Bangalore pothole accident ಆನೇಕಲ್ನ ಚಂದಾಪುರದಲ್ಲಿ, ತಂದೆಯೊಬ್ಬರು ತಮ್ಮ ಇಬ್ಬರು ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದಾಗ ರಸ್ತೆಗುಂಡಿಯಿಂದಾಗಿ ಸ್ಕೂಟರ್ ಸಮೇತ ಬಿದ್ದಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಿಂಬದಿಯ ವಾಹನ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ.
ಆನೇಕಲ್(ಫೆ.24): ಸಿಲಿಕಾನ್ ಸಿಟಿಯ ಹೊರವಲಯದ ಆನೇಕಲ್ನಲ್ಲಿ ಹದಗೆಟ್ಟ ರಸ್ತೆಗಳಿಂದ ಮತ್ತೊಂದು ಅವಾಂತರವಾಗಿದೆ. ಇಂದು ಬೆಳಿಗ್ಗೆ ಸುಮಾರು 9:18ರ ವೇಳೆಗೆ ಚಂದಾಪುರದ ಶೆಲ್ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಎದೆ ಝಲ್ಲೆನಿಸುವ ಘಟನೆಯೊಂದು ಸಂಭವಿಸಿದೆ. ತಂದೆಯೊಬ್ಬರು ತಮ್ಮ ಇಬ್ಬರು ಮಕ್ಕಳನ್ನು ಸ್ಕೂಟರ್ನಲ್ಲಿ ಶಾಲೆಗೆ ಬಿಡಲು ಹೋಗುತ್ತಿದ್ದಾಗ, ರಸ್ತೆಗುಂಡಿಯ ಅರಿವಿಲ್ಲದೆ ಆಯತಪ್ಪಿ ವಾಹನ ಸಮೇತ ಪಲ್ಟಿಯಾಗಿದ್ದಾರೆ. ಈ ಭೀಕರ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಿಂಬದಿ ಬರುತ್ತಿದ್ದ ವಾಹನ ಸವಾರರಿಂದ ರಕ್ಷಣೆ
ರಸ್ತೆಯಲ್ಲಿ ಬಿದ್ದ ತಕ್ಷಣ ಪುಟ್ಟ ಮಕ್ಕಳು, ತಂದೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಬರಿಯಿಂದ ಮಕ್ಕಳು ಕಣ್ಣೀರು ಹಾಕಿದ್ದಾರೆ. ಆದರೆ, ದೊಡ್ಡ ಮಟ್ಟದ ಅಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಸ್ಕೂಟರ್ ಬಿದ್ದ ತಕ್ಷಣ ಹಿಂಬದಿಯಿಂದ ವಾಹನವೊಂದು ವೇಗವಾಗಿ ಬರುತ್ತಿತ್ತು, ಚಾಲಕ ಸಮಯಪ್ರಜ್ಞೆಯಿಂದ ಬ್ರೇಕ್ ಹಾಕಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಹದಗೆಟ್ಟ ರಸ್ತೆಯಿಂದಾಗಿ ಮಕ್ಕಳ ಪ್ರಾಣಕ್ಕೆ ಕಂಟಕ ಎದುರಾಗಿರುವುದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕುಸಿತದ ಎಫೆಕ್ಟ್?
ಇತ್ತೀಚೆಗಷ್ಟೇ ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಕುಸಿದು ಅವಾಂತರ ಸೃಷ್ಟಿಯಾಗಿತ್ತು. ಈ ಕುಸಿದ ರಸ್ತೆಗೆ ಹೊಂದಿಕೊಂಡಂತಿರುವ ರಸ್ತೆಯಲ್ಲೇ ಈಗ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ‘ಪ್ರತಿದಿನ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಆತಂಕದಲ್ಲೇ ಹೋಗಬೇಕಾದ ಪರಿಸ್ಥಿತಿ ಇದೆ’ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಆನೇಕಲ್ ಭಾಗದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಗುಂಡಿಗಳು ಯಾವಾಗ ಎದುರಾಗುತ್ತವೆ ಎಂದು ಹೇಳಲಾಗದ ಸ್ಥಿತಿ ಇದೆ. ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಸಂಚಕಾರ ಖಚಿತ ಎಂಬಂತಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡುತ್ತಾರಾ ಕಾದು ನೋಡಬೇಕಿದೆ.
