
ಫೆ.15ರಂದು ನಿಗದಿಯಾಗಿದ್ದ ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ ರದ್ದಾಗದಂತೆ ನೋಡಿಕೊಳ್ಳುವಲ್ಲಿ ಐಸಿಸಿ ಯಶಸ್ವಿಯಾಗಿದೆ. ಈ ನಿರ್ಧಾರದಿಂದ ಸುಮಾರು ₹1500 ಕೋಟಿ ನಷ್ಟವನ್ನು ತಪ್ಪಿಸಿದ್ದು, ಪ್ರಸಾರಕರು, ಅಭಿಮಾನಿಗಳು ಮತ್ತು ಸದಸ್ಯ ದೇಶಗಳನ್ನು ನಿರಾಳವಾಗಿಸಿದೆ.
ದುಬೈ: ಭಾರತ ಹಾಗೂ ಪಾಕಿಸ್ತಾನ ನಡುವೆ ಫೆ.15ರಂದು ನಿಗದಿಯಾಗಿದ್ದ ಟಿ20 ವಿಶ್ವಕಪ್ ಪಂದ್ಯ ರದ್ದಾಗದಂತೆ ನೋಡಿಕೊಂಡ ಐಸಿಸಿ ಈಗಾ ನಿರಾಳವಾಗಿದೆ. ಹಲವು ದಿನಗಳಿಂದ ನಡೆಯುತ್ತಿದ್ದ ಹೈಡ್ರಾಮಕ್ಕೆ ಸೋಮವಾರ ತೆರೆ ಎಳೆದ ಐಸಿಸಿ, ಭಾರೀ ನಷ್ಟದಿಂದ ಪಾರಾಗಿದ್ದಲ್ಲದೇ ಇತರರನ್ನೂ ಖುಷಿಯಾಗುವಂತೆ ಮಾಡಿದೆ. ಈ ಪಂದ್ಯ ನಿಗದಿಯಂತೆ ನಡೆಸಲು ಶ್ರಮಪಟ್ಟು ಐಸಿಸಿ ಸಾಧಿಸಿದ್ದೇನು ಎಂಬುದರ ವಿವರ ಇಲ್ಲಿದೆ.
1. ₹1500 ಕೋಟಿ ನಷ್ಟದಿಂದ ಪಾರು
ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯ ನಡೆಯದಿದ್ದರೆ ₹2200 ಕೋಟಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿತ್ತು. ಇದರಲ್ಲಿ ಐಸಿಸಿಯೇ ನೇರ ಅಥವಾ ಪರೋಕ್ಷವಾಗಿ ₹1500 ಕೋಟಿ ನಷ್ಟಕ್ಕೊಳಗಾಗುತ್ತಿತ್ತು. ಸದ್ಯಕ್ಕೆ ಇದರಿಂದ ಪಾರಾಗಿದೆ. ಪಂದ್ಯದ ಪ್ರಸಾರ ಹಕ್ಕಿನ ಮೊತ್ತ, ಪ್ರಾಯೋಜಕತ್ವ, ಟಿಕೆಟ್ ಹಣ, ಜಾಹೀರಾತುಗಳಿಂದ ಆಗುತ್ತಿದ್ದ ನಷ್ಟವನ್ನು ತಪ್ಪಿಸಿಕೊಂಡಿದೆ.
2. ವಿಶ್ವಕಪ್ನ ಬಿಗ್ ಪಂದ್ಯ ಜೀವಂತ
ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕಿರುವ ಮಹತ್ವ ಬೇರೆ ಪಂದ್ಯಗಳಿಗಿಲ್ಲ. ಈ ತಂಡಗಳು ಇಲ್ಲದಿದ್ದರೆ ಫೈನಲ್ ಪಂದ್ಯವೂ ಮಹತ್ವ ಕಳೆದುಕೊಳ್ಳುತ್ತದೆ. ಆದರೆ ಪಂದ್ಯ ಬಹಿಷ್ಕಾರ ನಿರ್ಧಾರದಿಂದ ಪಾಕಿಸ್ತಾನವನ್ನು ಹಿಂದಕ್ಕೆ ಸರಿಯುವಂತೆ ಮಾಡಿ ಐಸಿಸಿ ಟೂರ್ನಿಯನ್ನು ಜೀವಂತವಾಗಿರಿಸಿಕೊಂಡಿದೆ.
3. ಈಗ ಪ್ರಸಾರಕರು ಸೇಫ್
ಮಹತ್ವದ ಪಂದ್ಯ ಖಚಿತವಾಗಿರುವುದರಿಂದ ಪ್ರಸಾರಕರು ನಿಟ್ಟುಸಿರು ಬಿಟ್ಟಿದ್ದಾರೆ. ಒಂದು ವೇಳೆ ಈ ಪಂದ್ಯ ನಡೆಯದಿದ್ದರೆ ಟೂರ್ನಿಯ ಪ್ರಸಾರದಿಂದಲೇ ಹಿಂದೆ ಸರಿಯುವ ಬೇಡಿಕೆ ಇಡಬಹುದಾದ ಸನ್ನಿವೇಶ ನಿರ್ಮಾಣವಾಗುತ್ತಿತ್ತು. ಇದರಿಂದ ಐಸಿಸಿ ಭಾರೀ ಸಂಕಷ್ಟಕ್ಕೆ ಒಳಗಾಗುತ್ತಿತ್ತು. ಅದು ಈಗ ತಪ್ಪಿದೆ.
4. ಹರಿದು ಬರಲಿದೆ ಹಣ
ಪಂದ್ಯ ರದ್ದುಗೊಂಡಿದ್ದರೆ ಐಸಿಸಿಗೆ ಬರುವ ಆದಾಯದಲ್ಲಿ ಕಡಿತವಾಗುತ್ತಿತ್ತು. ಇದರಿಂದ ಜಾಗತಿಕವಾಗಿ ಐಸಿಸಿಯ ಎಲ್ಲಾ ಸದಸ್ಯ ದೇಶಗಳಿಗೂ ತೊಂದರೆಯಾಗುತ್ತಿತ್ತು. ಪಂದ್ಯ ನಡೆಯುವುದರಿಂದ ಮುಂದಿನ ಅವಧಿಯಲ್ಲಿ ಐಸಿಸಿಗೆ ಹರಿದು ಬರಲಿರುವ ಹಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
5. ಅಭಿಮಾನಿಗಳಿಗೆ ರಸದೌತಣ
ಭಾರತ-ಪಾಕ್ ಪಂದ್ಯವನ್ನು ಈ ಎರಡು ದೇಶಗಳು ಮಾತ್ರವಲ್ಲದೆ ವಿಶ್ವದೆಲ್ಲೆಡೆಯ ಅಭಿಮಾನಿಗಳು ಕುತೂಹಲದಿಂದ ನೋಡುತ್ತಾರೆ. ಪಂದ್ಯ ರದ್ದಾಗುವ ಭೀತಿಯಲ್ಲಿದ್ದ ಅಭಿಮಾನಿಗಳು ಈಗ ಖುಷಿಯಾಗಿದ್ದು, ಬದ್ಧವೈರಿಗಳ ನಡುವಿನ ರೋಚಕ ಪಂದ್ಯದ ನಿರೀಕ್ಷೆಯಲ್ಲಿದ್ದಾರೆ.
6. ಕ್ರೀಡೆಯಿಂದ ರಾಜಕೀಯ ದೂರ
ವಿಶ್ವಕಪ್ ವಿಚಾರದಲ್ಲಿ ಬಾಂಗ್ಲಾ, ಪಾಕ್ ನಡೆ ಶುದ್ಧ ರಾಜಕೀಯವಾಗಿತ್ತು. ಈ 2 ದೇಶಗಳ ಸರ್ಕಾರಗಳೇ ಈ ವಿವಾದದ ಕೇಂದ್ರಬಿಂದುಗಳಾಗಿದ್ದವು. ಆದರೆ ಈಗ ವಿವಾದ ಪರಿಹಾರ ಆಗಿರುವುದರಿಂದಾಗಿ ಸದ್ಯದ ಮಟ್ಟಿಗೆ ಕ್ರೀಡೆಯಿಂದ ರಾಜಕೀಯ ದೂರ ಉಳಿದಂತಾಗಿದೆ.
7. ಐಸಿಸಿ ಕಚೇರಿ ಗೌರವಕ್ಕಿಲ್ಲ ಧಕ್ಕೆ
ಈ ಬಾರಿ ಉಂಟಾದ ವಿವಾದ ಹಿಂದೆಂದಿಗಿಂತಲೂ ದೊಡ್ಡದು. ಹೀಗಾಗಿ ಐಸಿಸಿ ಮೇಲೆ ಭಾರೀ ಒತ್ತಡವಿತ್ತು. ಇದನ್ನು ಹೇಗೆ ನಿಭಾಯಿಸಲಿದೆ ಎಂಬ ಕುತೂಹಲವಿತ್ತು. ಆದರೆ ವಿವಾದವನ್ನು ಸಮರ್ಥವಾಗಿ ನಿಭಾಯಿಸಿದ ಐಸಿಸಿ, ಈಗಲೂ ಕ್ರಿಕೆಟ್ ಜಗತ್ತಿನ ಮೇಲೆ ಹಿಡಿತ ಹೊಂದಿದೆ ಎನ್ನುವುದು ಸಾಬೀತುಪಡಿಸಿತು. ಐಸಿಸಿ ಅಧ್ಯಕರ ಕಚೇರಿಯ ಗೌರವಕ್ಕೆ ಧಕ್ಕೆ ಬಾರದಂತೆ ನೋಡಿಕೊಂಡಿತು.