ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆಯ ಮೇಲೆ ನಡೆದ ಕಲ್ಲೆಸೆತದ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಕರೆ ನೀಡಿರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಸಾವಿರಾರು ಪೊಲೀಸರು ನಗರದಾದ್ಯಂತ ಪಥಸಂಚಲನ ನಡೆಸಿದರು.
ಬಾಗಲಕೋಟೆ (ಫೆ.25): ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆಯ ಸಂದರ್ಭದಲ್ಲಿ ಕಿಡಿಗೇಡಿಗಳು ನಡೆಸಿದ ಕಲ್ಲೆಸೆತ ಪ್ರಕರಣ ಈಗ ಬಾಗಲಕೋಟೆಯಲ್ಲಿ ಕಿಚ್ಚು ಹಚ್ಚಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಜಿಲ್ಲೆಯ ಹಿಂದೂ ಕಾರ್ಯಕರ್ತರು, ನಾಳೆ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆ ಸರ್ವಸನ್ನದ್ಧವಾಗಿದೆ.
ಬಾಗಲಕೋಟೆ ರಸ್ತೆಗಳಲ್ಲಿ ಖಾಕಿ ಪಡೆಗಳ ಶಕ್ತಿ ಪ್ರದರ್ಶನ
ಪ್ರತಿಭಟನೆಯ ಸಮಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಇಂದು ನಗರದಾದ್ಯಂತ ಭರ್ಜರಿ ಪಥಸಂಚಲನ ನಡೆಸಿದರು. ಕೈಯಲ್ಲಿ ಲಾಠಿ, ಸುರಕ್ಷಾ ಕವಚಗಳು ಮತ್ತು ಶಿರಸ್ತ್ರಾಣಗಳನ್ನು ಧರಿಸಿ ಸಾವಿರಾರು ಪೊಲೀಸರು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಈ ಆ್ಯಕ್ಷನ್ ಪರೇಡ್ ನಗರದ ಜನತೆಯಲ್ಲಿ ಧೈರ್ಯ ಮೂಡಿಸಿದರೆ, ಗಲಭೆಕೋರರಲ್ಲಿ ನಡುಕ ಹುಟ್ಟಿಸಿದೆ.
ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಫರೇಡ್: ಭದ್ರತೆ ಹೆಚ್ಚಳ
ನವನಗರದ ಎಲ್ಐಸಿ ವೃತ್ತ, ಹಳೆ ಬಾಗಲಕೋಟೆ ಹಾಗೂ ಪ್ರಖ್ಯಾತ ಬಸವೇಶ್ವರ ಸರ್ಕಲ್ ಸೇರಿದಂತೆ ನಗರದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪೆರೇಡ್ ನಡೆಸಿದರು. ಪ್ರತಿಯೊಂದು ವೃತ್ತದಲ್ಲೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಮತ್ತು ಭದ್ರತೆಗೆ ಯಾವುದೇ ತೊಂದರೆಯಾಗದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಪುಂಡರಿಗೆ ಮಾರಿಹಬ್ಬದ ಎಚ್ಚರಿಕೆ ನೀಡಿದ ಖಾಕಿ ಪಡೆ
ಗಲಭೆ ಎಬ್ಬಿಸುವ ಅಥವಾ ಕಾನೂನು ಕೈಗೆತ್ತಿಕೊಳ್ಳುವ ಪುಂಡಾಟಿಕೆಯ ವ್ಯಕ್ತಿಗಳಿಗೆ ಪೊಲೀಸರು ನೇರ ಎಚ್ಚರಿಕೆ ನೀಡಿದ್ದಾರೆ. ‘ಕಲ್ಲು ತೂರಾಟ ಅಥವಾ ಸಾರ್ವಜನಿಕ ಆಸ್ತಪಾಸ್ತಿಗೆ ಹಾನಿ ಮಾಡಿದರೆ ಈ ಬಾರಿ ಪೊಲೀಸರಿಂದ ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಎಂಬ ಕಠಿಣ ಸಂದೇಶವನ್ನು ರವಾನಿಸಲಾಗಿದೆ.
