
ಮಹಾರಾಷ್ಟ್ರ ಸರ್ಕಾರವು ‘ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳ್ಕರ್ ಶೇತ್ಕರಿ ಕರ್ಜ್ ಮಾಫಿ ಯೋಜನೆ’ಯನ್ನು ಘೋಷಿಸಿದೆ. ಈ ಯೋಜನೆಯಡಿ, 2 ಲಕ್ಷ ರೂಪಾಯಿವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡಲಾಗುವುದು ಮತ್ತು ಪ್ರಾಮಾಣಿಕವಾಗಿ ಸಾಲ ಮರುಪಾವತಿಸುವ ರೈತರಿಗೆ ₹50,000 ಪ್ರೋತ್ಸಾಹಧನ ನೀಡಲಾಗುವುದು.
ಮುಂಬೈ (ಮಾ.6): ಮಹಾರಾಷ್ಟ್ರದ ರೈತ ಸಮುದಾಯಕ್ಕೆ ಇಂದು ದೊಡ್ಡ ಶುಭಸುದ್ದಿ ಸಿಕ್ಕಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ನಲ್ಲಿ ರೈತರ ಸಾಲ ಮನ್ನಾ ಕುರಿತು ಐತಿಹಾಸಿಕ ಘೋಷಣೆ ಮಾಡಿದ್ದಾರೆ. ರೈತರ ಸಾಲ ಮನ್ನಾ ಪ್ರಕ್ರಿಯೆಯನ್ನು ಜಾರಿಗೊಳಿಸಲು ಸರ್ಕಾರವು ವಿಶೇಷ ಸಮಿತಿಯನ್ನು ರಚಿಸಿದೆ. ಈ ಬಜೆಟ್ನಲ್ಲಿ ‘ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳ್ಕರ್ ಶೇತ್ಕರಿ ಕರ್ಜ್ ಮಾಫಿ ಯೋಜನೆ’ (Punyashlok Ahilyabai Holkar Shetkari Karz Mafi Yojana) ಯನ್ನು ಘೋಷಿಸಲಾಗಿದೆ.
ಸೆಪ್ಟೆಂಬರ್ 30, 2025 ರವರೆಗೆ ಬೆಳೆ ಸಾಲ ಬಾಕಿ ಉಳಿಸಿಕೊಂಡಿರುವ ರೈತರಿಗೆ ಈ ಯೋಜನೆಯಡಿ 2 ಲಕ್ಷ ರೂಪಾಯಿ ವರೆಗಿನ ಸಾಲ ಮನ್ನಾ ಸೌಲಭ್ಯ ಸಿಗಲಿದೆ. ಸಾಲ ಮರುಪಾವತಿ ಮಾಡಲಾಗದೆ ಬಾಕಿ (Arrears) ಉಳಿಸಿಕೊಂಡಿರುವ ರೈತರು ಈ ಯೋಜನೆಯ ನೇರ ಲಾಭ ಪಡೆಯಲಿದ್ದಾರೆ.
ಪ್ರಾಮಾಣಿಕವಾಗಿ ಸಾಲ ತೀರಿಸಿದವರಿಗೆ ₹50,000 ಪ್ರೋತ್ಸಾಹಧನ!
ಬಜೆಟ್ನಲ್ಲಿ ಕೇವಲ ಸಾಲ ಬಾಕಿ ಉಳಿಸಿಕೊಂಡವರಿಗೆ ಮಾತ್ರವಲ್ಲದೆ, ಶಿಸ್ತಿನಿಂದ ಸಾಲ ಮರುಪಾವತಿ ಮಾಡುವ ರೈತರಿಗೂ ಮನ್ನಣೆ ನೀಡಲಾಗಿದೆ. ಸಾಲ ಪಡೆದು ಅದನ್ನು ನಿಯಮಿತವಾಗಿ ಮರುಪಾವತಿಸುವ ಅರ್ಹ ರೈತರಿಗೆ 50,000 ರೂಪಾಯಿ ವರೆಗೆ ಪ್ರೋತ್ಸಾಹಕ ಧನ (Incentive benefits) ನೀಡುವುದಾಗಿ ಘೋಷಿಸಲಾಗಿದೆ.
ದೀರ್ಘಕಾಲೀನ ಯೋಜನೆ ಮತ್ತು ಬ್ಯಾಂಕಿಂಗ್ ಸುಧಾರಣೆ
ರೈತರನ್ನು ಸಾಲಮುಕ್ತರನ್ನಾಗಿ ಮಾಡಲು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೆಚ್ಚು ದಕ್ಷಗೊಳಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ರಚಿಸಲಾಗಿರುವ ಸಮಿತಿಯ ಶಿಫಾರಸುಗಳ ಅನ್ವಯ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಫಡ್ನವೀಸ್ ತಿಳಿಸಿದ್ದಾರೆ. ರೈತರು ಪದೇ ಪದೇ ಸಾಲದ ಸುಳಿಗೆ ಸಿಲುಕದಂತೆ ತಡೆಯಲು ಸಮಿತಿಯ ಮಾನದಂಡಗಳ ಪ್ರಕಾರ ದೀರ್ಘಕಾಲೀನ ಯೋಜನೆಗಳನ್ನು ರೂಪಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಒಟ್ಟಾರೆಯಾಗಿ, ದೇವೇಂದ್ರ ಫಡ್ನವೀಸ್ ಮಂಡಿಸಿದ ಈ ಬಜೆಟ್ ಮಹಾರಾಷ್ಟ್ರದ ಅನ್ನದಾತರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.