
ಗುತ್ತಿಗೆ ಆಧಾರದಡಿ ನೀಡಿರುವ ಜಾಗದ ವಿಚಾರದಲ್ಲಿ ಈಗಾಗಲೇ ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನವೇ ಅಂತಿಮವಾಗಿದ್ದು, ಗುತ್ತಿಗೆ ಮುಂದುವರಿಯಲಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿಧಾನಸಭೆ (ಮಾ.13): ನಗರದ ಬಸವನಗುಡಿಯ ಎನ್.ಆರ್. ಕಾಲೋನಿಯಲ್ಲಿರುವ ಸುಬ್ರಮಣ್ಯ ಮಠಕ್ಕೆ ಗುತ್ತಿಗೆ ಆಧಾರದಡಿ ನೀಡಿರುವ ಜಾಗದ ವಿಚಾರದಲ್ಲಿ ಈಗಾಗಲೇ ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನವೇ ಅಂತಿಮವಾಗಿದ್ದು, ಗುತ್ತಿಗೆ ಮುಂದುವರಿಯಲಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಗಮನ ಸೆಳೆಯುವ ಸೂಚನೆಯಡಿ ಬಿಜೆಪಿ ಸದಸ್ಯ ರವಿ ಸುಬ್ರಮಣ್ಯ ಈ ವಿಚಾರ ಪ್ರಸ್ತಾಪಿಸಿ, ಮುಜರಾಯಿ ಇಲಾಖೆಯಿಂದ ಸುಬ್ರಮಣ್ಯ ಮಠಕ್ಕೆ ಮಂಜೂರು ಮಾಡಲಾದ ನಿವೇಶನದ ಗುತ್ತಿಗೆ ಅವಧಿ ಮುಗಿಯುವ ಇಲಾಖೆ ಹೆಚ್ಚಿನ ಬಾಡಿಗೆ ಇಟ್ಟಿದ್ದು, ಗುತ್ತಿಗೆ ಮೊಟಕುಗೊಳಿಸುವುದಾಗಿ ಹಲವು ನೋಟಿಸ್ ಕೊಟ್ಟಿದ್ದಾರೆ ಎಂದು ಗಮನಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮಠಕ್ಕೆ ಮಂಜೂರು ಮಾಡಿರುವ 7,916 ಚದರ ಅಡಿ ಜಾಗದ ವಿಚಾರ ಸಂಬಂಧ 2011-12ನೇ ಸಾಲಿನ ಮಹಾಲೇಖಪಾಲರ ವರದಿಯಲ್ಲಿ ಈ ಹಿಂದೆ ಪ್ರತಿ ಚದರಡಿಗೆ 1 ರು. ಬಾಡಿಗೆಯನ್ನು ಪರಿಷ್ಕರಿಸಿ, 10 ರು. ನಿಗದಿಪಡಿಸಬೇಕು. ಅದರಂತೆ ಮಠದಿಂದ 2.56 ಕೋಟಿ ರು. ನಷ್ಟ ವಸೂಲು ಮಾಡುವಂತೆ ಹೇಳಲಾಗಿತ್ತು. ಅದರಂತೆ ಇಲಾಖೆ ಆಯುಕ್ತರು ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳುವಂತೆ ನೋಟಿಸ್ ನೀಡಿದ್ದಾರೆ ಎಂದರು.
ಗುತ್ತಿಗೆ ಅವಧಿ ಅಂತ್ಯ
ಆಗ ರವಿ ಸುಬ್ರಮಣ್ಯ, ಮಠಕ್ಕೆ 30 ವರ್ಷಗಳ ಅವಧಿಗೆ ಜಾಗ ಗುತ್ತಿಗೆ ನೀಡಲಾಗಿದೆ. 2037ರ ನವೆಂಬರ್ಗೆ ಗುತ್ತಿಗೆ ಅವಧಿ ಅಂತ್ಯವಾಗಲಿದೆ. ಇನ್ನು ಈ ಜಾಗಕ್ಕೆ ಯಾವುದೇ ಬಾಡಿಗೆ ಪರಿಷ್ಕರಿಸದಿರಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೀಗಿದ್ದರೂ ಸಿಎಜಿ ವರದಿ ಆಕ್ಷೇಪಣೆ ಆಧರಿಸಿ ಇಲಾಖೆ ಆಯುಕ್ತರು ನೋಟಿಸ್ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಬಿಜೆಪಿ ಸದಸ್ಯ ವಿ. ಸುನೀಲ್ ಕುಮಾರ್, ಸಚಿವ ಸಂಪುಟ ಸಭೆ ತೀರ್ಮಾನ ಅಂತಿಮ. ಆದರೂ ಇಲಾಖೆ ಅಧಿಕಾರಿಗಳು ಸಿಎಜಿ ವರದಿ ಉಲ್ಲೇಖಿಸಿ ಮಠಕ್ಕೆ ನೋಟಿಸ್ ನೀಡಿದ್ದಾರೆ. ಆಯುಕ್ತರು ಸಚಿವ ಸಂಪುಟಕ್ಕಿಂತ ದೊಡ್ಡವರೇ?. ಸಮಾಜಕ್ಕೆ ತಪ್ಪು ಸಂದೇಶ ಹೋಗುವುದು ಬೇಡ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾ ರೆಡ್ಡಿ, ಸಚಿವ ಸಂಪುಟದ ತೀರ್ಮಾನವೇ ಅಂತಿಮ. ಜಾಗ ಗುತ್ತಿಗೆ ಮುಂದುವರೆಲಿದೆ. ಈಗಾಲೇ ಶಾಸಕರ ರವಿ ಸುಬ್ರಮಣ್ಯ ಅವರೊಂದಿಗೆ ಚರ್ಚಿಸಿದ್ದೇನೆ. ಎಲ್ಲರೂ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳೋಣ ಎಂದು ಹೇಳಿದರು.