
<p>ಸೈಬರ್ ದಾಳಿ ವಿರುದ್ಧ ದೂರು ನೀಡಿದಾಗ ತಮಗೆ ಬೆಂಬಲ ನೀಡಿದ ಎಲ್ಲರಿಗೂ ನಟಿ ರೇಖಾ ರತೀಶ್ ಧನ್ಯವಾದ ತಿಳಿಸಿದ್ದಾರೆ. ಕಳೆದ ದಿನ ಮುಖ್ಯಮಂತ್ರಿ ಕಚೇರಿಗೆ ಹೋಗಿ ದೂರು ನೀಡಿದ್ದು, ಅವರೇ ನನ್ನ ಕೊನೆಯ ಭರವಸೆ ಎಂದಿದ್ದಾರೆ. ‘ಮರುನಾಡನ್ ಮಲಯಾಳಿ’, ‘ಎಬಾ ಡಿಬೇಟ್’, ‘ಸಿನಿ ಲೈಫ್’ ಮತ್ತು ‘ಕಕ್ಕಿರಿ ಆ್ಯಂಡ್ ಫ್ಯಾಮಿಲಿ’ ಎಂಬ ಯೂಟ್ಯೂಬ್ ಚಾನೆಲ್ಗಳು ತಮ್ಮ ವಿರುದ್ಧ ವಿಡಿಯೋ ಮಾಡಿವೆ ಎಂದು ರೇಖಾ ನೇರವಾಗಿ ಆರೋಪಿಸಿದ್ದಾರೆ. ‘ನಾನು ಎಲ್ಲಾ ಯೂಟ್ಯೂಬರ್ಗಳನ್ನು ದೂರಿಲ್ಲ, ಹಾಗೇನಾದರೂ ಅನ್ನಿಸಿದ್ದರೆ ಕ್ಷಮೆ ಇರಲಿ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.</p><h2><strong>ರೇಖಾ ರತೀಶ್ ಹೇಳಿದ್ದಿಷ್ಟು:</strong></h2><p>’ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಸಾವಿರ ಧನ್ಯವಾದಗಳು. ಇಷ್ಟೊಂದು ಜನ ನನ್ನ ಪರ ನಿಲ್ಲುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ತುಂಬಾ ಖುಷಿಯಾಯಿತು. ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ಸರ್, ಪ್ರದೀಪ್ ಸರ್ ಮತ್ತು ಶಶಿ ಸರ್ ಅವರಿಗೆ ವಿಶೇಷ ಧನ್ಯವಾದ. ನಿನ್ನೆ ಮಧ್ಯಾಹ್ನ 3 ಗಂಟೆಗೆ ನಾನು ಸಿಎಂ ಕಚೇರಿಗೆ ಹೋಗಿ ನನ್ನ ದೂರನ್ನು ದಾಖಲಿಸಿದ್ದೇನೆ. ಇನ್ನು ಪ್ರೀತಿಯ ಯೂಟ್ಯೂಬರ್ಗಳೇ, ನಾನು ಎಲ್ಲಾ ಯೂಟ್ಯೂಬರ್ಗಳ ಬಗ್ಗೆ ಮಾತನಾಡಿಲ್ಲ. ‘ಒಂದು ಗುಂಪು’ ಎಂದಷ್ಟೇ ಹೇಳಿದ್ದೇನೆ. ಆ ಕ್ಷಣದ ನನ್ನ ಮಾನಸಿಕ ಸ್ಥಿತಿ ಹಾಗೆ ಹೇಳಿಸಿರಬಹುದು. ಅದರಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ.</p><p>ನಾನು ಉದ್ದೇಶಪೂರ್ವಕವಾಗಿ ಆ ವಿಡಿಯೋ ಮಾಡಿದ್ದಲ್ಲ. ‘ಈ ಒತ್ತಡದಿಂದ ಹೊರಬರಲು ಯಾರ ಹತ್ತಿರವಾದರೂ ಮಾತನಾಡು’ ಎಂದು ನನ್ನ ಮಗ ಹೇಳಿದ. ನನಗೆ ಬೇರೆ ಯಾರೂ ಇಲ್ಲದ ಕಾರಣ, ತಕ್ಷಣ ನೆನಪಾಗಿದ್ದು ಮುಖ್ಯಮಂತ್ರಿಗಳ ಮುಖ. ಅದೇ ನನ್ನ ಕೊನೆಯ ಭರವಸೆಯಾಗಿತ್ತು. ‘ಇನ್ಸ್ಟಾಗ್ರಾಮ್ ಮೂಲಕವೇ ಇದೆಲ್ಲಾ ತಿಳಿಸಬೇಕಾ?’ ಎಂದು ಹಲವರು ಕೇಳಿದರು. ಹಾಗಲ್ಲ ಎಂದು ನನಗೂ ಗೊತ್ತು.</p><p>ವರ್ಷಗಳ ಕಾಲ ಕಮಿಷನರ್ ಕಚೇರಿ, ಪೊಲೀಸ್ ಠಾಣೆ ಅಂತ ಅಲೆದಿದ್ದೇನೆ. ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ. ಇದೆಲ್ಲವನ್ನೂ ಬದಿಗಿಟ್ಟು ನಾನು ನನ್ನ ಮಗನ ಜೊತೆ ಬದುಕುತ್ತಿದ್ದೆ. ಆದರೆ ಕಳೆದ ಮೂರು ತಿಂಗಳಿಂದ ಎಲ್ಲವೂ ನನ್ನ ಸಹನೆ ಮೀರಿತ್ತು. ‘ಮರುನಾಡನ್ ಮಲಯಾಳಿ’, ‘ಎಬಾ ಡಿಬೇಟ್’, ‘ಸಿನಿ ಲೈಫ್’ ನನ್ನ ವಿರುದ್ಧ ವಿಡಿಯೋ ಮಾಡಿದವು. ಇದರಲ್ಲಿ ‘ಮರುನಾಡನ್’ ಮತ್ತು ‘ಸಿನಿ ಲೈಫ್’ ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಲು ಶುರುಮಾಡಿದವು. 14 ವರ್ಷಗಳ ಹಿಂದೆ ಇದೇ ರೀತಿ ನನ್ನನ್ನು ಆತ್ಮ*ಹತ್ಯೆಯ ಹಂತಕ್ಕೆ ತಳ್ಳಲಾಗಿತ್ತು. ಈಗ ಮತ್ತೆ ಅದೇ ಪುನರಾವರ್ತನೆಯಾಗುತ್ತಿದೆ. ‘ಎಬಾ ಡಿಬೇಟ್’ ಚಾನೆಲ್ನಲ್ಲಿ ಇಬ್ಬರು ಹುಡುಗಿಯರು ಬಂದು ಮಾತನಾಡುವ ರೀತಿ ಮತ್ತು ಬಳಸುವ ಪದಗಳನ್ನು ನೀವೇ ನೋಡಿ. ಒಬ್ಬ ಮಹಿಳೆಯಾಗಿ ನನಗೆ ಅದನ್ನು ಸಹಿಸಿಕೊಳ್ಳಲು ಆಗಲಿಲ್ಲ. ಆ ವಿಡಿಯೋದಿಂದ ನನಗೂ ನನ್ನ ಮಗನಿಗೂ ತುಂಬಾ ನೋವಾಗಿದೆ.</p><h2><strong>’ಸೀರೆ ಬದಲಾಯಿಸಿದ ಹಾಗೆ’ ಎಂದರೇನು ಕೇಳಿದ ಮಗ</strong></h2><p>ಹಾಗೆಯೇ ‘ಕಕ್ಕಿರಿ ಆ್ಯಂಡ್ ಫ್ಯಾಮಿಲಿ’ ಚಾನೆಲ್ನವರೇ… ಬ್ರದರ್, ನಾನು ನಿಮಗೆ ಏನು ಮಾಡಿದ್ದೇನೆ? ‘ಸೀರೆ ಬದಲಾಯಿಸಿದ ಹಾಗೆ’ ಅಂತ ನನ್ನ ಮಗ ಕೇಳಿದರೆ ನಾನೇನು ಉತ್ತರ ಕೊಡಬೇಕು? ದೇವರನ್ನು ನೆನೆದು ಹೇಳ್ತೀನಿ, ನಮಗೆ ಯಾವ ಒಳ್ಳೆಯದನ್ನೂ ಮಾಡಬೇಡಿ. ಆದರೆ ದಯವಿಟ್ಟು ನಮ್ಮನ್ನು ಬದುಕಲು ಬಿಡಿ. ನಾನೂ ನನ್ನ ಮಗನೂ ಈ ಪುಟ್ಟ ಕೇರಳದಲ್ಲಿ ಬದುಕಿ ಹೋಗುತ್ತೇವೆ. ದೇವರ ದಯೆಯಿರಲಿ, ನಮ್ಮನ್ನು ಹಿಂಸಿಸಲು ಬರಬೇಡಿ.</p><p>ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ. ನಾನು ಅವರೊಂದಿಗೆ ಮಾತನಾಡಿದ್ದೇನೆ. ತುಂಬಾ ಧನ್ಯವಾದ. ನನ್ನ ಸಹೋದ್ಯೋಗಿಗಳ ಬಗ್ಗೆಯೂ ಕೆಟ್ಟದಾಗಿ ಥಂಬ್ನೇಲ್ಗಳನ್ನು ಹಾಕಿ ನಮ್ಮನ್ನು ಹಿಂಸಿಸಬೇಡಿ. ನಾವೂ ಬದುಕಲು ಕಷ್ಟಪಡುತ್ತಿರುವ ಬಡವರೇ. ದಿನದ ದುಡಿಮೆಯಿಂದ ಜೀವನ ನಡೆಸುವವರು. ನಮ್ಮನ್ನು ಮಾನಸಿಕ ಒತ್ತಡಕ್ಕೆ ದೂಡಬೇಡಿ, ನಮ್ಮ ಬದುಕನ್ನು ಹಾಳುಮಾಡಬೇಡಿ. ಇದೊಂದು ಮನವಿ.</p>
Source link
ಧಾರಾವಾಹಿ ನಟಿಗೆ ಕಿರುಕುಳ ಕೊಟ್ಟ ಯ್ಯೂಟೂಬರ್ಗಳಿಗೆ ಕಂಟಕ; ಸಿಎಂಗೆ ದೂರು ಕೊಟ್ಟ ಬೆನ್ನಲ್ಲೇ ಕಠಿಣ ಕ್ರಮ!