕೆಯಾಗಲು ಕಾಂಗ್ರೆಸ್ ಮತ್ತು ಬಿಜೆಪಿಯ ಉಳಿಕೆ ಮತಗಳೇ ಕಾರಣ ಎಂಬುದು ಸತ್ಯ. ಸ್ವತಃ ಖರ್ಗೆ ಅವರೇ ನನಗೆ ಸಂದೇಶ ಕಳುಹಿಸಿ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದ್ದರು. ಕಾಂಗ್ರೆಸ್ ನಮ್ಮ ಸರ್ಕಾರವನ್ನು ತೆಗೆದಾಗ ನನಗೆ ನೋವಾಗಿದೆ, ಆದರೆ ನಾನು ಯಾರನ್ನೂ ವೈಯಕ್ತಿಕವಾಗಿ ಟೀಕಿಸುವುದಿಲ್ಲ’ ಎಂದರು.