
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ಸರಣಿ ಸೋತಿರುವ ಭಾರತ ವೈಟ್ವಾಷ್ ಭೀತಿಯಲ್ಲಿದ್ದು, ಎರಡೂ ತಂಡಗಳು ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿದಿವೆ.
ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಮೈದಾನದಲ್ಲಿ ಆಸೀಸ್ ಮೊದಲು ಬ್ಯಾಟ್ ಮಾಡಿದ ಬಹುತೇಕ ಪಂದ್ಯಗಳನ್ನು ಜಯಿಸಿದೆ.
ಉಭಯ ತಂಡಗಳ ಪಾಲಿಗೆ ಔಪಚಾರಿಕ ಪಂದ್ಯ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿದೆ. ಮೊದಲೆರಡು ಪಂದ್ಯ ಸೋತಿರುವ ಭಾರತ ಇದೀಗ ವೈಟ್ವಾಷ್ ಭೀತಿಗೆ ಸಿಲುಕಿದೆ. ಈಗಾಗಲೇ ಮೊದಲೆರಡು ಪಂದ್ಯ ಗೆದ್ದು 2-0 ಅಂತರದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು ಸರಣಿ ಕೈವಶ ಮಾಡಿಕೊಂಡಿದೆ. ಹೀಗಾಗಿ ಈ ಪಂದ್ಯವು ಔಪಚಾರಿಕ ಪಂದ್ಯ ಎನಿಸಿಕೊಂಡಿದೆ.
ಎರಡೂ ತಂಡದಲ್ಲಿ ಮೇಜರ್ ಚೇಂಜ್:
ಇದೊಂದು ಔಪಚಾರಿಕ ಪಂದ್ಯ ಎನಿಸಿಕೊಂಡಿರುವುದರಿಂದ ಎರಡೂ ತಂಡದಲ್ಲೂ ಪ್ರಮುಖ ಬದಲಾವಣೆ ಮಾಡಲಾಗಿದೆ. ಕಳೆದ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿ ಮಿಂಚಿದ್ದ ಕ್ಸೇವಿಯರ್ ಬರ್ಟೆಲ್ಟ್ ಬದಲಿಗೆ ನೇಥನ್ ಎಲ್ಲೀಸ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಭಾರತ ತಂಡದಲ್ಲಿ ನಿರೀಕ್ಷೆಯಂತೆಯೇ ಎರಡು ಬದಲಾವಣೆ ಮಾಡಲಾಗಿದ್ದು, ಅರ್ಶದೀಪ್ ಸಿಂಗ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಪ್ರಸಿದ್ದ್ ಕೃಷ್ಣ ಹಾಗೂ ಕುಲ್ದೀಪ್ ಯಾದವ್ ತಂಡ ಕೂಡಿಕೊಂಡಿದ್ದಾರೆ.
ಪಂದ್ಯ ಆರಂಭ: ಬೆಳಗ್ಗೆ 9 ಗಂಟೆಗೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್