
ಆಂಧ್ರಪ್ರದೇಶದ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರ ಮಾತಿನಿಂದ ಕುಪಿತಗೊಂಡ 10ನೇ ತರಗತಿ ವಿದ್ಯಾರ್ಥಿ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಗಳ ಶಿಸ್ತು ಮತ್ತು ಪೋಷಕರ ಜವಾಬ್ದಾರಿಯ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಶಾಲೆಯಲ್ಲಿ ಶಿಕ್ಷಕನನ್ನೇ ಥಳಿಸಿದ ವಿದ್ಯಾರ್ಥಿ
ಬದುಕಿನಲ್ಲಿ ಗುರಿ ಹಾಗೂ ದಾರಿ ತೋರುವ ಗುರು ಎರಡಿದ್ದರೆ ಬದುಕಿನಲ್ಲಿ ಯಶಸ್ಸು ಸಾಧ್ಯ ಎಂಬ ನಂಬಿಕೆ ಇದೆ. ಬದುಕಿನ ದಾರಿ ತೋರುವ ಗುರುವನ್ನು ದೇವರ ಸ್ಥಾನಕ್ಕೆ ಏರಿಸಿ ಗುರು ದೇವೋಭವ ಎಂಬ ಸಂಸ್ಕೃತ ಉಕ್ತಿಯೇ ಇದೆ. ಗುರುವಿನ ಮಾರ್ಗದರ್ಶನವೊಂದಿದ್ದರೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬಹುದು. ಗುರುಗಳ ಪ್ರೇರಣೆಯಿಂದಲೇ ಬದುಕಿಗೊಂಡು ರೂಪ ಕೊಟ್ಟ ಅನೇಕ ಯಶಸ್ವಿ ವ್ಯಕ್ತಿಗಳಿದ್ದಾರೆ. ಆದರೆ ದಾರಿ ತೋರುವ ಗುರುವನ್ನೇ ಇಲ್ಲೊಬ್ಬ ವಿದ್ಯಾರ್ಥಿ ಸಿನಿಮಾ ಸ್ಟೈಲ್ನಲ್ಲಿ ಥಳಿಸಿದ್ದಾನೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅಂದಹಾಗೆ ಈ ಘಟನೆ ನಡೆದಿರುವುದು ಆಂಧ್ರಪ್ರದೇಶದ ವೀರವಲ್ಲಿ ಎಂಬ ಗ್ರಾಮದಲ್ಲಿ ಇರುವ ಜಿಲ್ಲಾ ಪರಿಷತ್ನ ಪ್ರೌಢ ಶಾಲೆಯಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿಯ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಮಾತಿನ ಚಕಮಕಿಯ ನಂತರ ಕುಪಿತಗೊಂಡ 10ನೇ ಕ್ಲಾಸ್ ವಿದ್ಯಾರ್ಥಿ ಶಿಕ್ಷಕನನ್ನು ಥಳಿಸಿದ್ದಾನೆ. ವಿದ್ಯಾರ್ಥಿಗೆ ಬೈಯುವ ವೇಳೆ ಶಿಕ್ಷಕ ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದರಿಂದ ವಿದ್ಯಾರ್ಥಿ ಥಳಿಸಿದ್ದಾನೆ ಎಂದು ವರದಿಯಾಗಿದ್ದು, ಘಟನೆಯ ವೀಡಿಯೋ ವೈರಲ್ ಆಗ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳ ಶಿಸ್ತು ಮತ್ತು ಪೋಷಕರ ಜವಾಬ್ದಾರಿಯ ಬಗ್ಗೆ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ಹಳೆಯ ಮಾರುತಿ 800 ಕಾರನ್ನೇ ಲ್ಯಾಂಬೋರ್ಘಿನಿಯಾಗಿ ಬದಲಾಯಿಸಿದ ಯುವಕ : ಮೆಕಾನಿಕ್ನ ಸ್ಕಿಲ್ಗೆ ಫಿದಾ ಆದ ನೆಟ್ಟಿಗರು
ವರದಿಗಳ ಪ್ರಕಾರ, ಶಾಲಯಲ್ಲಿ ದಿನನಿತ್ಯದ ಚಟುವಟಿಕೆಯ ಸಮಯದಲ್ಲಿ ಶಿಕ್ಷಕರು ವಿದ್ಯಾರ್ಥಿಯನ್ನು ಗದರಿಸಿದಾಗ ವಾಗ್ವಾದ ಶುರುವಾಗಿದೆ. ಸಣ್ಣ ಭಿನ್ನಾಭಿಪ್ರಾಯವಾಗಿ ಪ್ರಾರಂಭವಾದದ್ದು ಶೀಘ್ರದಲ್ಲೇ ಬಿಸಿಯಾದ ವಾಗ್ವಾದಕ್ಕೆ ತಿರುಗಿತು. ವಿದ್ಯಾರ್ಥಿಯನ್ನು ಉದ್ದೇಶಿಸಿ ಶಿಕ್ಷಕರು ಆಕ್ಷೇಪಾರ್ಹ ಭಾಷೆಯನ್ನು ಬಳಸಿದ ನಂತರ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶಿಕ್ಷಕನ ಮಾತಿನಿಂದ ಕೋಪಗೊಂಡ ವಿದ್ಯಾರ್ಥಿ ನಂತರ ಶಿಕ್ಷಕನಿಗೆ ಥಳಿಸಿದ್ದಾನೆ.ಕೂಡಲೇ ಅಲ್ಲೇ ಇದ್ದ ಶಿಕ್ಷಕಿ ಹಾಗೂ ಇತರ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿ ಆ ವಿದ್ಯಾರ್ಥಿಯನ್ನು ಬಿಡಿಸಿದ್ದಾರೆ.
ಈ ಘಟನೆಯನ್ನು ಪಕ್ಕದಲ್ಲಿದ್ದವರು ರೆಕಾರ್ಡ್ ಮಾಡಿದ್ದು, ನಂತರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅನೇಕರು ವಿದ್ಯಾರ್ಥಿಯ ವರ್ತನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೋಲಾರ: ಬಂಗಾರದ ಕಿವಿಯೋಲೆಗಾಗಿ ವೃದ್ಧೆಯ ಕಿವಿಯನ್ನೇ ಕತ್ತರಿಸಿದ ಪಾಪಿಗಳು
ಈ ರೀತಿಯ ನಡವಳಿಕೆಯು ಆತನ ತಪ್ಪನೇ ತಿದ್ದದೇ ಬೇಕಾಬಿಟ್ಟಿಯಾಗಿ ಬೆಳೆಸಿದರ ಪರಿಣಾಮವಾಗಿದೆ. ಪೋಷಕರು ಪ್ರಾಥಮಿಕ ಹಂತದಿಂದಲೂ ಮಕ್ಕಳ ನಡವಳಿಕೆಯನ್ನು ಗಮನಿಸುತ್ತಿರಬೇಕು. ಅವರು ಈ ನಡವಳಿಕೆಯನ್ನು ತಿದ್ದದೇ ಹೋದರೆ ಅದು ದುರಂತ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಶಾಲೆಗಳಲ್ಲಿ ಬದಲಾಗುತ್ತಿರುವ ವಾತಾವರಣದಬಗ್ಗೆ ಮತ್ತೊಬ್ಬರು ಕಳವಳ ವ್ಯಕ್ತಪಡಿಸುತ್ತಾ, ನನ್ನ ಅಣ್ಣ ಇದೇ ಶಾಲೆಯಲ್ಲಿ ತೆಲುಗು ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು. ಇದು ಭಾಷೆ ಮತ್ತು ಹಿರಿಯರನ್ನು ಗೌರವಿಸುವ ಮತ್ತು ಶಿಸ್ತನ್ನು ಹೊಂದಿದ್ದ ಶಾಲೆಯಾಗಿತ್ತು. ಆದರೆ ಈ ವೀಡಿಯೋ ನಮ್ಮ ಭವಿಷ್ಯದ ಪೀಳಿಗೆ ಏನಾಗಲಿದೆ ಎಂಬುದನ್ನು ತೋರಿಸುತ್ತದೆ. ನಾವು ಎಂದಿಗೂ ಅಭಿವೃದ್ಧಿ ಹೊಂದುತ್ತೇವೆ ಎಂದು ನನಗೆ ಅನಿಸುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ವಿದ್ಯೆ ಕಲಿಯಲು ವಿನಯ ಬೇಕು ಗುರುವಿನ ಕೋಪ ತಾಪಕ್ಕೆ ತುತ್ತಾದವನು ಎಂದು ಬದುಕಿನಲ್ಲಿ ಉದ್ಧಾರವಾಗುವುದಿಲ್ಲ ಎಂಬ ಮಾತಿದೆ. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ…
Scroll to load tweet…