
ಸಿದ್ದರಾಮಯ್ಯ ತಮ್ಮ ರಾಜಕೀಯ ಸ್ಥಾನಮಾನ, ಅಧಿಕಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು, ಈ ವರ್ಗಗಳ ಅಭಿವೃದ್ಧಿಗೆ ಕಿಂಚಿತ್ತೂ ಕೊಡುಗೆ ನೀಡಿಲ್ಲ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ದಾವಣಗೆರೆ (ಮಾ.28): ಅಹಿಂದ ವರ್ಗಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯ ಸ್ಥಾನಮಾನ, ಅಧಿಕಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು, ಈ ವರ್ಗಗಳ ಅಭಿವೃದ್ಧಿಗೆ ಕಿಂಚಿತ್ತೂ ಕೊಡುಗೆ ನೀಡಿಲ್ಲ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡೂವರೆ ವರ್ಷಗಳ ಕಾಂಗ್ರೆಸ್ ಸರ್ಕಾರ ಪ್ರತಿ ಹಂತದಲ್ಲೂ ವಿಫಲವಾಗಿದೆ. ಅಹಿಂದ ಬೆಂಕಿಯಲ್ಲಿ ಸಿದ್ದರಾಮಯ್ಯ ತಮ್ಮ ರಾಜಕೀಯ ರೊಟ್ಟಿಯನ್ನು ಸುಟ್ಟುಕೊಳ್ಳುತ್ತಿದ್ದಾರೆ ಎಂದರು.
ಸಿಎಂ ಭಂಡತನ ಪ್ರದರ್ಶನ: ಕಳೆದ ಚುನಾವಣೆಯಲ್ಲಿ ಜಾತಿಗಣತಿ, ಅಹಿಂದ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ, ಅಧಿಕಾರ ಸಿಕ್ಕ ನಂತರ ಅಹಿಂದ ವರ್ಗವನ್ನೇ ಸಂಪೂರ್ಣ ಕಡೆಗಣಿಸಲಾಗಿದೆ. ಸಿದ್ದರಾಮಯ್ಯ ಈಚೆಗೆ ಮಂಡಿಸಿದ ಬಜೆಟ್ ಉತ್ತರ ಕೇವಲ ಸುಳ್ಳಿನ ಕಂತೆಯಾಗಿದೆ. ಸುಳ್ಳನ್ನೇ ಪದೇಪದೇ ಗಟ್ಟಿಯಾಗಿ ಹೇಳಿದರೆ ಅದೇ ಸತ್ಯವಾಗುತ್ತದೆಂಬ ತತ್ವದ ಮೇಲೆ ಕಾಂಗ್ರೆಸ್ ಸರ್ಕಾರ ದಿನ ಕಳೆಯುತ್ತಿದೆ. ಆದರೂ, ಭಂಡತನದ ಪ್ರದರ್ಶನವನ್ನು ಸಿಎಂ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಕೇಂದ್ರ ಯೋಜನೆಯಡಿ ಅಭಿವೃದ್ಧಿ: ದಾವಣಗೆರೆಯಲ್ಲಿ ₹900 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಗಿದ್ದೇ ಹೊರತು, ರಾಜ್ಯ ಸರ್ಕಾರದ ಯಾವುದೇ ಪಾಲು ಅದರಲ್ಲಿ ಇಲ್ಲ. ನಾಡಿನ ಕೇಂದ್ರ ಬಿಂದುವಾದ, ವಾಣಿಜ್ಯ ಕೇಂದ್ರವಾಗಿದ್ದ ದಾವಣಗೆರೆ ಹಳೆ ಗತವೈಭವ ಇಂದು ಕಾಂಗ್ರೆಸ್ ಆಳ್ವಿಕೆಯಲ್ಲಿ ಕುಂಠಿತವಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ದೊಡ್ಡಮಟ್ಟದ ಸಾಮಾಜಿಕ, ರಾಜಕೀಯ ಧೃವೀಕರಣವಾಗಲಿದೆ. ಮೊದಲ ಸಲ ಇಲ್ಲಿ ಸಾಮಾಜಿಕ ಸಮೀಕರಣವಾಗಲಿದೆ. ಮತ ಬ್ಯಾಂಕ್ ರಾಜಕಾರಣದ ಮೂಲಕ ಜನರನ್ನು ಮರಳು ಮಾಡುವ ತಂತ್ರಕ್ಕೆ ಜನ ಈ ಸಲ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಚುನಾವಣೆ ಮೇಲೆ ಸಿಎಂ ಕುರ್ಚಿ ಕದನದ ಕರಿಛಾಯೆ!
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಮಧ್ಯೆ ಸಿಎಂ ಕುರ್ಚಿ ಕದನದ ಕರಿ ಛಾಯೆ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಮೇಲೆ ಬೀರುತ್ತಿದೆ. ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಮೂಲಕ ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇಡೀ ರಾಜ್ಯದ ರಾಜಕೀಯ ದಿಕ್ಸೂಚಿ ಬದಲಿಸಲಿದೆ ಎಂದು ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು. ಕಾಂಗ್ರೆಸ್ ಸರ್ಕಾರದ ಬಗ್ಗೆ ರಾಜ್ಯದ ಜನತೆ ಭ್ರಮನಿರಸನಗೊಂಡಿದ್ದಾರೆ.
ಅನಿರೀಕ್ಷಿತವಾಗಿ ಉಪ ಚುನಾವಣೆ ಬಂದಿವೆ. ಎರಡೂವರೆ ವರ್ಷದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳಾಗಿವೆ. ಯಾವುದೇ ಕ್ಷೇತ್ರದಲ್ಲೂ ಜನರಿಗೆ ಕಾಂಗ್ರೆಸ್ ಸರ್ಕಾರ ಜೀವಂತ ಇದೆ ಎನಿಸುತ್ತಿಲ್ಲ ಎಂದರು. ಜನಸಾಮಾನ್ಯರ ಸಮಸ್ಯೆ ಆಲಿಸುವವರೇ ಇಲ್ಲದಂತಾದ ಈ ಸರ್ಕಾರ ರೈತವಿರೋಧಿಯಾಗಿದೆ. ಅಭಿವೃದ್ಧಿಯನ್ನು ಇಲ್ಲಿ ಭೂತಗನ್ನಡಿ ಹಿಡಿದು ಹುಡುಕಬೇಕಿದೆ. ಭ್ರಷ್ಟಾಚಾರ ವ್ಯಾಪಕವಾಗಿದ್ದು, ಜನಸಾಮಾನ್ಯರು ಭ್ರಷ್ಟಾಚಾರದಲ್ಲಿ ಸಿಲುಕಿ ನಲುಗುತ್ತಿದ್ದಾರೆ ಎಂದು ಟೀಕಿಸಿದರು.