
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಟೆಂಪೋ ಡ್ರೈವರ್ ಜಾವೀದ್ ಮೇಲೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಐವರು ದುಷ್ಕರ್ಮಿಗಳು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಘಟನೆ ನಡೆದ 24 ಗಂಟೆಯೊಳಗೆ ಮಲ್ಲೇಶ್ವರಂ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು, (ಸೆ.21): ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದ ಭಯಾನಕ ದಾಳಿಯಲ್ಲಿ ಟೆಂಪೋ ಡ್ರೈವರ್ ಜಾವೀದ್ ಮೇಲೆ ಮಚ್ಚಿನಿಂದ ದಾಳಿ ಮಾಡಿ ಕೊಲೆಯತ್ನ ಮಾಡಿದ ಐದು ದುಷ್ಕರ್ಮಿಗಳನ್ನು ಪೊಲೀಸರು ಕೇವಲ 24 ಗಂಟೆಯೊಳಗೆ ಬಂಧಿಸಿದ್ದಾರೆ.
ಸಲೀಂ ಪಾಷಾ, ಸೈಯದ್ ವಾಸಿಂ, ಸೈಯದ್ ಅಫೀಜ್, ಅಫ್ಜಲ್ ಖಾನ್ ಬಂಧಿತ ಆರೋಪಿಗಳು. ಈ ಘಟನೆಯ ಹಿಂದೆ ಹಳೆಯ ದ್ವೇಷವೇ ಕಾರಣವೆಂದು ಶಂಕಿಸಲಾಗಿದ್ದು, ಆರೋಪಿಗಳಿಂದ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಮಲ್ಲೇಶ್ವರಂ ಪೊಲೀಸರ ಕಾರ್ಯದಕ್ಷತೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮಾಜ್ ಮುಗಿಸಿ ಟೀ ಕುಡಿಯುತ್ತ ನಿಂತವನಿಗೆ ಮಚ್ಚಿನೇಟು!
ಬೆಂಗಳೂರಿನ ಮಲ್ಲೇಶ್ವರಂನ ಎಂಡಿ ಬ್ಲಾಕ್ 4ನೇ ಕ್ರಾಸ್ನಲ್ಲಿ ನಡೆದಿದೆ. ಶ್ರೀರಾಂಪುರ ನಿವಾಸಿಯಾದ 35 ವರ್ಷದ ಜಾವೀದ್, ಟೆಂಪೋ ಡ್ರೈವರನಾಗಿ ಕೆಲಸ ಮಾಡುತ್ತಿದ್ದು, ಶನಿವಾರ ರಾತ್ರಿ ಸುಮಾರು 8.30ಕ್ಕೆ ಎಂಡಿ ಬ್ಲಾಕ್ನ ಮಸೀದಿಯಲ್ಲಿ ನಮಾಜ್ ಮಾಡಿದ ನಂತರ, ಪಕ್ಕದಲ್ಲಿರುವ ಚಿಕ್ಕ ಅಂಗಡಿಯಲ್ಲಿ ಚಹಾ ಕುಡಿಯುತ್ತಿದ್ದ ಜಾವೀದ್, ಈ ವೇಳೆ, ಹಠಾತ್ತಾಗಿ ಐದು ದುಷ್ಕರ್ಮಿಗಳು ಏಕಾಏಕಿ ಜಾವೀದ್ ಮೇಲೆ ಮಚ್ಚಿನಿಂದ ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಬಳಿಕ ಸ್ಥಳದಿಂದ ಪರಾರಿಯಾಗಿದ್ದರು. ದಾಳಿಯಲ್ಲಿ ಜಾವೀದ್ಗೆ ಎಡಕ್ಕೆ ಮತ್ತು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗೊಂಡು ರಕ್ತಸಿಕ್ತನಾಗಿ ಕುಸಿದುಬಿದ್ದಿದ್ದರು. ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.